ವಿದ್ಯೆ ಸಾಗರವ ಈಜ್ಯಾನೊ
ಹಜರತ ಇಮಾಮ ನಿಜಶರಣ ತಾನಾಗಿ
ತಜವಿಜಿ ಮಾಡಿ ಕಲಿಸಿದ । ಮಗನಿಗೆ
ರುಜುಮಾರ್ಗ ವಿದ್ಯೆ ಬಿಡಲಾರದೆ ।
ಇದ್ದೂರ ಮಠದಲ್ಲಿ ಸಿದ್ಧರಾಮ ಗುರುವಲ್ಲಿ
ಉದ್ದಕ ಬಿದ್ದು ಕಲಿತಾನ । ಸಾಲಿಯ
ವಿದ್ಯೆಯಲಿ ಮುಂದೋ ನಾಕೆಜ್ಜೆ ।
ಕೂಲಿಯ ಮಠದಾಗ ಸಾಲಿಯ ಕಲಿಯುತ್ತ
ಗೋಲಿಯ ಆಡಿ ಬಯಲಲ್ಲಿ । ಬೆಳೆದಾನ
ಬಾಲಕ ಶರಿಫ ನಲಿದಾಡ್ತ ।
ಕೂಲಿಯ ಮಠದಲ್ಲಿ ಸಾಲಿಯ ಕಲಿವಂಥ
ಬಾಲಕ ನಮ್ಮ ಶರಿಫನು । ಗುರುವಿನಲ್ಲಿ
ಮೇಲಾದ ಭಕ್ತಿ ಇಟ್ಟವನು ।
ಆಟ ಬಯಲಾಟಗಳು ಚೂಟಿಯ ಮನಸಿನಲಿ
ನಾಟಿಬಿಟ್ಟವ ಶಾಶ್ವತ । ಶರಿಫನಿಗೆ
ಸಾಟಿಯಾರಿಲ್ಲ ನಾಡಿನಲ್ಲಿ ।
ಭಜನೆಯ ಪದಗಳನು ಮಜಲಿನ ಹೆಜ್ಜೆಯನು
ನಜರಿಟ್ಟು ಕಲಿವ ಬಾಲಕನ ।ಜಾಣ್ಮೆಯ
ನಿಜಶಕ್ತಿ ತುಂಬಿ ಹರಿಯಿತು ।
ಸಾಲಿಯ ಕಲಿಯುತ್ತ ಕಾಲಕ್ಕೆ ಒಲಿಯುತ್ತ
ಮೇಲಾದ ವಿದ್ಯೆ ಓದಿದ । ಶರಿಫನು
ಕೂಲಿಮಠದಲ್ಲಿ ನಲಿಯುತ್ತ
ಆಲಾಯಿ ಹಾಡುಗಳು ಕೋಲಾಟ ಕುಣಿತಗಳು
ಮೇಲಾದ ಆಟ ಬಯಲಾಟ | ಮಜಲುಗಳು
ಸಾಲು ಹಚ್ಚಿದವು ಶರಿಫನಲಿ |
ಗಜ್ಜುಗ ಗೋಲಿಯಲಿ ಗೆಜ್ಜೆ ಕುಣಿದಾಟದಲಿ
ಸಜ್ಜಾಗಿ ನಿಂತ ಬಾಲಕ | ಶರಿಫನ
ಬಿಜ್ಜೆಗೆ ಯಾರು ಸಮನಿಲ್ಲ |
ಲಾವನೀಯ ಪದಗಳನು ಹ್ಯಾವದ ಮೇಲ್ಕಟ್ಟಿ
ಸಾವಿರದ ಅರ್ಥ ಹೇಳಿದ | ಶರಿಫನ
ದೈವವೇ ಮೆಚ್ಚಿ ಹೊಗಳುವದು |
ಕೋಲಾಟ ಬಯಲಾಟಕ ಮೇಲಾದ ಹಿರಿಯನು
ಕಾಲಲ್ಲಿ ಗೆಜ್ಜೆ ಕಟ್ಟುತ್ತ | ಶರಿಫನು
ಸೋಲದೆ ಗೆಲ್ಲುವನಾಟದಲಿ |
No comments:
Post a Comment