ಮಾತು ಜ್ಯೋತಿರ್ಲಿಂಗ
ಕೊಟ್ಟ ಕುದುರೆಯನೇರಿ ಪಳಗಿಸಿ
ಬಟ್ಟ ಬಯಲನೆ ಗಳಿಸಿದ !
ಮಾತು ಜ್ಯೋತಿರ್ಲಿಂಗವಾಗಿಸಿ
ಮನದ ಮೈಲಿಗೆ ಅಳಿಸಿದ !
ಕೋಗಿಲೆ ಹಾಡಿಗೆ ಬೆರಗನು ನೀಡಿತು
ತಳಿತ ಚಿಗುರಿನ ಮಾಮರ !
ಬೆಟ್ಟ ನೆಲ್ಲಿಗೆ ಉಪ್ಪು ಬೆರೆಯಿತು
ಅಮಿತ ಸವಿರುಚಿ ಸಾಗರ !
ತನುವ ಏರಿಗೆ ಮನವ ಕಟ್ಟುತ
ಪರಮ ಜಲವನು ತುಂಬಿದ !
ಕಂಬ ಕರಗುವ ಹಂಸ ಹಾರುವ
ಜೀವದೊಗಟನು ಬಿಡಿಸಿದ !
ತೋಟದಾಳದ ಬೇರು ಅಗಿಯಲು
ಮನವ ಗುದ್ದಲಿ ಮಾಡಿದ !
ಬೆಳಕು ಕತ್ತಲೆ ಆನೆ ಸಿಂಹದ
ಬೆಡಗು ಬಿಡಿಸಿ ತೋರಿದ !
ಶರಣ ಸಂಗನ ಬಸವ ಕಟ್ಟಿದ
ಶೂನ್ಯ ಪೀಠವ ಏರಿದ !
ಶಬ್ದ ಸೀಮೆಯ ದಾಟಿ ನಡೆಯುತ
ಗುಹೆಯ ಈಶನ ಸೇರಿದ !
ಚಂದ್ರಗೌಡ ಕುಲಕರ್ಣಿ
೧೮-೦೫-೨೦೨೦
No comments:
Post a Comment