Wednesday, May 27, 2020

ಬನವಸೆ ಕೋಗಿಲೆ - ೫

ಬನವಸೆ ಕೋಗಿಲೆ

ಮೊದಲ ಮಾಕವಿ ಪಂಪ ರಚಿಸಿದ
ವಿಕ್ರಮಾರ್ಜುನ ವಿಜಯವು !
ದೇಸಿ ಮಾರ್ಗದ ಕಂಪು ಹರಡಿದೆ
ಕನ್ನಡಾಂಬೆಯ ತೇಜವು !

ವ್ಯಾಸ ಭಾರತ ಶರಧಿ ಈಜುತ
ವರದ ಕಾವ್ಯವ ಕಟ್ಡಿದ !
ಮಧುರ ವಚನದಿ ಕತೆಯ ಹೇಳುತ
ರಸಿಕ ಮನವನು ತಟ್ಟಿದ !

ಮಲೆಯ ಬನವಸೆ ನಾಡ ಕೋಗಿಲೆ
ಉಲಿಯೆ ಮಾಮರ ನಂದನ !
ತ್ಯಾಗ ಭೋಗದ ಜೀವ ಜಾಲವೆ
ದುಂಬಿ ಪರಿಮಳ ಚಂದನ !

ಚಲದ ನನ್ನಿಯ ಧರ್ಮ ಸಾಹಸ
ಅಮರ ಪಾತ್ರವ ಕೆತ್ತಿದ !
ಗತದ ದ್ವಾಪರ ಯುಗದ ಕಥನಕೆ
ಚಲನ ಮುದ್ರೆಯ ಒತ್ತಿದ !

ಮನುಜ ಕುಲದ ಮಹತಿ ಸಾರಿದ
ಭೇದ ಭಾವವ ಅಳಿಸುತ !
ಅಣ್ಣ ತಮ್ಮರ ಕದನ ಹೇಳಿದ
ತಿರುಳ ಕನ್ನಡ ಬಳಸುತ !

ಚಂದ್ರಗೌಡ ಕುಲಕರ್ಣಿ
೧೮-೦೫-೨೦೨೦

No comments: