Saturday, August 13, 2022

ಮಕ್ಕಳ ಕವಿತೆಗಳು -೩

 ಮಕ್ಕಳ ಕವಿತೆ- ೩


೪೦ - ಚಿನ್ನದ ಕರಡು


ಗೌರಿsಶಂಕರ ಎವರೆಸ್ಟ ಶಿಖರ

ತಲೆಯಲಿ ಮೂಡಿದ ಕೋಡು !

ಸಮತೋಲನಕೆ ಹಾಗೇ ಇರಲಿ

ಹಿಮಪರ್ವತದ ಜಾಡು !


ಆಮ್ಲಜನಕದ ರಿಜರ್ವ ಬ್ಯಾಂಕು

ಅಂಡ್ಮಾನಿಕೋಬಾರ್ ಕಾಡು !

ಸಲಹುತಿಹುದು ಪ್ರತಿಫಲ ಬಯಸದೆ

ದಟ್ಟ ಮರಗಳ ಬೀಡು !


ಬಂಗಾಳ್ ಕೊಲ್ಲಿ ಅರಬ್ಬಿ ಹಿಂದೂ

ಸಾಗರ ಅಲೆಗಳ ಹಿಂಡು !

ಹಸಿವಿನ ಹೊಟ್ಟೆಯತುಂಬುತಲಿಹವು

ಜಲಚರ ಜೀವಿಯ ದಂಡು !


ವಿಂಧ್ಯ ಪರ್ವತ ಪಶ್ಚಿಮ ಘಟ್ಟ

ಸಂಜೀವಿನಿಯ ಮೇಡು !

ಕುಕಿಲಿನ ಪಕ್ಷಿ ಕೀಟಗಳೆಲ್ಲವು

ಪ್ರಕೃತಿ ಒಲುಮೆಯ ಹಾಡು !


ಒಕ್ಕಲು ಭೂಮಿಯ ಮೆಕ್ಕಲು ತಾಣಕೆ

ಹಳ್ಳ ಕೊಳ್ಳವೆ ಜೋಡು !

ಪಣತೊಟ್ಟೆಲ್ಲರು ಬೆಳೆಸಲು ಬೇಕು

ಹಸಿರಿನ ಸಂಸ್ಕೃತಿ ನಾಡು !


ಗಿಡಗಂಟಿಗಳು ಭೂಮಿತಾಯಿಯ

ಉದರದ ಚಿನ್ನದ ಕರಡು !

ಹೂವು ಹಣ್ಣು ಕಾಯಿಗಳಿರದಿರೆ

ಮನುಜನ ಬಾಳೆ ಬರಡು !


****

೪೧- ಅಜ್ಜನ ಜೊತೆಗೆ ಆಡಲು…


ಅಜ್ಜನ ಜೊತೆಗೆ ಆಡಲು ನನಗೆ

ತುಂಬಾ ಇಷ್ಟ ಅಮ್ಮ !

ಕತ್ತಲೆ ರಾತ್ರಿ ಕೋಲಿನಿಂದ

ಓಡಿಸಿ ಬಿಡುವನು ಗುಮ್ಮ!


ದೊಡ್ಡ ರುಮಾಲು ಕೈಯ ಕೋಲು

ಮೈಯಲಿ ಚಾಟಿ ಅಂಗಿ !

ಇಂದಿನ ವರೆಗೂ ಸೋತೇ ಇಲ್ಲ

ಸೆಟೆದು ನಿಲ್ಲುವ ಭಂಗಿ !


ಎಪ್ಪತ್ತಾದರು ಗಟ್ಟಿಯಾಗಿವೆ

ಬಿಳಿಯ ಹವಳದ ಹಲ್ಲು !

ಎಷ್ಟು ದುಡಿದರೂ ಮಣಿದೇ ಇಲ್ಲ

ಜೋಡಿ ಎರಡು ಕಾಲು !


ಕುರ್ಲಾನ ಗಾದಿ ದಿಂಬಿಗಿಂತ

ಮೆತ್ತಗೆ ಅಜ್ಜನ ಹೆಗಲು !

ಕೂತು ಆಟ ಆಡುವದೆಂದರೆ

ಸ್ವರ್ಗಕಿಂತ ಮಿಗಿಲು !


ಅವನ ಬಾಯಿಂದ್ ಕೇಳಬೇಕು

ರಾಜಕುವರಿಯ ಕಥನ !

ಏಳು ಮಲ್ಲಿಗೆ ತೂಕ್ದವಳಂತೆ

ಹೊಳೆವ ಹವಳ ರತ್ನ !


ಬೆವರು ಸುರಿಸಿ ದುಡಿವ ಅಜ್ಜ

ನಿಜಕೂ ನೇಗಿಲ ಯೋಗಿ !

ಬಿತ್ತಿ ಬೆಳೆವನು ದವಸ ಧಾನ್ಯ

ಕೂಡದೆ ಒಂದು ಘಳಿಗಿ !


****


೪೨- ನಾಡವರೆಲ್ಲರ ಬಿಂಬ


ಕುರುಕುಲ ರಕ್ಷಣೆ ಮಾಡಲು ನಿಂತನು

ಕುರುಪಿತಾಮಹ ಭೀಷ್ಮ !

ಕುರುಕ್ಷೇತ್ರದ ಯುದ್ಧವು ಮಾಡಿತು

ಕೌರವ ದಂಡನು ಭಸ್ಮ !


ವೀರ ಛಲದ ಸಾಹಸ ಪಾತ್ರಕೆ

ಅಘಟಿತ ಘಟನೆಯ ಹೊಡೆತ !

ಗುಣ ಅವಗುಣ ಮೀರಿದ ತತ್ವಕೆ

ಸೂತ್ರದಾರನ ಸೆಳೆತ !


ದ್ರೋಣ ಭೀಷ್ಮ ವಿದುರರ ನೀತಿಯ

ಮೀರಿ ಬೆಳೆಯಿತು ದ್ವೇಷ !

ತಡೆದ ಮಳೆಯ ಸಿಡಿಲಾರ್ಭಟಿಸಿತು

ಭಿಮಾರ್ಜುನರ ರೋಷ !


ಸರಳ ಸುಲಭದ ಮಾತು ಅಲ್ಲವು

ನ್ಯಾಯನ್ಯಾಯದ ತೂಕ !

ಕಾಲ ಚಕ್ರದ ಗತಿಮತಿಯಲ್ಲಿ

ಮುಳುಗಲೆ ಬೇಕು ಲೋಕ !


ಸೋಲು ಗೆಲುವಿನ ಗೆರೆ ಅಳುಕಿಹುದು

ಹೇಳಲುಬಾರದ ದಿಗಿಲು !

ಅಗಣಿತ ತಾರೆಯನಳೆವವರಾರು

ಅನಂತದಾಚೆಯ ಮುಗಿಲು !


ಭಾರತದೊಡಲಲಿ ಅಡಗಿ ಕುಳಿತಿವೆ

ನಾಡವರೆಲ್ಲರ ಬಿಂಬ !

ಕೂಡಿ ಕಳೆದು ಭಾಗಿಸಲಾಗದು

ಜೀವಯಾನದ ಗುಂಭ !


***







No comments: