Thursday, May 28, 2020

ದೇಸಿ ನುಡಿಯ ಷಟ್ಪದಿ - ೧೫

ದೇಸಿ ನುಡಿಯ ಷಟ್ಪದಿ

ಸತ್ಯನುಡಿವ ಹರಿಶ್ಚಂದ್ರನ
ಕಾವ್ಯ ಕಟ್ಟಿದ ರಾಘವ !
ವಿಶ್ವಾಮಿತ್ರನ ಮನವ ಗೆದ್ದು
ಪಡೆದ ಉನ್ನತ ಗೌರವ !

ಹಿರಿಯ ಕಥನಕೆ ಮೊದಲು ಬಳಸಿದ
ದೇಸಿ ನುಡಿಯ ಷಟ್ಪದಿ !
ಕೇಳಿ ನಲಿವರ ಹಾಡಿ ಕುಣಿವರ
ಹೃದಯ ತಟ್ಟಿತು ತವನಿಧಿ !

ಕತೆಯ ಒಡಲಿಗೆ ಬೆಸುಗೆ ಹಾಕಿದ
ಮಾತು ಮಾತನು ಸೇರಿಸಿ !
ಹರುಷ ಪಟ್ಟನು ಹಂಪೆಯರಸಗೆ
ಕಾವ್ಯ ಕನ್ನಿಕೆ ಒಪ್ಪಿಸಿ !

ಶರಣ ಚರಿತೆಯ ರಚಿಸು ಎನ್ನುತ
ಕಟ್ಟು ಹಾಕಿದ ಹರಿಹರ !
ಸೋಮನಾಥ ಶರಭ ಚರಿತೆಯ
ಹೊನಲು ಹರಿಯಿತು ಸರಸರ !

ಸೊನ್ನಲಾಪುರ ಯೋಗಿವರ್ಯ
ಸಿದ್ಧರಾಮನ ಕಥನದಿ !
ಶರಣ ತತ್ವವು ಹರಳು ಗಟ್ಟಿದೆ
ವಚನ ಸೌರಭ ಮಥನದಿ !

ಚಂದ್ರಗೌಡ ಕುಲಕರ್ಣಿ
೧೮-೦೫-೨೦೨೦
ಸಂಜೆ ೮-೩೮

No comments: