Wednesday, May 27, 2020

ಮಾತು ಜ್ಯೋತಿರ್ಲಿಂಗ - ೧೦

ಮಾತು ಜ್ಯೋತಿರ್ಲಿಂಗ

ಕೊಟ್ಟ ಕುದುರೆಯನೇರಿ ಪಳಗಿಸಿ
ಬಟ್ಟ ಬಯಲನೆ ಗಳಿಸಿದ !
ಮಾತು ಜ್ಯೋತಿರ್ಲಿಂಗವಾಗಿಸಿ
ಮನದ ಮೈಲಿಗೆ ಅಳಿಸಿದ !

ಕೋಗಿಲೆ ಹಾಡಿಗೆ ಬೆರಗನು ನೀಡಿತು 
ತಳಿತ ಚಿಗುರಿನ ಮಾಮರ !
ಬೆಟ್ಟ ನೆಲ್ಲಿಗೆ ಉಪ್ಪು ಬೆರೆಯಿತು
ಅಮಿತ ಸವಿರುಚಿ ಸಾಗರ !

ತನುವ ಏರಿಗೆ ಮನವ ಕಟ್ಟುತ
ಪರಮ ಜಲವನು ತುಂಬಿದ !
ಕಂಬ ಕರಗುವ ಹಂಸ ಹಾರುವ
ಜೀವದೊಗಟನು ಬಿಡಿಸಿದ !

 ತೋಟದಾಳದ ಬೇರು ಅಗಿಯಲು
ಮನವ ಗುದ್ದಲಿ ಮಾಡಿದ !
ಬೆಳಕು ಕತ್ತಲೆ ಆನೆ ಸಿಂಹದ
ಬೆಡಗು ಬಿಡಿಸಿ ತೋರಿದ !

ಶರಣ ಸಂಗನ ಬಸವ ಕಟ್ಟಿದ
ಶೂನ್ಯ ಪೀಠವ ಏರಿದ !
ಶಬ್ದ ಸೀಮೆಯ ದಾಟಿ ನಡೆಯುತ
ಗುಹೆಯ ಈಶನ  ಸೇರಿದ !

ಚಂದ್ರಗೌಡ ಕುಲಕರ್ಣಿ
೧೮-೦೫-೨೦೨೦ 

No comments: