ಕವಿರತ್ನ
ಮುದ್ರೆಯ ಒಡೆದು ಬಳಸಿಬಿಟ್ಟನು
ಸರಸ್ವತಿ ಶಬ್ದ ಭಂಡಾರ !
ಸಿಡಿಲ ಶಕ್ತಿಯ ಸತ್ವವ ತುಂಬುತ
ಕಾವ್ಯ ಕಟ್ಟಿದ ಭರಪೂರ !
ಆದಿಶೇಷನ ಹೆಡೆಯ ರತ್ನವು
ಗದಾಯುದ್ಧ ಕೃತಿಯನ್ನ !
ಪರಿಕಿಪರಾರು ಎಂಟೆದೆ ಬಂಟರು
ಸವಾಲು ಹಾಕಿದ ಕವಿರನ್ನ !
ಜಲಮಂತ್ರವನು ಉಪದೇಶಿಸಿದ
ಇಚ್ಛಾಮರಣಿ ಕಲಿಭೀಷ್ಮ !
ಹಿಂದಡಿಯಿಟ್ಟು ಕೊಳದಲಿ ಅಡಗಿದ
ಬರಲಿ ಎಂದು ಬಲರಾಮ !
ಸಿಂಹ ಗರ್ಜನೆ ಮಾಡುತ ಗುಡುಗಿದ
ಭೀಕರ ಕಾಲ ಭೈರವನು !
ನೀರಲ್ಲಿದ್ದರೂ ಬೆವೆತು ಹೋದನು
ಕುರುಯುವರಾಜ ಕೌರವನು !
ದುಶ್ಶಾಸನನೆದೆ ರಕ್ತವ ಲೇಪಿಸಿ
ಸಿರಿಮುಡಿ ಕಟ್ಟಿದ ಕಲಿಭೀಮ !
ದ್ರೌಪದಿ ಸೇಡಿಗೆ ದುರ್ಯೋಧನನ
ತೊಡೆಗಳ ಮುರಿದ ಉದ್ದಾಮ !
೯-೨-೨೦೨೦
No comments:
Post a Comment