Monday, May 16, 2016

ಹನುಮಂತನೆಂಬುದು ಘನತೆಯ ಬಿರುದಾಯ್






ಚಿತ್ರದಲಿ ಮೂಡ್ಯಾನ ಚಿತ್ತದಲಿ ನೆಲಿಸ್ಯಾನ
ಉತ್ತಮ ವೀರ ಹನುಮಂತ! ಜನರಲ್ಲಿ
ಬಿತ್ಯಾನ ನಾಡ ಪ್ರೀತಿಯನು!


ಹನುಮಂತನೆಂಬುದು ಘನತೆಯ ಬಿರುದಾಯ್ತು
ಚಣಚಣಕೆ ಉಲಿವ ಮಂತ್ರದ!  ನುಡಿಯಾಯ್ತು
ಜನತೆಯ ಎದೆಯ ದನಿಯಾಯ್ತು!


ಕೊಪ್ಪದನ ಸಾವನ್ನು
ಒಪ್ಪದು ನಿಜಮನಸು
ನೆಪ್ಪಿನ ಕೋಶ ತುಂಬಿಹುದು!  ಅನುಗಾಲ
ತುಪ್ಪದ ದೀಪ ಬೆಳಗುವುದು  !

ಹಿಮದ ಚಳಿಯಲಿ ನಡುಗಲಾರದೆ
ಕ್ಷಮತೆಯಿಂದಲಿ ಗಡಿಯ ಕಾಯುತ
ಅಮರ ಸೇವೆಯಗೈದ ವೀರಗೆ ಕೋಟಿ ವಂದನೆಯು
ತಿಮಿರ ಕೊಬ್ಬಿನ ವೈರಿ ಪಡೆಯನು
ದಮನಗೈಯಲು ಪಣವತೊಟ್ಟಾ
ಸಮರಶೂರನ ದಿವ್ಯ ತೇಜಕೆ ಕೋಟಿ ವಂದನೆಯು

ಬೆಟ್ಟದೂರಲಿ ಜನಿಸಿ ದೇಶದ
ಗಟ್ಟಿ ಸೈನಿಕ ದಳವ ಸೇರಿದ
ಜಟ್ಟಿ ವೀರನ ಪಾದಪದ್ಮಕೆ ಕೋಟಿ ವಂದನೆಯು
ಘಟ್ಟ ಹಿಮ ಚಳಿ ರಾತ್ರಿಹಗಲಲಿ
ಬಿಟ್ಟುಬಿಡದಲೆ ಗಸ್ತು ತಿರುಗಿದ
ದಿಟ್ಟ ಕೊಪ್ಪದ ಹನುಮ ನಾಯ್ಕಗೆ ಕೋಟಿ ವಂದನೆಯು
ಬೆಟದೂರ ಸಾಹಸಿ ದಿಟದ ಪರಾಕ್ರಮಿ
ಕೊಪ್ಪದ ಹನುಮಂತ !
ಸಿಯಾಚಿನ್ ಭೀಕರ ಹಿಮದಲಿ ಸಿಕ್ಕರೂ
ಉಳಿದಿದ್ದ ಜೀವಂತ!

ದೇಶಕೆ ದೇಶವೇ ಪ್ರಾರ್ಥನೆ ಮಾಡಿತು
ಹನುಮಂತನಿಗಂತ !
ಯಾಕೊ ದೇವರ ಮನಸಿಗೆ ಬರಲಿಲ್ಲ
ಮರೆಯಾದ ಧೀಮಂತ!

ಮೆಚ್ಚುಗೆ ಗೌರವ ಶ್ರದ್ಧಾಂಜಲಿಯನು
ನೀಡ್ಯಾರೊ ಎದ್ದುನಿಂತ !
ಕಣ್ಣೀರ ಮುತ್ತಿನ ಹನಿಗಳ ಪೋಣಿಸಿ
ಸಲಿಸ್ಯಾರೊ ಜನ ಶಾಂತ! 

ಹೇಳುವುದೆಂಗ ಬಂಧು ಬಳಗದ
ದುಃಖವು ಎಷ್ಟಂತ !
ಜೈ ಜವಾನ ಅಮರ ಸೈನಿಕ
ವಿರಮಿಸೊ ಚಿರಶಾಂತ!


No comments: