Saturday, August 13, 2022

ಅಲ್ಲಮ ತ್ರಿಪದಿಗಳು

 ನಡೆದ ದಾರಿಯನೆಲ್ಲ ಬಿಡಲಾರ್ದೆ ಅಳುಕಿಸಿ

ನುಡಿ ಬೆಡಗಿನ್ಹಂಗ ದೂರಿರಿಸಿ ! ಕುರುಹನ್ನೆ

ಪುಡಿಯ ಮಾಡಿದನು ಪ್ರಭುದೇವ !೧!


ಅರಿವಿನಾಳವ ತೋರಿ ಬೆರಗು ವಿಸ್ಮಯ ಸಾರಿ

ಶರಣ ಅವಧೂತ ಪ್ರಜ್ಞೆಯನು ! ಮೀರಿದವ

ಪರಮ ಜಿಜ್ಜ್ಯೋತಿ ಅಲ್ಲಮನು !೨!


ಭ್ರಮಣೆ ಭಯ ದೂರಿರಿಸಿ ಸಮಚಿತ್ತ ಅಣಿಗೊಳಿಸಿ

ಶ್ರಮಣ ಧಾರೆಗಳ ಸತ್ವವನು ! ಹೀರಿದ

ಭ್ರಮರ ಬಂಡುಣಿಗ ಅಲ್ಲಮನು !೩!


ಶಬ್ದ ಸಂಕಲೆ ಮುರಿದು ಅಬ್ಧಿ ಪಾರವ ಹರಿದು

ಸಬ್ಧವಾಗಿರುವ ಕೊಂಡಿಗಳ ! ಕಳಚಿದನು

ಲಬ್ಧ ವಿಶೇಷ ಅಲ್ಲಮನು !೪!


ಯಾರ ಶಿಷ್ಯನೂ ಅಲ್ಲ ಯಾರ ಗುರುವೂ ಅಲ್ಲ

ಯಾರ ಮನೆಮಗನು ತಾನಲ್ಲ ! ಅಲ್ಲಮ

ಮೀರಿ ನಡೆದನು ಲೋಕವನು !೫!


ಗುರುವಿನ ಹಂಗಿಲ್ದೆ ದರುಶನದ ಸಂಗಿಲ್ದೆ

ಅರಿವಿನ ಹಾದಿ ಹಿಡಿದಂಥ ! ಅಲ್ಲಮಗೆ

ಚರಣವಾಗಿಹವು ಮೈಯಲ್ಲ !೬!


***


ಕಲ್ಪಿತದ ಸಂಕಟಕೆ ಎಲ್ಲಿ ಪರಿಹಾರಿಹುದು

ಸಲ್ಲದು ನಿಜದ ಉಪಚಾರ ! ಎನ್ನುತ್ತ

ಇಲ್ಲವಾಗಿಸಿ ಮನವನ್ನು !೭!


ಸುಮ್ಮನಿರಿ ಎಂದೆನಲು ಹೆಮ್ಮೆ ನುಡಿ ಬಳಸುವುದೆ

ಸುಮ್ಮನಿರಿಸುವುದು ಸುಲಭಲ್ಲ ! ಭಾಷೆಗಳ

ಗಮ್ಮನನು ಅಳಿಸಿ ಹಾಕದಲೆ !೮!


ಸಂಕೇತ ಕುರುಹುಗಳ ಬಿಂಕತನ ಕಳಿಬೇಕು

ಸುಂಕದ ಭಾರ ಇಳುಬೇಕು ! ಬಂಧನದ

ಸೋಂಕಳಿದು ನಿಜವ ತಿಳಿಬೇಕು !೯!


ಶಬ್ದ ಮುಗ್ಧದಿ ಬೆರೆತು ಸ್ತಬ್ಧವಾಗಲುಬೇಕು

ಅಬ್ಧಿ ನೀರೆಲ್ಲ ಲಯವಾಗಿ ! ವ್ಯೋಮದಲಿ

ಲಬ್ಧವಾಗುವುದ ಅರಿಬೇಕು !೧೦!


ಬೆಂಕಿಯೊಳಗಣ ಬಿಸಿಯು ಸೋಂಕುಜಲ ಬಿಸಿಗುಂಟೆ

ಮಂಕು ಮಾತಿನಲಿ ಬಣ್ಣಿಸಲು ! ಅನುಭಾವ್ದ

ಕಂಕಿ ಒಕ್ಕಲದಿ ಸಿಲುಕುವೆವು !೧೧!


ಪರಮ ಗುರು ಅಲ್ಲಮನ ನಿರಶನದ ಮಾರ್ಗವದು

ಮುರಿದು ಕಟ್ಟುವುದ ಕಲಿಸಿತು ! ಲೋಕದ

ಮರಣ ಗೆಲುವುದನ ಅರಿಸಿತು !೧೨!


***


ಸಿದ್ಧ ಸತ್ಯವನೊಡೆದು ಇದ್ದ ಕುರುಹನು ಕೆಡೆದು

ಬದ್ಧ ಪಂಥಗಳ ನಿರ್ವಾಣ ! ಮಾಡುವುದು

ಶುದ್ಧ ಮಾರ್ಗಿಯ ಲಕ್ಷಣವು !೧೩!


ಒಂದು ಎರಡೆಂಬುದನು ಸಂದಿಲದದ್ವೈತವನು

ಗೊಂದಲದ ಬಂಧ ಸೂತ್ರವನು ! ಹಿಡಿದೆಳೆದು

ಹಿಂದೆ ಸರಿಸಿದನು ಪ್ರಭುದೇವ !೧೪!


ಆಗಿದ್ದು ಸ್ಥಾವರವು ಆಗುವುದು ಜಂಗಮವು

ಸಾಗದ ಕಾಲ ತತ್ವಗಳ ! ಪುಡಿಮಾಡಿ

ಯೋಗಿಯಾಗುವುದೆ ನಿರಶನವು !೧೫!


ಕುರುಹು ಸೃಜಿಸಿದ ಅರುಹ ಹುರಿದು ಹಾಕಲು ಬೇಕು

ಮರುಳತನದದನು ಅಳಿಬೇಕು ! ಪ್ರತಿಮೆಯ

ಪರಮತನ ಸುಟ್ಟುಬಿಡಬೇಕು !೧೬!


ಸಾವಿನೆದುರಿಸಿ ನಿಲುವ ಭಾವ ದಗ್ಧತಾ ಕ್ರಿಯೆಯು

ಸ್ವಾವಲಂಬನೆಯ ನಿಜತತ್ವ ! ಅದನರಿತು

ಭಾವಿಸೊಡಗೂಡು ತಪ್ಪದಲೆ !೧೭!


ಆರೂಢ ಸಿದ್ಧರಲಿ ಬೇರೆ ಗುರುನಾಥರಲಿ

ಸೇರಿ ಅವಧೂತ ಸೂಫಿಗಳ ! ಸಂಗದಲಿ

ಚಾರುತರದಾಟ ಆಡಿಹನು !೧೮!


***


ಉಪದೇಶವಿಲ್ಲಿಲ್ಲ ಉಪಮಾನ ಮೊದಲಿಲ್ಲ

ತಾರ್ಕಿಕದ ತತ್ವದ್ಹಂಗಿಲ್ಲ ! ಭಾಷೆಯ

ಕೀಲಿ ಕೈಗಳಿಗೆ ನಿಲುಕಲ್ಲ !೧೯!


ಒಪ್ಪಿತದ ಹುಸಿನೆಲೆಯ ನೆಪ್ಪನ್ನೆ ಅಳುಕಿಸಿ

ದಪ್ಪನೆಯ ಚಿಪ್ಪು ಕರಗಿಸಿ ! ಬೆಡಗನ್ನು

ಅಪ್ಪಿಕೊಳ್ಳುವನು ಪ್ರಭುದೇವ !೨೦!


ಆಕರದ ಮಾದರಿಯ ಚೌಕಟ್ಟು ಇಲ್ಲಿಲ್ಲ

ಲೋಕದ ಹಂಗು ಮೊದಲಿಲ್ಲ ! ಅಲ್ಲಮನ

ತೂಕದ ನಡೆಯೆ ವಿಸ್ಮಯವು !೨೧!


ಪುಸ್ತಕದಿ ದೊರೆಯದು ಮಸ್ತಕದಿ ಉಳಿಯದು

ಶಿಸ್ತು ಕಟ್ಟಳೆಗೆ ಒಲಿಯದು ! ಅಲ್ಲಮನ

ಮಿಕ್ಕು ಮೀರಿದ ಮಾರ್ಗವು !೨೨!


ಇಲ್ಲದೇ ಏನೇನು ಎಲ್ಲವೂ ಆಗುವ

ಬಲ್ಲಿತವ ಅರಿತ ನಗೆಗೇಡಿ ! ಅಲ್ಲಮನ

ಸಲ್ಲಲಿತ ಮಾರ್ಗ ಬೆಡಗಿನದು !೨೩!


ಸುಳ್ಳು ಸಂರಚನೆಗಳ ಗೊಳ್ಳುಹೊಟ್ಟನು ತೂರಿ

ಬಳ್ಳದಲಿ ಅಡಗಿ ಕುಳಿತಿರುವ ! ಬಯಲನ್ನು

ಮೆಲ್ಲುವರು ಸತ್ಯ ಮಾರ್ಗಿಗಳು !೨೪!


***


ಎಲ್ಲ ದೂರಕೆ ಸರಿಸಿ ಇಲ್ಲವಾಗುವದರಿತು

ನಿಲ್ಲಲು ಬೇಕು ಬಯಲಿನ ! ನಟ್ಟ ನಡು

ಗೆಲ್ಲಲು ಬೇಕು ಬಂಧನವ !೨೫!


ಅರಿತವಗೆ ಮಾತಿಲ್ಲ ಬರಿಮಾತಿಗರಿವಿಲ್ಲ

ಪರಮ ಯಾನಕ್ಕೆ ಆದ್ಯಂತ ! ಮೊದಲಿಲ್ಲ

ಸರಳತೆ ನಡತೆ ಸುಲಭಲ್ಲ !೨೬!


ಹಸಿವು ಆದರೆ ಮುದ್ದಿ ಬಸಿರು ತುಂಬಲು ನಿದ್ದಿ

ಬೆಸೆಯದಿರಬೇಕು ಅದನಿದನು ! ಕಾಯಕಕೆ

ಕೆಸರು ಅಂಟಿಸದೆ ನಡಿಬೇಕು !೨೭!


ಇರುವೆಯ ತೆರದಲ್ಲಿ ಮರಹತ್ತಿ ಉಣಬಹುದು

ಗರಿಹಕ್ಕಿಯಾಗಿ ನೇರಫಲ ! ಮೆಲಬಹುದು

ಹಿರಿದು ಕಿರಿ ಎಂಬುದುಲ್ಲಿಲ್ಲ !೨೮!


ಧರುಮ ಎಂಬುದು ಹೂವು ಸರುವರಿಗೆ ದಕ್ಕುವುದು

ಪರಮ ಪಕೃತಿಯ ಕೊಡುಗೆಯು ! ಮರೆಯದು

ಅರಳಿ ನಗುವುದನು ಎಂದೆಂದು !೨೯!


ಗುರಿಯ ತೋರುವ ಗುರುವು ಬರಲಾರ ನಮ್ಮೊಡನೆ

ಇರಲಾರ ಕಟ್ಟ ಕಡೆತನಕ ! ಅವರವರೆ

ಸರಿದಾರಿ ಕಂಡು ನಡಿಬೇಕು !೩೦!


***


ತೋರು ಬೆರಳದು ಮಾತ್ರ ದಾರಿಯನು ತೋರದು

ಮೇರು ಗುರಿಯನ್ನು ತೋರುವುದು ! ಅದನರಿತು

ದಾರಿಯನು ಕಂಡುಕೊಳಬೇಕು !೩೧!


ಹರಿವ ಹೊನಲನು ತಡೆವ ದುರಿತ ಭಾಷೆಯ ತೊಡೆದು

ಗುರಿಯೆಡೆಗೆ ಹೆಜ್ಜೆ ಇಡಬೇಕು ! ನುಡಿಜಾಣ್ಮೆ

ಮರಣದ ಗಂಟೆ ಮಾರ್ಗಿಗೆ !೩೨!


ಭಾಷೆಯಲಿ ಸಿಗುತಿರುವ ಕೋಶಕೋಟಿಯ ಶಬ್ದ

ಖಾಸದನುಭವಕೆ ಅಡ್ಡಿಯು ! ಇದು ಸತ್ಯ

ಮೋಸದಾಟವನು ಅರಿಬಲ್ಲ !೩೩!


ಚಂದದ ಕಲ್ಪನೆಯ ಬಂಧನಕೆ ಸಿಲುಕಿಹೆವು

ಕುಂದಿಸುತ ಗಾಢ ಗ್ರಹಿಕೆಯನು ! ಕಳಚುತ್ತ

ಮುಂದೆ ಸಾಗುವುದು ಉಚಿತವು !೩೪!


ಅಕ್ಕರವ ಕಲಿತವನು ಉಕ್ಕಿನಲಿ ಮೆರೆಯುವನು

ಲೆಕ್ಕ ಮೀರಿದ ವಾದದಲಿ ! ಮುಳುಗುವನು

ಸಕ್ಕರೆಯ ಸವಿಯುಣದೆ ಹೋಗುವನು !೩೫!


ಆದುದರ ಚರಿತೆಯ ವಾದದಲಿ ಸಿಕ್ಕವನು

ಸಾಧಿಸುವ ಆಗು ಮರೆಯುವನು ! ಅವನಿಗೆ

ಬೋಧನೆಯ ಹುಚ್ಚು ಅನುಗಾಲ !೩೬!


***


ನೋವು ನಲಿವೆಂದರಿವ ಭಾವ ದಗ್ಧವ ಮಾಡಿ

ಹೂವು ಸಹಜದಲಿ ತಂತಾನೆ ! ಅರಳುವ

ಜೀವ ನಡೆಮಾರ್ಗ ನಿಜಬಯಲು !೩೭!


ಬಾಟಲಿಯ ಒಳಗಿನ ಬಾತುಕೋಳಿಯ ಹಿಡಿದು

ದಾಟಿಸಲು ಬೇಕು ಸಾಯಿಸದೆ ! ಬಾಟಲಿಯ

ಮಾಟ ಒಡೆಯದೆ ಜಾಣ್ಮೆಯಲಿ !೩೮!


ಬಾಟಲಿಯ ಒಳಗೆ ತಾ ಬಾತುಕೋಳಿಯ ಇರಿಸಿ

ಕೂತು ಕೊಂಡಿರುವ ಮನಸು ಪರಿ ! ಹರಿಯದೆ

ಬಾತು ತಾ ಹೊರಗೆ ಬರಲಾರ್ದು !೩೯!


ಹೇಳೊ ಸಂಗತಿಯಲ್ಲ ಕೇಳುಮಾತದು ಅಲ್ಲ

ಹೇಳು ಕೇಳಿಕೆಯ ಗಡಿದಾಟಿ ! ಅನುಭವದ

ಆಳಕಿಳಿಬೇಕು ಸಹಜದಲಿ !೪೦!


ತುದಿಯೆರಡು ಇಲ್ಲದ ಮಧ್ಯಮವ ಹಿಡಿದವನು

ಸುಧೆಯ ಸವಿರುಚಿಯ ಮೀಯುವನು ! ಬಂಧನದ

ಕುದಿಯನ್ನು ಅಳಿಸಿ ಹಾಕುವನು !೪೧!


ಏನೇನು ಇಲ್ಲದ ಧ್ಯಾನದ ನಿಜ ನೆಲೆಯು

ಮೌನದ ಸೀಮೆ ಮೀರುವುದು ! ಇದ್ದುದನು

ಕಾಣದೂರಿಗೆ ತಳ್ಳುವುದು ! ೪೨!


***


ಯಾವ ಯೋಚನೆ ಚೂರು ಭಾವದಲಿ ಇರಬಾರ್ದು

ಗಾವುದ ದೂರಕೆ ಎಸೆಬೇಕು ! ಚಣಚಣಕು

ದೇವ ಯೋಜಕನ ನೆನೆಬೇಕು !೪೩!


ಇಲ್ಲವೆನುವುದು ದೂರ ಬಲ್ಲೆವೆನುವುದು ಭಾರ

ಸಲ್ಲ ಇವು ಎರಡು ಪಥಿಕನಿಗೆ ! ಹೊರಬಾರ್ದು

ಖುಲ್ಲತನ ಹೆರುವ ಚರಿತೆಯನು !೪೪!


ಎಲ್ಲವನು ಕಳಚಿಟ್ಟು ಇಲ್ಲದವನಾಗುವುದು

ಸಲ್ಲದದು ಬುದ್ಧಿ ಸಂಚಯಕೆ ! ಅದಕಾಗಿ

ಗುಲ್ಲು ಮಾಡದಲೆ ನಡೆಮುಂದೆ !೪೫!


ಹುಟ್ಟಿಲ್ಲದಲ್ಲಮನ ಕಟ್ಟಿಬಂಧಿಸ ಬಹುದೆ

ಮುಟ್ಟವು ಶಬ್ದ ಬಯಲಿಗನ ! ಸೂತಕವು

ತಟ್ಟುವುದು ಅರ್ಥ ಭಾವಕ್ಕೆ !೪೬!


ದೇವನು ಅವನಲ್ಲ ದೇವಸುತ ತಾನಲ್ಲ

ದೇವದೂತನೂ ಮೊದಲಲ್ಲ ! ಪಾಮರನು

ಭಾವ ನಿರ್ವಾಣ ಸಾಧಕನು !೪೭!


ನುಡಿಯ ರೂಪಕದಡಿ ನಡೆಗೆ ಹೊಸತನ ತರಲು

ಬೆಡಗಿನ ಭಾಷೆ ಬಳಸಿದರು ! ಮಾರ್ಗಿಗರು

ದೃಢದಿ ತತ್ವವನು ಸಾರಿದರು !೪೮!


ಬೆಡಗಿನ ಭಾಷೆಯಲಿ ಬೆಡಗು ತಾ ಹುಟ್ಟುವುದು

ಬೆಳಕಿನ ಕಿರಣ ಹರಡುವುದು ! ಲೋಕದ

ಒಳಗಣ್ಣ ಪೊರೆಯ ಕಳಚುವುದು !೪೯!


ಸೃಷ್ಟಿವಾದವು ಇಲ್ಲ ದೃಷ್ಟಿವಾದವು ಇಲ್ಲ

ಪುಷ್ಟಿ ಅವಲಂಬಿ ಮೊದಲಿಲ್ಲ ! ಅಲ್ಲಮನ

ದೃಷ್ಟ ವಚನಗಳ ಒಡಲಲ್ಲಿ ! ೫೦!


ಧ್ಯಾನ ಸೂತಕವುಂಟು ಮೌನ ಸೂತಕವುಂಟು

ಗಾನ ಸಂಗೀತದೊಳಗುಂಟು ! ಲಿಂಗದಲಿ

ನ್ಯೂನವಾಗುವುದು ಸೂತಕವು ! ೫೧!



***"

ಸರಹಪಾದ


ತೆರವು ಇದ್ದರೆ ಮನದಿ ಅರಿವು ಒಳಸೇರುವುದು

ಗುರುವಿನ ಕರುಣೆ ದೊರೆಯುವುದು ! ಜೀವನದಿ

ಸರಹನ ದೋಹೆ ಯಾನದಲಿ !೧!


ಸಹಜಯಾನದ ನೆಲೆಯ ಮಹಿಮೆಯನು ಅರುಹುತ್ತ

ಇಹದ ಪರಿಮಳವ ಸಾರಿದನು ! ಮಾದರಿಯ

ಚಹರೆ ಚಿತ್ತಾರ ಕದಡಿದನು !೨!


ಪರಲೋಕ ಮೋಹವನು ಹರಿಗಡಿದು ಲೌಕಿಕದ

ಪರಮ ಮೌಲ್ಯವನು ತೋರಿದ ! ಮಾಸಿದ್ಧ

ಸರಹಪಾದನನು ನೆನಿಬೇಕು !೩!


ಬಾಣವೆಸೆದಾ ರಮಣಿ ಜ್ಞಾನ ಚಿಂತನ ಗುರುವು

ಧ್ಯಾನಿಸಿದ ಕ್ರಿಯೆಯ ಅರ್ಥವನು ! ಮಾಸಿದ್ಧ

ಪೋಣಿಸಿದ ಎರಡು ಪಾದದಲಿ !೪!


ಇದ್ದ ಜಗದರಿವನ್ನು ಶುದ್ಧ ರೂಪದಿ ಪಡೆದು

ಮದ್ದು ಕಂಡನು ಸಹಜದಲಿ ! ಸರಹನು

ಸಿದ್ಧರ ಸಿದ್ಧ ನಾಗಿಹನು !೫!


ಬಾಣಗಾತಿಯ ಕೈಯ ಜಾಣಸರಹನು ಹಿಡಿದು

ಜ್ಞಾನ ಗಂಗೆಯಲಿ ಮಿಂದನು ! ಅನುಭವದ

ಘನತೇಜ ಕಿರಣ ಹರಡಿದನು !೬!


ಸಬಳಶರ ಕೆತ್ತುವ ಶಬರ ಕನ್ಯೆಯ ಕಂಡು

ಚಬಕ ತಂತ್ರವನು ಅರಿತಂತ ! ಸರಹನು

ಸಬಲ ತತ್ವವನು ಸಾರಿದನು ! ೭!





























No comments: