ನಡೆಯಲ್ಲಿ ಏಕವಾದರೋ
ನಡೆಗೆಟ್ಟ ಗುರುವಿಗೆ ನುಡಿಗೆಟ್ಟ ಶಿಷ್ಯನು
ಮಡಿಹುಡಿ ಮೀರಿ ನಿಂತಾರ । ತಿರುಗಾಡ್ತ
ದಡಸೇರೊ ದಾರಿ ತೋರ್ಯಾರ ।
ತತ್ವದ ಬೀಜಗಳ ಬಿತ್ತುತ್ತ ನಾಡಲ್ಲಿ
ಮುತ್ತಿನ ರಾಶಿ ಮಾಡಿದರು । ಗುರು ಶಿಷ್ಯ
ಬುತ್ತಿ ಹಂಚಿದರು ಲೋಕದಲಿ ।
ಹಾಕ್ಯಾಡೊ ಕುಲಮತ ಯಾಕೆಂದು ಕೇಳುತ
ತೂಕದ ಮಾತು ಸಾರಿದರು । ಗುರುಶಿಷ್ಯ
ಏಕವಾದರು ನಡೆಯಲ್ಲಿ ।
ಶರಿಫನು ಬೇಕಾದ್ರೆ ಮರಿಬೇಕು ನಮನೆಲ್ಲ
ತೊರಿಬೇಕು ನಮ್ಮ ಮನೆಯನ್ನು । ಎನ್ನುತಲೇ
ಗುರುವು ಗೋವಿಂದ ಹೊರಬಂದ ।
ಆರಿಯುವ ಶಿಷ್ಯನ್ನ ತೊರೆಯುವ ಮಾತಿಲ್ಲ
ಎರವಾಯ್ತು ಇಂದು ಮನೆಎನಗೆ । ಎನ್ನುತ್ತಾ
ಹೊರನಡೆದನಂದು ಗೋವಿಂದ ।
ತನುವಿನ ಮಡಿಗಿಂತ ಮನಸಿನ ಮಡಿಮುಖ್ಯ
ವಿನಯದ ನಡೆಯು ಅತಿಮುಖ್ಯ । ನಮ್ಮದು
ಘನತೆಯ ಮಾರ್ಗ ಅರಿಯಿರೋ ।
ಮಿಂಚಿನ ವೇಗದಿ ಸಂಚಾರ ಮಾಡುತ್ತ
ಹಂಚಿದರು ಲೋಕ ಅನುಭಾವ । ಗುರುಶಿಷ್ಯ
ಸಂಚು ತಿಳಿಲಿಲ್ಲ ಲೋಕಕ್ಕ ।
ಮೂಗ ನತ್ತನು ಮಾರಿ ಬೇಗ ಶಂಕರಿ ತಂದು
ಯೋಗಿ ಗೋವಿಂದ ಗುರುವಿಗೆ । ನೀಡಿದ
ಬಾಗುತ್ತ ಶಿಷ್ಯ ಶರಿಫನು ।
ಅಕ್ಕ ದ್ಯಾಮವ್ವನ ಚಿಕ್ಕ ಮೂರುತಿ ಸುಟ್ಟು
ನಕ್ಕೋತ ಚಳಿಯ ಕಾಸಿದರು । ಗುರುಶಿಷ್ಯ
ಮಕ್ಕಳಾಟವನೆ ಆಡಿದರು ।
ಸಿದ್ಧ ಪತ್ತರಿ ಶಂಕರಿ ಶುದ್ಧ ಮನದಲಿ ಸೇವ್ಸಿ
ಬದ್ಧ ಜೀವನವ ಮೀರಿದರೂ । ಇಬ್ಬರು
ಚೋದ್ಯ ಉಣಿಸಿದರು ಲೋಕಕ್ಕೆ ।
ಹೆಂಡಕುಡುಕರು ಎಂದು ಪುಂಡ ಪೋಕರಿ ಎಂದು
ಕಂದಂಗ ಬೈದು ಇಬ್ಬರನು । ಕೊನೆತನಕ
ಕಂಡರಿಯಲಿಲ್ಲ ನಿಜರೂಪ
ಲೋಕ ನಿಂದಿಸಿದಾಗ ಹಾಕಿದ ಜನಿವಾರ
ನೂಕಿ ಕುಲಜಾತಿ ದೂರಕ್ಕೆ । ಗೋವಿಂದ
ನ ಕವನೆ ಕೊಟ್ಟ ಶರಿಫನಿಗೆ ।
No comments:
Post a Comment