Thursday, May 28, 2020

ಬೆರೆಸಲು ತಣ್ಣೀರ್ ಎಲ್ಲಿ - ೮

ಬೆರೆಸಲು ತಣ್ಣೀರ್ ಎಲ್ಲಿ !

ಅಭಿನವ ಪಂಪ ಕವಿಯು ಬರೆದ
ರಾಮಚಂದ್ರ ಚರಿತ !
ಹೃದಯ ತೆರೆದು ಓದಲು ಸಾಕು
ಅರಿವೆವು ಕಾವ್ಯದದ್ಭುತ !

ಚಳನಯನದ ಸೀತೆಯ ಚಲುವಿಗೆ 
ಲಂಕೆಯ ರಾವಣ ಸೋತ !
ಕಮಲ ದಳದ ನೀರ್ ಹನಿಯಂತೆ
ಚಂಚಲವಾಯಿತು ಚಿತ್ತ !

ಸಾಗರ ಜಲವೆ ಬಿಸಿಬಿಸಿಯಾದರೆ
ಬೆರೆಸಲು ತಣ್ಣೀರ್ ಎಲ್ಲಿ !
ದಾರಿ ತಪ್ಪಿದ ರಾಜಗೆ ಬುದ್ಧಿಯ
ಹೇಳುವರಾರು ಅಲ್ಲಿ !

ಕದಡಿದ ನೀರು ತಿಳಿಯಾಗುವುದು
ಪ್ರಕೃತಿ ಸಹಜ ಲೀಲೆ !
ರಾವಣ ಮನಸು ನಿರ್ಮಲವಾಯಿತು
ಕಾಲ ಮುಗಿದ ಮೇಲೆ !

ರಾಮನ ಗೆದ್ದು ಸೀತಾ ದೇವಿಯ
ಕಾಣಿಕೆ ಕೊಡಬೇಕೆಂದ !
ದೈವ ಲೀಲೆ ಸಮರದಿ ಸೋತು
ಮರಣದ ಗತಿಗೆ ಸಂದ !

***
೨೩-೦೫-೨೦೨೦

No comments: