ನಿಂದಕರ ದೂರ ಸರಿಸ್ಯಾನೋ
ತಂದೆ ಸಂಸ್ಕಾರಕ್ಕ ನಿಂದಕರು ಕಾಡಿದರು
ಬಂಧುಗಳು ದೂರ ಸರಿದರು । ಶರಿಫನು
ಬಂಧುರ ಮಾರ್ಗ ಬಿಡಲಿಲ್ಲ ।
ಗುರುವಿನ ಬೆನ್ನಟ್ಟಿ ಮರತಿದಿ ಕುರಾನ
ದುರುಳ ಕಾಫರನ ತಂದೆಗೆ । ನಿಜದಲ್ಲಿ
ದೊರೆಯದು ಮುಕ್ತಿ ಎಂದರು ।
ತಪ್ಪಿನ ಅರಿವಾಗಿ ಕಪ್ಪು ನಡತೆಯ ಬಿಟ್ಟು
ನೆಪ್ಪ ಹರಿದಾಕಿ ಗುರುವಿನದು । ಬಂದರೆ
ಒಪ್ಪಿ ಸಂಸ್ಕಾರ ಮಾಡುವೆವು ।
ತಪ್ಪೇನು ಮಾಡಿಲ್ಲ ಸೊಪ್ಪು ಹಾಕುವುದಿಲ್ಲ
ಒಪ್ಪಿದ ಮಾರ್ಗ ಬಿಡುದಿಲ್ಲ । ನನ್ನದು
ಕಪ್ಪು ಚುಕ್ಕೆಯ ಬದುಕಲ್ಲ ।
ನಿಜಧರ್ಮ ಸಂಸ್ಕೃತಿಯ ರುಜು ಮಾರ್ಗ ಹಿಡದೇನಿ
ಮುಜುಗರ ಪಡುವ ಮಾತಿಲ್ಲ । ನಿಂದಕರೆ
ಗಜದೂರ ಸರಿದು ನಿಲಿರೆಂದ ।
ಊರ ಮುಂದಿನ ಹೊಲಕೆ ಯಾರು ಬರುವುದು ಬೇಡ
ಮೀರಿ ನಾನೊಬ್ನೇ ಸಂಸ್ಕಾರ । ಮಾಡುವೆ
ದೂರ ಸರಿಯಿರಿ ನೀವೆಲ್ಲ ।
No comments:
Post a Comment