ಬನವಸೆ ಕೋಗಿಲೆ
ಮೊದಲ ಮಾಕವಿ ಪಂಪ ರಚಿಸಿದ
ವಿಕ್ರಮಾರ್ಜುನ ವಿಜಯವು !
ದೇಸಿ ಮಾರ್ಗದ ಕಂಪು ಹರಡಿದೆ
ಕನ್ನಡಾಂಬೆಯ ತೇಜವು !
ವ್ಯಾಸ ಭಾರತ ಶರಧಿ ಈಜುತ
ವರದ ಕಾವ್ಯವ ಕಟ್ಡಿದ !
ಮಧುರ ವಚನದಿ ಕತೆಯ ಹೇಳುತ
ರಸಿಕ ಮನವನು ತಟ್ಟಿದ !
ಮಲೆಯ ಬನವಸೆ ನಾಡ ಕೋಗಿಲೆ
ಉಲಿಯೆ ಮಾಮರ ನಂದನ !
ತ್ಯಾಗ ಭೋಗದ ಜೀವ ಜಾಲವೆ
ದುಂಬಿ ಪರಿಮಳ ಚಂದನ !
ಚಲದ ನನ್ನಿಯ ಧರ್ಮ ಸಾಹಸ
ಅಮರ ಪಾತ್ರವ ಕೆತ್ತಿದ !
ಗತದ ದ್ವಾಪರ ಯುಗದ ಕಥನಕೆ
ಚಲನ ಮುದ್ರೆಯ ಒತ್ತಿದ !
ಮನುಜ ಕುಲದ ಮಹತಿ ಸಾರಿದ
ಭೇದ ಭಾವವ ಅಳಿಸುತ !
ಅಣ್ಣ ತಮ್ಮರ ಕದನ ಹೇಳಿದ
ತಿರುಳ ಕನ್ನಡ ಬಳಸುತ !
ಚಂದ್ರಗೌಡ ಕುಲಕರ್ಣಿ
೧೮-೦೫-೨೦೨೦
No comments:
Post a Comment