ಶಿಷ್ಯ ಬಳಗದ ಪಡೆ ನೋಡು
ಮಂಡಿಗನಾಳ ಪ್ರಚಂಡ ಗುರುಪಾದನು
ಉಂಡುಟ್ಟ ಶರಿಫ ಪದಗಳನು | ಶಿಷ್ಯರ
ದಂಡು ಕಟ್ಟಿದ ನಾಡಾಗ |
ಜಾತಿಗಾರ ದೇವೇಂದ್ರ ಜಾತ ಗುರುಪಾದನಲಿ
ಓಟು ಹಾಡುಗಳ ಕಲಿತಾನ | ಶರಿಫ
ಜ್ಯೋತಿಯ ಬೆಳಕು ಹರಡ್ಯಾನ |
ಹರಕೂನಿ ಯಲ್ಲಪ್ಪಗ ಸರದಾರ ದೇವೇಂದ್ರ
ಗುರುವಾಗಿ ದೊರೆತ ಸ್ನುಗಾಲ | ಶರಿಫನ
ಅರಿವಿನ ಪದವ ಹಾಡಿಸಿದ |
ಗುರುಪಾದ ದೇವೇಂದ್ರ ಹರಕೂನಿ ಎಲ್ಲಪ್ಪ
ಅರ್ಜುನ ಸೇರಿ ಶರಿಫರ | ಪದಗಳನು
ಹರವಿ ಬಿಟ್ಟಾರೊ ನಾಡಾಗ |
ಕಡದಳ್ಳಿ ಅರ್ಜುನಗ ನುಡಿರೂಪದಾಡನ್ನು
ಇಡಿಯಾಗಿ ಕಲಿಸಿ ಹರಕೂಣಿ | ಯಲ್ಲಪ್ಪ
ಮುಡಿಗೆ ಏರಿಸಿದ ಕರುಣೆಯಲಿ |
ಶರಿಫನ ಪದಗಳನು ಉರದಲ್ಲಿ ಬಚ್ಚಿಡದೆ
ಒರೆಹಚ್ಚಿ ಹಾಡಿ ಲೋಕದಲಿ | ಹಬ್ಬಿಸಿದ
ಅರಜುನ ಮಡಿವಾಳ ನಲಿವಿಂದ |
ನೆನಪಿನ ಸಾಗರದ ಮಣಿಮುತ್ತು ರತುನಗಳ
ದಣಿವಿರದೆ ಜತನ ಮಾಡಿದ | ಅರಜುನ
ಘನವಾದ ಕಾಯಕ ನಡೆಸಿದ |
ಹಜಾರೆ ಸಾಹೇಬರು ನಜರಿಟ್ಟು ಕಲಕೊಂಡು
ವಜನಾದ ಪದವ ಹಾಡುತ್ತ | ಶರಿಫನ
ನಿಜದ ಧಾಟಿಯನು ಉಳಿಸ್ಯಾರ |
ಏಕತಾರಿ ತಂಬೂರಿ ಜೋಕಿಲಿ ಪೂಜಿಸುತ
ಚಾಕರಿ ಮಾಡೊ ಹಜರೇ | ಸಾಹೆಬರು
ಪಾಕ ಉಣಿಸುವರು ಲೋಕಕ್ಕ |
ಕಡೆಯ ಕಡದಳ್ಳಿ ಯ ಕಡಿಚುಂಗು ಅರ್ಜುನ
ಬಿಡಲಾರದ ಪದವ ಹಾಡುತ್ತ | ಶರಿಫನ
ಅಡಿಯ ಹಿಡದಾನೊ ಕಡಿತನಕ |
ಶರಿಫನ ಅನುಭಾವದ ಅರಿವಿನ ಕೂಸಾಗಿ
ಬೆರೆತು ಬಿಟ್ಟಾನೊ ತತ್ವದಲಿ | ಅರ್ಜುನ
ಶರಣ ಜೀವನವ ನಡಿಸ್ಯಾನೊ |
ಮಡಿವಾಳ ಅರ್ಜುನ ಕಡದಳ್ಳಿ ವರಪುತ್ರ
ಕಡು ಪ್ರೀತಿಯಿಂದ ಶರಿಫನ | ಹಾಡನ್ನು
ಮುಡಿಗೇರಿಸಿಕೊಂಡ ಅನುಗಾಲ |
No comments:
Post a Comment