ಮಕ್ಕಳ ಕವಿತೆ- ೩
೪೦ - ಚಿನ್ನದ ಕರಡು
ಗೌರಿsಶಂಕರ ಎವರೆಸ್ಟ ಶಿಖರ
ತಲೆಯಲಿ ಮೂಡಿದ ಕೋಡು !
ಸಮತೋಲನಕೆ ಹಾಗೇ ಇರಲಿ
ಹಿಮಪರ್ವತದ ಜಾಡು !
ಆಮ್ಲಜನಕದ ರಿಜರ್ವ ಬ್ಯಾಂಕು
ಅಂಡ್ಮಾನಿಕೋಬಾರ್ ಕಾಡು !
ಸಲಹುತಿಹುದು ಪ್ರತಿಫಲ ಬಯಸದೆ
ದಟ್ಟ ಮರಗಳ ಬೀಡು !
ಬಂಗಾಳ್ ಕೊಲ್ಲಿ ಅರಬ್ಬಿ ಹಿಂದೂ
ಸಾಗರ ಅಲೆಗಳ ಹಿಂಡು !
ಹಸಿವಿನ ಹೊಟ್ಟೆಯತುಂಬುತಲಿಹವು
ಜಲಚರ ಜೀವಿಯ ದಂಡು !
ವಿಂಧ್ಯ ಪರ್ವತ ಪಶ್ಚಿಮ ಘಟ್ಟ
ಸಂಜೀವಿನಿಯ ಮೇಡು !
ಕುಕಿಲಿನ ಪಕ್ಷಿ ಕೀಟಗಳೆಲ್ಲವು
ಪ್ರಕೃತಿ ಒಲುಮೆಯ ಹಾಡು !
ಒಕ್ಕಲು ಭೂಮಿಯ ಮೆಕ್ಕಲು ತಾಣಕೆ
ಹಳ್ಳ ಕೊಳ್ಳವೆ ಜೋಡು !
ಪಣತೊಟ್ಟೆಲ್ಲರು ಬೆಳೆಸಲು ಬೇಕು
ಹಸಿರಿನ ಸಂಸ್ಕೃತಿ ನಾಡು !
ಗಿಡಗಂಟಿಗಳು ಭೂಮಿತಾಯಿಯ
ಉದರದ ಚಿನ್ನದ ಕರಡು !
ಹೂವು ಹಣ್ಣು ಕಾಯಿಗಳಿರದಿರೆ
ಮನುಜನ ಬಾಳೆ ಬರಡು !
****
೪೧- ಅಜ್ಜನ ಜೊತೆಗೆ ಆಡಲು…
ಅಜ್ಜನ ಜೊತೆಗೆ ಆಡಲು ನನಗೆ
ತುಂಬಾ ಇಷ್ಟ ಅಮ್ಮ !
ಕತ್ತಲೆ ರಾತ್ರಿ ಕೋಲಿನಿಂದ
ಓಡಿಸಿ ಬಿಡುವನು ಗುಮ್ಮ!
ದೊಡ್ಡ ರುಮಾಲು ಕೈಯ ಕೋಲು
ಮೈಯಲಿ ಚಾಟಿ ಅಂಗಿ !
ಇಂದಿನ ವರೆಗೂ ಸೋತೇ ಇಲ್ಲ
ಸೆಟೆದು ನಿಲ್ಲುವ ಭಂಗಿ !
ಎಪ್ಪತ್ತಾದರು ಗಟ್ಟಿಯಾಗಿವೆ
ಬಿಳಿಯ ಹವಳದ ಹಲ್ಲು !
ಎಷ್ಟು ದುಡಿದರೂ ಮಣಿದೇ ಇಲ್ಲ
ಜೋಡಿ ಎರಡು ಕಾಲು !
ಕುರ್ಲಾನ ಗಾದಿ ದಿಂಬಿಗಿಂತ
ಮೆತ್ತಗೆ ಅಜ್ಜನ ಹೆಗಲು !
ಕೂತು ಆಟ ಆಡುವದೆಂದರೆ
ಸ್ವರ್ಗಕಿಂತ ಮಿಗಿಲು !
ಅವನ ಬಾಯಿಂದ್ ಕೇಳಬೇಕು
ರಾಜಕುವರಿಯ ಕಥನ !
ಏಳು ಮಲ್ಲಿಗೆ ತೂಕ್ದವಳಂತೆ
ಹೊಳೆವ ಹವಳ ರತ್ನ !
ಬೆವರು ಸುರಿಸಿ ದುಡಿವ ಅಜ್ಜ
ನಿಜಕೂ ನೇಗಿಲ ಯೋಗಿ !
ಬಿತ್ತಿ ಬೆಳೆವನು ದವಸ ಧಾನ್ಯ
ಕೂಡದೆ ಒಂದು ಘಳಿಗಿ !
****
೪೨- ನಾಡವರೆಲ್ಲರ ಬಿಂಬ
ಕುರುಕುಲ ರಕ್ಷಣೆ ಮಾಡಲು ನಿಂತನು
ಕುರುಪಿತಾಮಹ ಭೀಷ್ಮ !
ಕುರುಕ್ಷೇತ್ರದ ಯುದ್ಧವು ಮಾಡಿತು
ಕೌರವ ದಂಡನು ಭಸ್ಮ !
ವೀರ ಛಲದ ಸಾಹಸ ಪಾತ್ರಕೆ
ಅಘಟಿತ ಘಟನೆಯ ಹೊಡೆತ !
ಗುಣ ಅವಗುಣ ಮೀರಿದ ತತ್ವಕೆ
ಸೂತ್ರದಾರನ ಸೆಳೆತ !
ದ್ರೋಣ ಭೀಷ್ಮ ವಿದುರರ ನೀತಿಯ
ಮೀರಿ ಬೆಳೆಯಿತು ದ್ವೇಷ !
ತಡೆದ ಮಳೆಯ ಸಿಡಿಲಾರ್ಭಟಿಸಿತು
ಭಿಮಾರ್ಜುನರ ರೋಷ !
ಸರಳ ಸುಲಭದ ಮಾತು ಅಲ್ಲವು
ನ್ಯಾಯನ್ಯಾಯದ ತೂಕ !
ಕಾಲ ಚಕ್ರದ ಗತಿಮತಿಯಲ್ಲಿ
ಮುಳುಗಲೆ ಬೇಕು ಲೋಕ !
ಸೋಲು ಗೆಲುವಿನ ಗೆರೆ ಅಳುಕಿಹುದು
ಹೇಳಲುಬಾರದ ದಿಗಿಲು !
ಅಗಣಿತ ತಾರೆಯನಳೆವವರಾರು
ಅನಂತದಾಚೆಯ ಮುಗಿಲು !
ಭಾರತದೊಡಲಲಿ ಅಡಗಿ ಕುಳಿತಿವೆ
ನಾಡವರೆಲ್ಲರ ಬಿಂಬ !
ಕೂಡಿ ಕಳೆದು ಭಾಗಿಸಲಾಗದು
ಜೀವಯಾನದ ಗುಂಭ !
***
No comments:
Post a Comment