(ಶಾಲೆಗಳು ನಡೆಯದ ಸಂದರ್ಭದಲ್ಲಿ)
೧೯ ಎದೆಯ ಸುಡುವ ಶೋಕ
ಮಕ್ಕಳ ಬೆನ್ನಿನ ಸ್ವರ್ಗ ಏರದೆ
ಕಂಗಾಲಾಗಿದೆ ಬ್ಯಾಗು !
ಗೆದ್ದಲು ಹತ್ತಿ ಕಾಲ ಕಳೆವುದು
ಗೋಳಲಿ ಹಾಗು ಹೀಗು !
ವರುಷದಿಂದ ಕೊರಗುತಲಿಹುದು
ಶಾಲೆಯ ನೆಲದ ಹಾಸು !
ಮಕ್ಕಳ ಪಾದ ಸ್ಪರ್ಶವಿಲ್ಲದೆ
ಅಳುತಿದೆ ಎಂಟ್ಹತ್ ತಾಸು !
ಕಳವಳಗೊಂಡ ಟೀಚರ್ ಬಳಗದಿ
ಮಾಸಿಹೋಗಿದೆ ನಗುವು !
ಹತುಂಟರ ತಂಟೆಯ ಉಸಿರೇ ಇರದಿರೆ
ಏತಕೆ ಬೇಕೀ ಜಗವು !
ಧೂಳು ಮೆತ್ತಿ ಬೂಳಸುಗಟ್ಟಿದೆ
ಚಂದದ ಕಪ್ಪು ಹಲಗೆ !
ಪುಟ್ಟರ ಕಲರವ ಜೋಗುಳ ಇಲ್ಲದೆ
ಬದುಕುವುದಾದರು ಹೇಗೆ !
ಮಸಣದಂತೆ ಮಂಕಾಗಿಹುದು
ಶಾಲೆಯ ಆಟದ ಬಯಲು !
ಚಿಣ್ಣರ ಚಿಲಿಪಿಲಿ ಧ್ವನಿಯನು ಕೇಳದೆ
ದಿಟ್ಟಿಸುತಿಹುದು ಮುಗಿಲು !
ಕೊರೊನಾ ಹೊಡೆತಕೆ ನಲುಗಿ ಹೋಗಿದೆ
ಪುಟಾಣಿ ಪುಟ್ಟರ ಲೋಕ !
ಇನ್ನೂ ಎಂದಿಗೆ ತೊಲಗುವುದೇನೊ
ಎದೆಯನು ಸುಡುವ ಶೋಕ !
***
( ಶಾಲೆಗಳು ಮರು ಪ್ರಾರಂಭವಾದ ಸಂದರ್ಭದಲ್ಲಿ )
೨೦ ಮತ್ತೆ ಬಂದಿದೆ ಜೀವ
ಪಾದದ ಸ್ಪರ್ಶದ ಪುಲಕಿತಗೊಂಡಿದೆ
ಸುಂದರ ಶಾಲೆಯ ಬಯಲು !
ಕಿಲಕಿಲ ನಗುವಿನ ಸದ್ದನು ಕೇಳುತ
ಡೆಸ್ಕು ನಡೆಸಿವೆ ಡೌಲು !
ಪಾಠ ಪ್ರವಚನದಲೆಗಳು ಹರಡಿವೆ
ಶಾಲಾ ಕೊಠಡಿಯ ತುಂಬ !
ತುಂಟ ಮಕ್ಕಳ ಹೆಗಲನ್ನೇರಿ
ಪುಸ್ತಕ ಪಡುತಿವೆ ಜಂಬ !
ಚಪಾತಿ ಅನ್ನದ ಗೆಳೆತನ ಬೆಳೆಸಿವೆ
ಪುಟಾಣಿ ಊಟದ ಡಬ್ಬಿ !
ಕೇಕೆ ಹಾಕುತ ನಲಿದಾಡ್ತಿಹವು
ನೀರಿನ ಬಾಟಲಿ ಉಬ್ಬಿ !
ಒಲವಿನ ಮಕ್ಕಳು ಟೀಚರ ಮೊಗದಲಿ
ಮೂಡಿದೆ ಚೇತನ ಭಾವ !
ಕಪ್ಪು ಹಲಗೆ ಸೀಮೆ ಸುಣ್ಣಕೆ
ಮತ್ತೆ ಬಂದಿದೆ ಜೀವ !
ಬೆಸುಗೆಯಾಗಿದೆ ಪೆನ್ನು ಕಾಗದ
ಮೊದಲಿನ ಗೆಳೆತನ ಬಂಧ !
ಮನಸಿನ ವೇಗವ ಬೆನ್ನತ್ತುವುದು
ಕೈಗಳ ಅಕ್ಷರ ಅಂದ !
***
೨೧
ಅಮರ ಅದ್ಭುತ ಕಲ್ಪನೆ
ಚಲುವು ಚೈತ್ರದ ಮೃದುಲ ಸ್ಪರ್ಶಕೆ
ಚಿಗುರು ಪುಳುಕಿತು ಮಾಮರ !
ಗಿಡಕೆ ಹಬ್ಬಿದ ಬಳ್ಳಿ ಸುರಿಯಿತು
ಮಧುರ ಮಲ್ಲಿಗೆ ಹೂಸರ !
ನವಿಲು ಬಣ್ಣದ ಗರಿಯ ಕೆದರುತ
ಕುಣಿಯ ಹತ್ತಿತು ಥಕಥಕ !
ಗಿಳಿಯ ಮಾತಿಗೆ ಹೊಳೆಯತೊಡಗಿತು
ಬಾನ ಚುಕ್ಕೆಯು ಲಕಲಕ !
ತಲೆಯ ತೂಗುತ ಹೂವು ಕರೆಯಿತು
ದುಂಬಿ ಹಿಂಡನು ಸನಿಹಕೆ !
ಮೌನದಿಂದಲೆ ಸವಿಯುತಿರುವವು
ಮಧುರ ಪರಿಮಳ ಕಾಣಿಕೆ !
ಲಲಿತ ಗೆರೆಗಳು ಸೆರೆಯ ಹಿಡಿದಿವೆ
ಅಮರ ಅದ್ಭುತ ಕಲ್ಪನೆ !
ದಿನದ ಪ್ರತಿಕ್ಷಣ ಸಲಿಸಬೇಕಿದೆ
ಪ್ರಕೃತಿ ಮಾತೆಗೆ ವಂದನೆ !
***
೨೨ ಅದ್ಭುತ ಲೋಕ
ಕಲ್ಪನೆ ಮಾಡಿದ ವಸ್ತುಗಳೆಲ್ಲ
ರೇಖೆಗೆ ಜೀವ ಕೊಟ್ಟಾವು !
ಕನಸಲಿ ಕಂಡ ಚಿತ್ರಗಳೆಲ್ಲ
ಬಣ್ಣದ ವೇಷ ತೊಟ್ಟಾವು !
ಆಗಸ ಚುಕ್ಕೆ ಕರಿಬಿಳಿ ಮೋಡ
ಮನಸಲಿ ಅಚ್ಚು ಒತ್ತ್ಯಾವು !
ಮರಗಿಡ ಬಳ್ಳಿ ಹೂವುಗಳೆಲ್ಲ
ಭಾವಕೆ ಮುದ್ರೆ ಹಾಕ್ಯಾವು !
ಬೆಕ್ಕು ನಾಯಿ ಮುದ್ದಿನ ಕರುವು
ಗೆರೆಗಳ ಬಳುಕನು ಮೀಟ್ಯಾವು !
ಕೋಗಿಲೆ ಗಿಳಿ ಗುಬ್ಬಚ್ಚಿಗಳು
ಬಣ್ಣದ ಸೀಮೆಯ ದಾಟ್ಯಾವು !
ಅಮ್ಮ ನೋಡು ಚಿತ್ರಗಳೆಲ್ಲ
ಅದ್ಭುತ ಲೋಕ ತೋರ್ಯಾವು !
ಮೂಡು ಮೂಡುತ ಜೀವ ತಳೆದು
ಬಾನಂಗಳಕೆ ಹಾರ್ಯಾವು !
ಪ್ರಶ್ನೋತ್ತರದ ಪಾಠಕ್ಕಿಂತ
ಮನಸಿಗೆ ಮುದವ ನೀಡ್ಯಾವು !
ಅಂಕ ಸ್ಪರ್ಧೆಯ ಕಾಟ ತಪ್ಪಿಸಿ
ಭಾವಕೆ ಹೊಳಪು ಕೊಡ್ತಾವು !
೨೩ ಕಲ್ಪನೆ ರೆಕ್ಕೆಗಳು
ಏರೋಪ್ಲೇನು ಬಸ್ಸು ರೈಲು
ಎಲ್ಲವೂ ಇದರ ಹಿಂದೆ !
ಪೆಟ್ರೋಲ್ ಡಿಜೇಲ್ ಬೇಡದ ಗಾಡಿ
ಜಗದಲಿ ಇರುವುದು ಒಂದೆ !
ಬಡವ ಬಲ್ಲಿದ ಮೇಲು ಕೀಳು
ಭೇದವೆಂಬುದೆ ಇಲ್ಲ !
ಅರಮನೆ ಮಹಡಿ ಗುಡಿಸಲಿನಲ್ಲು
ಕಂಡು ಬರುವುದಲ್ಲ !
ಅಜ್ಜ ಅಜ್ಜಿ ತೋರುವ ಪ್ರೀತಿಗೆ
ಬೆಲೆಯ ಕಟ್ಟುವದೆಂತು !
ಬಣ್ಣಿಸಲಾರೆನು ಶಬ್ದವೆ ಸಾಲವು
ನೋಡಿರಿ ಒಮ್ಮೆ ಕುಂತು !
ಅವ್ವ ಅಪ್ಪನ ನೆನಪೆ ಬಾರದು
ಆಟ ಆಡುತ ಇದ್ರೆ !
ಹೊಟ್ಟೆ ತಾಳ ಹಾಕುತಲಿದ್ರೂ
ಅನಿಸುವುದಿಲ್ಲ ತೊಂದ್ರೆ !
ಕೊರೊನಾ ವೈರಿ ಬಂಧಿಸಿ ಇಟ್ಟರು
ಅಜ್ಜ ಮೊಮ್ಮಕ್ಕಳನ್ನು !
ಕತ್ರಿಸಿ ಒಗೆಯಲು ಯಾರಿಗೂ ಆಗದು
ಕಲ್ಪನೆ ರೆಕ್ಕೆಗಳನ್ನು !
***
೨೪ ಹಾಕಿದಂಗ ಮಂತ್ರ
ಅವ್ವಾ ನೀನು ಹೇಗೆ ಕಲಿತೆ
ಕೌದಿ ಹೊಲಿಯುವ ತಂತ್ರ !
ಹೊದ್ದ ಕೂಡ್ಲೆ ಕನಸೊ ಕನಸು
ಹಾಕಿದಂಗ ಮಂತ್ರ !
ಬಣ್ಣದ ಗುಬ್ಬಿ ಮಾತಾಡುವವು
ಚಿಲಿಪಿಲಿ ಚಿಲಿಪಿಲಿ ಅಂತ !
ನಮ್ಮ ಊರಿನ ವಸವನ ತೇರು
ಸಾಗಿ ಬಿಡುವುದು ಶಾಂತ !
ಗೊಂಬೆ ಸಾಲು ತಂದುಬಿಡುವವು
ಮರೆತ ಮಗ್ಹಿ ನೆನಪು !
ಅವ್ವನ ಹತ್ತಿರ ಮಲಗಿ ಬಿಟ್ಟರೆ
ಮತ್ತೆ ನಿದ್ರೆಯ ಜೊಂಪು !
ಬೆಚ್ಚಗಿರುವುದು ಚಳಿಗಾಲದಲಿ
ಬೇಸಿಗೆಯಲ್ಲಿ ತಂಪು !
ಮಳೆಗಾಲ್ದಲ್ಲಿ ತಪ್ಪಂಗಿಲ್ಲ
ತಮ್ಮನ ತೀರ್ಥದ ಕಂಪು !
ಗುಬ್ಬಿ ತೇರು ಪಗಡಿ ಹಚ್ಚಿ
ಅವ್ವ ಹೊಲಿದ ಕೌದಿ !
ದಿನದಿನ ದಿನವು ತೋರಿಸುತಿರುವುದು
ಹೊಸಕಲ್ಪನೆಯ ಹಾದಿ !
***
೨೫ ದುರಂತ ಕಾಲ !
ಪ್ರಕೃತಿಯೊಂದಿಗೆ ಹೊಂದಿಕೊಂಡಿವೆ
ಲೋಕದ ಎಲ್ಲಾ ಪ್ರಾಣಿ !
ಮನುಜನೊಬ್ಬನೆ ಭೂಮಿತಾಯಿಯ
ಕೊರಳಿಗೆ ಅಂಟಿದ ಜಿಗಣಿ !
ಪ್ರಗತಿಯ ಹೆಸರಲಿ ಕಾಡನು ಸವರಿಹ
ಹಿಡಿದು ಕರಗಸ ಜರಡಿ !
ಹುಸಿ ಸಂಪತ್ತಿನ ಕನಸಲಿ ತೇಲಿಹ
ಕಟ್ಟುತ ಕಂಕ್ರೀಟ್ ಮಹಡಿ !
ಹೊಸಪ್ರಯೋಗದಿ ಚಣಚಣ ನಡೆಸಿಹ
ನೆಲದೆದೆ ಸುಡುವ ಶೋಧ !
ಜೀವ ರಾಸಿಯ ಗೋರಿಯ ಮೇಲೆ
ಕಟ್ಟುತಲಿಹನು ಸೌಧ !
ಹೊಗೆ ಉರುಳಿನಲಿ ಕತ್ತರಿಸಿಹನು
ತಾಯ ಮೊಲೆಹಾಲ್ ಬೇರು !
ಹರಿದು ಹುರಿದು ಚಿಂದಿಯ ಮಾಡಿಹ
ಓಝೋನ್ ರಕ್ಷಾ ಪದರು !
ತಾಯ ಗರ್ಭಕೆ ತಿವಿಯುತಲಿಹವು
ನೂರು ಸಾವಿರ ಶೂಲ !
ತನಗೆ ತಾನೆ ತಂದು ಕೊಂಡಿಹ
ದುರಂತದಂತ್ಯದ ಕಾಲ !
***
೨೬ ತುಂಬಲಿ ಎದೆಯಲಿ ಅಭಿಮಾನ !
ಸರ್ವರು ಕೂಡಿ ಮಾಡುವ ಬನ್ನಿ
ಭಾರತ ಮಾತೆಯ ಗುಣಗಾನ !
ಗುಪ್ತಗಾಮಿನಿ ಚಿರಸಂಜೀವಿನಿ
ತುಂಬಲಿ ಎದೆಯಲಿ ಅಭಿಮಾನ !
ಹಲವು ಭಾಷೆ ಹಲವು ಮತಗಳ
ಬೆರೆಸಿದ ಸಂಪುಟ ಸಂಕಲನ !
ಹಲವು ಬಣ್ಣದ ಹಲವು ಬಗೆಗಳ
ಬೆಸೆಯುವ ಸೂರ್ಯನ ಹೊಂಗಿರಣ !
ಏಳು ಬೀಳಿನ ಕಷ್ಟ ಸಮಯದಿ
ಮರೆತರೆ ಚನ್ನ ಭಿನ್ನಮತ !
ದೇಶದ ಏಳಿಗೆ ವಿಕಸನಕಾಗಿ
ಹರಿಯಲಿ ಜ್ಞಾನವು ಪ್ರವಹಿಸುತ !
ನಾಡನು ಕಟ್ಟಿ ಬೆಳೆಸಲು ಬೇಕು
ಬೆವರನು ಸುರಿಸಿ ಶ್ರಮಿಸುತ್ತ !
ವಿಶ್ವಕೆ ಮಾದರಿ ಭರತ ವರ್ಷವು
ತೋರಲಿ ಕೂಡಿ ಬದುಕುತ್ತ !
ತ್ರಿವರ್ಣ ಧ್ವಜವು ಸಮರಸ ಬರೆಸಿ
ಏರುತ ಹಾರಲಿ ಬಾನಲ್ಲಿ !
ದೇಶ ಪ್ರೇಮದ ಜ್ಯೋತಿ ಬೆಳಗಲಿ
ನಾಡಿಗರಂತರಂಗದಲಿ !
೨೭ ಗುರು
ಕರಿಯ ಪಾಟಿಯ ಒಡಲ ಬಯಲಲಿ
ಬಿಳಿಯ ಬಳಪದ ಅಕ್ಷರ !
ಬಾನ ಚುಕ್ಕೆಯ ಎಣಿಸಿ ತೋರುತ
ಮಾಡಿದೆನ್ನನು ಸಾಕ್ಷರ !
ಎಲ್ಲಿ ನಿಲದಿರು ಎಂದು ತುಂಬಿದ
ಹರಿವ ಜಲದ ಗುಣವನು !
ಸೊಲ್ಲು ಸೊಲ್ಲಲಿ ಬೆರೆಸಿ ಬೀರಿದ
ಹೂವು ಪರಿಮಳ ಮಧುವನು !
ಆಟವಾಡುತ ಕಲಿಸಿ ಬಿಟ್ಟನು
ಸಾಗರಾಳದ ಈಜನು !
ತೆರೆದ ಮನದಲಿ ಸವಿಯ ಹಚ್ಚಿದ
ದಿಟದ ಜೀವನ ಮೋಜನು !
ಕೆದಕಿ ಸುರಿಸಿದ ಕನಸು ಕಲ್ಪನೆ
ಒಳಗು ಹೊರಗಿನ ಬೆಡಗನು !
ಹುಸಿಯ ಕರಗಿಸಿ ಗಟ್ಟಿಗೊಳಿಸಿದ
ದೂರ ಪಯಣದ ಹಡಗನು !
ಹಾಳು ಮನೆಯಲಿ ಬೀಳು ಬಿಟ್ಟಿಹ
ಕಾಳ ಕತ್ತಲೆ ತೊಲಗಿಸಿ !
ಎದೆಯ ಹೊಲದಲಿ ಸುಧೆಯ ಬಿತ್ತಿದ
ಮಧುರ ಜ್ಞಾನವ ತುಳುಕಿಸಿ !
***
೨೮ ಬಕಾಸುರನ ಕತೆ
ಏಕಚಕ್ಕರ ಪುರದ ಹತ್ತಿರ
ಕಾಕ ರಕ್ಕಸನೊಬ್ಬನಿರುವನು
ಕೇಕೆ ಹಾಕುತ ಊರ ಜನರಿಗೆ ಹಿಂಸೆ ಮಾಡುವನು |
ಏಕೆ ಹಿಂಸೆಯ ಮಾಡುತಿಹೆನೀ
ನಾಕು ಪಲ್ಲದ ಅನ್ನ ಬಂಡಿಯ
ಮೂಕ ಕೋಣನ ಜೊತೆಗೆ ಮನುಜನ ಬಲಿಯ ನೀಡುವೆವು |
ದಿನವು ಕೋಣದ ಬಂಡಿ ಅನ್ನವು
ಮನುಜನೊಬ್ಬನ ಸಹಿತ ಬರಲದ
ಕುಣಿದು ನಲಿಯುತ ತಿಂದು ತೇಗುತಲಿದ್ದ ರಕ್ಕಸನು |
ಮನೆಗೆ ಸರತಿಯ ಹಾಕಿಕೊಳ್ಳುತ
ಜನರು ಅನ್ನವ ಕಳಿಸಿಕೊಡಲಾ
ದಿನದ ಪಾಳೆಯ ಬರಲು ಬ್ರಾಹ್ಮಣ ಹೆದರಿ ನಡುಗಿದನು |
ಇದ್ದ ಒಬ್ಬ ಮಗನನೀಗಲೆ
ಕುದ್ದು ಕಳುಹಲು ಒಪ್ಪಿಕೊಳ್ಳದೆ
ವೃದ್ಧನಾದರು ಚಿಂತೆಯಿಲ್ಲವು ಬಂಡಿ ಒಯ್ಯುವೆನು |
ಮುದ್ದು ಮಕ್ಕಳು ಮಡದಿ ಎಲ್ಲರು
ಸದ್ದು ಮಡುತ ಅಳುತಲಿದ್ದುದ
ಕದ್ದು ಕೇಳಿಸಿಕೊಂಡ ಕುಂತಿಯು ಹೀಗೆ ಹೇಳಿದಳು |
ಹಲವು ಮಕ್ಕಳು ಇಹರು ನನಗಾ
ಬಲದ ಮಗನನು ಕಳುಹಿಕೊಡುವೆನು
ಒಲವು ತೋರುತ ಜಾಗ ನೀಡಿದ ನಿಮ್ಮ ಉಪಕೃತಿಗೆ |
ಬಿಲದ ಒಳಗಡೆ ಇರಲಿ ಮಾತಿದು
ನಲಿವಿನಿಂದಲಿ ತಿಳಿಸಿ ಬೇಡಿದ
ಕುಲದ ಮಂದಿಗೆ ಬಂದು ಬಳಗಕೆ ಮೌನ ಪಾಲಿಸಿರಿ |
ಬಲದ ತನ್ನಯ ಮಗನ ಕರೆಯುತ
ಚಲವ ತೋರುವ ಕಾಲ ಎನ್ನುತ
ಕೆಲವು ಗುಟ್ಟಿನ ಮಾತ ಹೇಳುತ ಬೆನ್ನು ಸವರಿದಳು |
ತಲೆಯದೂಗಿದ ತಾಯಿ ಮಾತಿಗೆ
ನಲಿವಿನಲ್ಲಿಯೆ ಬಂಡಿ ಹತ್ತುತ
ಕೊಲುವೆನೀಗಲೆ ಕೆಟ್ಟ ರಕ್ಕಸನೆಂದು ಸಾಗಿದನು |
ಹೊಟ್ಟ ಹಸಿವನು ತಾಳಲಾರದೆ
ಇಟ್ಟ ಅನ್ನದ ಹಂಡೆ ಬಾಗಿಸಿ
ಮುಟ್ಟಿ ಮುಟ್ಟಿಗೆ ನುಂಗುತಿದ್ದನು ಬೇಗಬೇಗದಲಿ |
ಗಟ್ಟಿ ಕೂಗನು ಹಾಕಿ ರಕ್ಕಸ
ನೆಟ್ಟ ನೋಡುತ ಬಂದು ನಿಂತನು
ದಿಟ್ಟ ಭೀಮನ ಕಂಡು ಮನದಲಿ ಕೋಪ ತಾಳಿದನು |
ಸಿಟ್ಟಿನಲಿ ಹೂಂಕರಿಸಿ ಒಮ್ಮೆಗೆ
ಮುಷ್ಠಿ ಮುಷ್ಠಿಲಿ ಬೆನ್ನ ಮೇಲ್ಗಡೆ
ಕೊಟ್ಟ ಏಟನು ಸುಮ್ಮ ತಿಂದಾ ಭೀಮ ಹೇಳಿದನು |
ಕಟ್ಟ ಕಡೆದಿದು ಅನ್ನ ಉಂಡೆಯು
ಗಟ್ಟಿಯಾಗಿಯೆ ಗುದ್ದು ಕೊಡು ನೀ
ನೆಟ್ಟನಿಳಿಯಲಿ ಗಂಟಲಿಂದಲಿ ಅನ್ನ ಹೊಟ್ಟೆಯಲಿ |
ಉಂಡು ತೇಗುತಲೆದ್ದ ಭೀಮನು
ಗಂಡುಗಚ್ಚಿಯ ಹಾಕಿ ನಿಂದನು
ರುಂಡ ಬಗ್ಗಿಸಿ ಬೆನ್ನ ಮೇಲ್ಗಡೆ ಏಟು ಹಾಕಿದನು |
ಪುಂಡ ಭೀಮನು ಎದೆಗೆ ಗುದ್ದಲು
ಬಂಡ ರಕ್ಕಸ ಕುಸಿದು ಬಿದ್ದನು
ತೊಂಡ ತೊಂಡಲು ಕರುಳು ಚಿಮ್ಮಿದವಾಗ ಆಗಸಕೆ |
ಎತ್ತಿ ಹೆಣವನು ಬಂಡಿಗೇರಿಸಿ
ಕತ್ತಲಾಗುವ ತನಕ ಕಾದನು
ಗೊತ್ತು ಆಗದ ಹಾಗೆ ತಂದನು ಅಗಸಿ ಬಾಗಿಲಿಗೆ |
ಸುತ್ತ ಮುತ್ತಲ ಸದ್ದು ಅಡಗಲು
ಕತ್ತು ಕಾಲಿಗೆ ಹಗ್ಗ ಬಿಗಿದನು
ಸತ್ತ ಬಕನನು ತೂಗುಬಿಟ್ಟನು ಉಗ್ರ ರೂಪದಲಿ |
ಅಗಸಿ ಬಾಗಿಲಿನಲ್ಲಿ ನಿಂತಿಹ
ಜಗದ ಕಂಟಕ ಬಕನ ಕಾಣುತ
ಜಿಗಿದು ಓಡಿದನೊಬ್ಬ ಪುಕ್ಕಲು ಜೀವ ಭಯದಲ್ಲಿ |
ದಗೆಯ ಹಸಿವಿಗೆ ಊರ ಹೊಕ್ಕನು
ಸಿಗುವ ಜನರನು ಪ್ರಾಣಿ ಎಲ್ಲವ
ಸಿಗಿದು ತಿನುವನು ಎನುತ ಸುದ್ದಿಯ ಹರಡಿ ಪುರದಲ್ಲಿ |
ಗಟ್ಟಿ ಧೈ ರ್ಯದ ಎಂಟು ಮಂದಿಯು
ಒಟ್ಟುಗೂಡುತ ಬಂದರಗಸಿಗೆ
ಕಟ್ಟಿ ಬಿಗಿದಾ ಕಾಲು ಕೈಗಳ ನೋಡಿ ಹೇಳಿದರು |
ಕೊಟ್ಟಿ ರಕ್ಕಸ ಸತ್ತು ಹೋದನು
ಸುಟ್ಟು ಹಾಕಲು ಸೌದೆ ತನ್ನಿರಿ
ಜಟ್ಟಿ ಯಾವನೊ ಕೊಂದು ಊರಿಗೆ ಒಳಿತು ಮಾಡಿದನು |
ಆದಿ ಪರ್ವದಿ ಬರುವ ಕತೆಯನು
ನಾದ ಭಾಮಿನಿ ಪದ್ಯ ಬಳಸುತ
ಸ್ವಾದ ಎನಿತೂ ಕೆಡದ ಹಾಗೆಯೆ ಹೆಣೆದು ಇರಿಸಿರುವೆ |
ಓದು ಬರಹವ ಬಲ್ಲ ದೇವರು
ಭೇದವೆನಿಸದೆ ತಪ್ಪು ತಡೆಗಳ
ಮೇದು ಸವಿಯಿರಿ ಚಂದ್ರ ಗೌಡನ ಕವನ ಪುಟ್ಟ ಕಾವ್ಯವನು |
***
೨೯ ಗೊಮ್ಮಟನಾದನು ಬಾಹುಬಲಿ
ಹಿರಿಯ ಸೋದರ ಭರತ ಚಕ್ರಿಯ
ಎದುರು ನಿಂತನು ರಣದಲ್ಲಿ !
ರಾಜ ಧರ್ಮದಿ ಯುದ್ಧಮಾಡಿದ
ಸೋಲನೊಪ್ಪದೆ ಸುಲಭದಲಿ !
ದೃಷ್ಟಿ ಮುಷ್ಟಿ ಜಲದ ಯುದ್ಧವ
ಗೆಲ್ಲುವ ಕೊನೆಯ ಗಳಿಗೆಯಲಿ !
ರಾಜ್ಯದಾಸೆಗೆ ಅಣ್ಣನ ಕೊಲುವುದೆ
ವಿರತಿ ಜನಿಸಿತು ಮನದಲ್ಲಿ !
ಆಗಸದೆತ್ತರಕೆತ್ತಿದ ಅಣ್ಣನ
ಇಳಿಸಿದ ಹೂಮೃದು ಸ್ಪರ್ಶದಲಿ !
ತಂದೆಯು ಕೊಟ್ಟ ಪೌದನಪುರವನು
ಒಪ್ಪಿಸಿಬಿಟ್ಟನು ಕ್ಷಣದಲ್ಲಿ !
ತ್ಯಾಗ ಯೋಗದ ತೇಜದಿ ಮಿಂದು
ಗೊಮ್ಮಟನಾದನು ಬಾಹುಬಲಿ !
ಬೆಳಗೊಳ ಬೆಟ್ಟವನೇರಿ ನಿಂತು
ಅಚ್ಚರಿ ತುಂಬಿದ ಕಂಗಳಲಿ !
ಅರಿಷ್ಟ ನೇಮಿಯ ಕೈಚಳಕಕ್ಕೆ
ಎಣೆಯೇ ಇಲ್ಲಾ ಲೋಕದಲಿ !
ಚಾವುಂಡರಾಯನ ಕನಸು ಕಲ್ಪನೆ
ರೂಪತಾಳಿತು ಬಂಡೆಯಲಿ !
****
೩೦ ಸಾವಿರದ ಕತೆ ಮಹಾಭಾರತ
ವ್ಯಾಸಮುನಿಯು ರಚಿಸಿದಂತಹ
ಮಹಾಕಾವ್ಯವು ಭಾರತ !
ಜನಪದರೆಲ್ಲರ ನಾಲಿಗೆ ಮೇಲೆ
ನಲಿಯುತಲಿರುವುದು ಜೀವಂತ !
ಆದಿಮಕಾಲಕು ಕೈಚಾಚಿರುವ
ಪ್ರಾಚೀನ ಕಥನದಿ ಏನುಂಟು !
ದೇಸಿನೆಲೆಯ ಖಾಸ ಬದುಕನು
ತೆರೆದಿರಿಸಿರುವ ಇಡಿಗಂಟು !
ಸಂಸ್ಕೃ ತಮಿಳು ತೆಲುಗು ಬೆಂಗಾಲಿ
ಹಿಂದಿ ಮರಾಠಿ ಭಾಷೆಯಲಿ !
ಹೊಸಹೊಸ ರೂಪವ ತಾಳಿನಿಂತಿದೆ
ಹಲವು ಸಂಸ್ಕೃತಿ ವೇಷದಲಿ !
ಪಂಪರನ್ನ ಕುಮಾರವ್ಯಾಸರ
ಸೆಳೆದುಬಿಟ್ಟಿದೆ ಈಕಥನ !
ಕನ್ನಡ ಮಣ್ಣಿನ ಸತ್ವವ ಪಡೆದು
ಮೂಡಿಸುತಲಿರುವುದು ಸಂಚಲನ !
ಕುರುಪಾಂಡವರ ಸೇಡಿನ ಕದನವು
ಕತೆಯಲಿ ಒಂದು ನೆಪ ಮಾತ್ರ!
ಒಳಗಡೆ ನಡೆವುದು ಗುಣಾವಗುಣಗಳ
ಅದ್ಭುತ ಲೋಕದ ರಸಚಿತ್ರ !
ಭೀಷ್ಮ ದ್ರೋಣ ವಿದುರ ಕೃಪರು
ಅವತರಿಸುವರು ಮನದೊಳಗೆ !
ಕರ್ಣ ಅರ್ಜುನ ಭೀಮ ದುರ್ಯೋಧನ
ಶಕುನಿಗಳೆಲ್ಲರು ನಮ್ಮೊಳಗೆ !
ವಸುದೇವ ಕೃಷ್ಣ ಬಲದೇವ ಕಂಸ
ಕುರು ಪಾಂಡವರ ನೆಂಟರು !
ಬಕ ಹಿಡಿಂಬ ಘಟೋತ್ಕಚರು
ದೈತ್ಯ ಶಕ್ತಿಯ ಬಂಟರು !
ಅಭಿಮನ್ಯು ಬಭ್ರು ಏಕಲವ್ಯರು
ಶಸ್ತ್ರ ವಿದ್ಯೆಯ ಬಲ್ಲವರು !
ಅಂಬೆ ಕುಂತಿ ಗಾಂಧಾರಿ ದ್ರೌಪತಿ
ಎಲ್ಲರ ಮನವನು ಗೆಲ್ಲುವರು !
ನಳ ಶಾಕುಂತಲ ಸತಿಸಾವಿತ್ರಿ
ಕತೆ ಉಪಕತೆಗಳ ಜೇನಹೊಳೆ !
ಹತ್ತು ಹಲವು ಪಾತ್ರಗಳೆದೆಯಲಿ
ತುಂಬಿಹರಿವುದು ಜೀವಕಳೆ !
ಭೋಗತ್ಯಾಗದ ಮಹತಿ ಅಡಗಿದೆ
ಶುಕ್ರಾಚಾರ್ಯರ ಶಾಪದಲಿ !
ಯಯಾತಿ ದೇವಯಾನಿ ಶರ್ಮಿಷ್ಠೆಯ
ಉಪ ಆಖ್ಯಾನದ ಕತೆಯಲ್ಲಿ !
ಅಜ್ಞಾತವಾಸದ ವಿರಾಟನಗರದಿ
ದಾಸಿ ವೇಷದ ದ್ರೌಪತಿ !
ನಾಟ್ಯಶಾಲೆಗೆ ಮಧುವನು ತಂದು
ಪಡೆದಳು ಕೀಚಕನಾಹುತಿ !
ಭೀಷ್ಮ ಪ್ರತಿಜ್ಞೆ ಕುರುಡುಪ್ರೀತಿ
ಅರಗಿನ ಮನೆಯ ನಿರ್ಮಾಣ !
ಜೂಜಿನ ಪಗಡೆ ಅಕ್ಷಯಾಂಬರ
ದುರಂತ ತುಂಬಿದ ಹರಿವಾಣ !
ವೀರ ಸಾಹಸ ಸಹನೆ ಮತ್ಸರ
ಬೆರೆತುಕೊಂಡಿವೆ ಕತೆಯಲ್ಲಿ !
ವಿನಯ ಗರ್ವ ಪ್ರತಿಷ್ಠೆ ಪಣಗಳು
ಮೆರೆದಿವೆ ಉಜ್ವಲ ಪಾತ್ರದಲಿ!
ಆಲದ ಕಾಂಡ ಬೇರು ಬಿಳಲು
ಬೆಸೆದುಕೊಂಡಿವೆ ಬಂಧುರ !
ಸಾವನು ಮೀರಿದ ವಿಸ್ಮಯ ಬೆರಗು
ಹಬ್ಬಿ ತಬ್ಬಿವೆ ಹಂದರ !
ನಾಟಕ ಕಾವ್ಯ ಮಹಾಕಾವ್ಯದ
ಟಿಸಿಲೊ ಟಿಸಿಲು ನೂರಾರು !
ಕಾದಂಬರಿ ಕತೆ ಪುನರವತಾರದ
ಪರ್ವವೆ ನಡೆದಿದೆ ಬಲುಜೋರು !
ಆಟ ಬಯಲಾಟ ಯಕ್ಷಗಾನದಿ
ಚಿಮ್ಮಿಸಿ ಬಿಡುವುದು ಸಂಭ್ರಮ !
ಪುರಾಣ ಪ್ರವಚನ ಕೀರ್ತನಗಳಲಿ
ನುಡಿಸುತಲಿರುವುದು ಸರಿಗಮ !
ಅಂದಿನ ಕತೆಯು ಇಂದಿಗೂ ಹೊಂದುತ
ತೋರುವುದೆಮ್ಮಯ ಬಿಂಬವನು !
ಕೇಳುತ ಓದುತ ಒಳಗೆ ಬೆಳೆದು
ಒಡೆವುದು ಬಾಳಿನ ಗುಂಭವನು !
ನ್ಯಾಯ ಅನ್ಯಾಯ ಧರ್ಮ ಅಧರ್ಮಕೆ
ಗೆರೆಯನೆಳೆವುದು ಕಡುಕಷ್ಟ !
ಜಿದ್ದಾ ಜಿದ್ದಿನ ಪಣದಲಿ ಸಿಕ್ಕು
ಬಳಲುವ ಚಿತ್ರವು ಬಲುಸ್ಪಷ್ಟ !
ಕಾಡಿನ ನಾಡಿನ ಅದ್ಭುತ ಕಾವ್ಯಕೆ
ಯಾವುದು ನಿಲ್ಲದು ಸರಿಸಾಟಿ !
ಗಂಗೆ ಕಾವೇರಿ ಹೊನಲಾಗಿಹುದು
ಮಿಡಿಕುಡಿ ಜೀವದ ಒಳತೋಟಿ !
ಗೆದ್ದವರಾರು ಸೋತವರಾರು
ಎಲ್ಲರ ಮನದಲಿ ತಾಕಲಾಟ !
ಸೋಲು ಗೆಲುವನು ಮೀರಿದ ಬದುಕಿಗೆ
ನಡೆದಿದೆ ಇಲ್ಲಿ ಹುಡುಕಾಟ !
***
೩೧ ತಕದಿ ತೋಂತನ
ಕಣ್ಣ ನೋಟ ಮೊಗದ ಹಾಸ
ಭಾವದಲೆಯ ಚಾರಣ !
ಲಲಿತ ಹೆಜ್ಜೆ ನುಡಿವ ಗೆಜ್ಜೆ
ನೃತ್ಯ ಕಲೆಯ ಹೂರಣ !
ಬಾಗು ಬಳುಕು ಉಡುಗೆ ತೊಡುಗೆ
ಬೆರಗು ಬೆಡಗು ತೋರಣ !
ರಾಗ ಲಹರಿ ನಾದ ಚಿಗುರಿ
ತಾಳ ಮೇಳ ಧಾರಣ !
ದೇಹದಂಗ ಚಲುವಿನಲ್ಲಿ
ರೂಪು ತಳೆವ ಚೇತನ !
ಸೃಷ್ಟಿಶೀಲ ಪ್ರತಿಭೆ ತೊಟ್ಟು
ಹಾರುತಿರುವ ಕೇತನ !
ರಸಿಕನೆದೆಯಲಾಡಿ ನಲಿವ
ಪುಳಕ ನವಿರು ಸಿಂಚನ !
ಮೋಡ ಗುಡುಗು ಮಳೆಯ ಹನಿಗೆ
ನವಿಲು ಗರಿಯ ಚಲ್ಲಣ !
ಪಾದ ಚಲನೆ ಮಧುರ ಗತಿಗೆ
ನೂರು ನೂರು ರಿಂಗಣ !
ಹೃದಯ ಮೂಲೆ ಮೂಲೆಯಲ್ಲು
ಧೀಮ್ತ ತಕದಿ ತೋಂತನ !
***
೩೨ ಬೆರೆಸಿವೆ ಎಳ್ಳು ಬೆಲ್ಲ
ಮಹಾಭಾರತ ರಾಮಾಯಣಗಳು
ಕೇವಲ ಕಾವ್ಯಗಳಲ್ಲ !
ವಿಶ್ವದ ಜನರ ಸುಂದರ ಬಾಳಲಿ
ಬೆರೆಸಿವೆ ಎಳ್ಳು ಬೆಲ್ಲ !
ಎದುರಲಿ ಕೂತು ಕತೆಯನು ಕೇಳಲು
ಮೂಡಿ ನಿಲುವವು ಪಾತ್ರ !
ಮೈಮನ ತುಂಬ ರೂಪಗೊಳುವವು
ಅಳಿಸಲಾರದ ಚಿತ್ರ !
ಕಿರಿಯರು ಯುವಕರು ಹಿರಿಯರಿಗೆಲ್ಲ
ಆಯಸ್ಕಾಂತದ ಸೆಳೆತ !
ಸಂಕಟ ನೋವು ಸಂಭ್ರಮ ಸಡಗರ
ಭಾವಕೆ ಇಳಿವವು ಶಾಂತ !
ಕಥನ ವಾಚನ ಗಮಕಗಳಲ್ಲಿ
ಬೆರೆಸಿವೆ ಸುಮಧುರ ನಾದ !
ತಾಳ ತಂಬೂರಿ ರಾಗದ ಅಲೆಯಲಿ
ಅಡಗಿದೆ ಅಮೃತ ಸ್ವಾದ !
ತ್ರೇತಾ ದ್ವಾಪರ ಯುಗಗಳಿಂದಲೂ
ಹರಿದು ಬಂದಿದೆ ಸ್ರೋತ !
ದಿನದಿನ ದಿನವೂ
ಅಳಿಸುತ ಮನಸಿನ ಭ್ರಾಂತ !
***
೩೩ ಏಕ ಶಿಲೆಯ ದೇಗುಲ
ಏಕಶಿಲೆಯಲಿ ಕೆತ್ತಿದ ದೇಗುಲ
ಅಮರ ಕೈಲಾಸನಾಥ !
ಅನುಪಮ ಸ್ಥಪತಿಯ ಪ್ರತಿಭೆವಿಲಾಸಕೆ
ತುಟಿ ಹೊರಡಿಸವು ಮಾತ !
ಚರಣಾಂಮದ್ರಿಯ ನಡುಬೆಟ್ಟದ ಒಡಲಲಿ
ಮೂಡಿದೆ ತೇಜೊ ಶಿಲ್ಪ !
ಕನಸಿನಲ್ಲಿಯೂ ಕಲ್ಪಿಸಲಾಗದ
ಗುಹ ದೇವಾಲಯ ಕಲ್ಪ !
ರಾಷ್ಟ್ರಕೂಟರ ಒಂದನೆ ಕೃಷ್ಣನ
ಕಾಲದ ಬೆಡಗಿನ ರಚನೆ !
ಬೆಟ್ಟದ ತುಂಬ ಸಾಲು ಹಚ್ಚಿದೆ
ವರದೇಗುಲದ ಸೇನೆ !
ಮೇಲಿನಿಂದಲೆ ಕೆಳಗೆ ಕೊರೆಯುವ
ತಂತ್ರದ ಜಾಣ ಸ್ಥಪತಿ !
ಗಣಕಯಂತ್ರದ ನವೀನ ಯುಗಕೂ
ನೀಡುತಲಿರುವನು ಸ್ಫೂರ್ತಿ !
ಲಕ್ಷ ಲಕ್ಷ ಶಿಲ್ಪಿಗಳಿಲ್ಲಿ
ದುಡಿದರು ಹದಿನೆಂಟ್ ವರುಷ !
ಯಕ್ಷ ಪ್ರಶ್ನೆಯಾಗಿದೆ ಇಂದಿಗೂ
ವಾಸ್ತು ಜ್ಞಾನದ ಕೋಶ !
ಲಕ್ಷ ಟನ್ನಿನ ಕಲ್ತುಂಡುಗಳು
ಎಲ್ಲಿ ಹೋದವು ಸಾಗಿ !
ವಿಶ್ವ ದಾಖಲೆ ಶಿಲ್ಪವಾಯಿತು
ಹೆಬ್ಬಂಡೆಯು ತಾ ಕರಗಿ !
***
೩೪ ಅಮೃತ ಉತ್ಸವ ಹರುಷ
ಹೆಮ್ಮೆಯ ನಮ್ಮ ಭಾರತ ದೇಶಕೆ
ಅಮೃತ ಉತ್ಸವ ಹರುಷ !
ನಾಡವರೆಲ್ಲರ ನಾಡಿ ಮಿಡಿತಕೆ
ತುಂಬಿದೆ ಭಾವ ಕೋಶ !
ಆಗಸದೆದೆಯಲಿ ಹಬ್ಬಿ ಹರಡಿದೆ
ಕೇಸರಿ ಹಸಿರು ಬಣ್ಣ !
ಅಶೋಕ ಚಕ್ರವ ಹೊಳೆಯಿಸುತಿರುವುದು
ಅಚ್ಚ ಬಳಿಯ ವರ್ಣ !
ಹಲವು ಭಾಷೆ ಹಲವು ವೇಷವ
ಬೆಸೆದಿದೆ ದೇಶ ಪ್ರೇಮ !
ಮನಸಿನ ಬಯಲಲಿ ಗುಡಿಯ ತೋರಣ
ನಾಡ ಪ್ರೀತಿಯ ಧಾಮ !
ಮೂಡಣ ಪಡುವಣ ಸಾಗರದಲೆಗಳು
ತುಂಬಿವೆ ಉಸಿರಿಗೆ ಪ್ರಾಣ !
ಬಡಗಣ ಮೇರು ತೆಂಕಣ
ಭಾರತ ಮಾತೆಯ ತ್ರಾಣ !
***
೩೫ ಉದ್ದನೆ ಕುತ್ತಿಗೆ
ಚಿರತೆ ಜಿರಾಫೆ ಕರಡಿ ಸಿಂಹ
ಗೆಳೆಯರಿದ್ದರು ಕಾಡಲ್ಲಿ !
ಜೇನನು ಕಂಡು ಆಸೆ ಪಟ್ಟರು
ದೊಡ್ಡ ಗಿಡದ ಪೊಟರೆಯಲಿ !
ಪೊಟರೆಯು ಎತ್ತರೆತ್ತರಕಿದ್ದಿತು
ಉಳಿದ ಪ್ರಾಣಿಗೆ ಸಿಗಲಿಲ್ಲ !
ಅಲ್ಪ ಎತ್ತರವವಿದ್ದ ಜಿರಾಫೆ
ಬಾಯಿ ಹಾಕಿತು ಬಿಡಲಿಲ್ಲ !
ಹೂವಿನ ಮಧುರ ಜೇನನು ಸವಿಯುತ
ಚಾಚಿತು ಮೊಗವನು ಆಳಕ್ಕೆ !
ಯಾರಿಗು ಸಿಗದ ಸವಿಸವಿ ರುಚಿಯನು
ಹೊಗಳಿ ಹೇಳಿತು ಬಳಗಕ್ಕೆ !
ನಾಲಗೆ ಚಾಚಿ ಚೀಪಿಯೇ ಚೀಪಿತು
ತನಗೆ ಸಿಕ್ಕಿತು ಎನ್ನುತ್ತ !
ಮೊಗವನು ಹೊರಗೆ ತೆಗೆಯಲು ಬಾರದೆ
ಸಂಕಟ ಪಟ್ಟಿತು ಗೋಳಾಡ್ತ !
ಜೋಡಿ ಗೆಳೆಯರು ಜಿರಾಫೆ ಎಳೆದರು
ನಾಲ್ಕು ಕಾಲನು ಹಿಡಿಯುತ್ತ !
ಮೊಗಬರಲಿಲ್ಲ ಕಾಲ್ಗಳು ಹಿಗ್ಗುತ
ಉದ್ದವಾದವು ಬೆಳೆಯುತ್ತ !
ಹತ್ತಿಪ್ಪತ್ತು ಬಾರಿ ಯತ್ನಿಸಿ
ನಿಲ್ಲಿಸಿ ಬಿಟ್ಟರು ಕೈಸೋತು !
ಕತ್ತಲು ಕವಿಯಲು ಮನೆಸೇರಿದರು
ಗೆಳೆಯ ಜಿರಾಫೆಯ ಗತಿ ಮರೆತು !
ಮಾರನೆ ದಿನಕೆ ಗಿಡವು ಬೆಳೆಯಿತು
ಹತ್ತಡಿ ಎತ್ತರ ತಂತಾನೆ !
ಜಿರಾಫೆ ಕುತ್ತಿಗೆ ಉದ್ದವಾಯಿತು
ಗಿಡದ ಜೊತೆಯಲಿ ಮುಂಜಾನೆ !
ಏನು ಮಾಡಲು ಆಗದು ಎಂದ
ತನ್ನ ಗೆಳೆಯರ ಬಳಗವನು !
ಹಳಿಯದೆ ಜಿರಾಫೆ ತಾನೆ ಯತ್ನಿಸಿ
ಹೊರಗೆ ಎಳೆಯಿತು ಮೊಗವನ್ನು !
ಕುತ್ತಿಗೆ ಕಾಲು ಉದ್ದಕೆ ಬೆಳೆದ
ಕತೆಯಿದು ಪ್ರಕೃತಿ ಸೋಜಿಗವು !
ಮುಗಿಲೆತ್ತರದ ಗೆಳೆಯ ಜಿರಾಫೆಗೆ
ಯಾರು ಇಲ್ಲ ಸರಿ ಸಮವು !
***
೩೬
ಕಂಡಿಲ್ಲ ನೋಡಿಲ್ಲ
ಭೂಮಿ ತಾಯಿಯು ರಚಿಸಿದ ಕೃತಿಗೆ
ಸರಿಸಮ ಕಾವ್ಯವ ಕಂಡಿಲ್ಲ !
ಬಿತ್ತುವ ಕೂರಿಗೆ ಬರಹಕೆ ಸರಿಸಮ
ಚಂದದ ಅಕ್ಷರ ನೋಡಿಲ್ಲ !
ಸುಮಧುರ ಜೇನಿನ ಗೂಡಿಗೆ ಸರಿಸಮ
ಸುಂದರ ಶಿಲ್ಪವ ಕಂಡಿಲ್ಲ !
ಜೇಡನ ಬಲೆಯನು ಮೀರಿಸುವಂತಹ
ಅಂದದ ಚಿತ್ರವ ನೋಡಿಲ್ಲ !
ಬೆಡಗಿನ ನವಿಲ ಕುಣಿತಕೆ ಸರಿಸಮ
ಚುಳುಕಿನ ನೃತ್ಯವ ಕಂಡಿಲ್ಲ !
ಅರಳಿದ ಹೂವಿನ ಪರಿಮಳ ಸರಿಸಮ
ಗಂಧ ಸುಗಂಧವ ನೋಡಿಲ್ಲ !
ಗೀಜಗ ಕಟ್ಟಿದ ಗೂಡಿಗೆ ಸರಿಸಮ
ರಾಜರ ಅರಮನೆ ಕಂಡಿಲ್ಲ !
ಕೋಗಿಲೆ ಹಾಡುವ ಪಂಚಮ ಸ್ವರಕೆ
ಸರಿಸಮ ಗಾಯನ ನೋಡಿಲ್ಲ !
ಬಾನಂಗಳದಲಿ ಬೆಳಗುವ ತಾರೆಗೆ
ಸರಿಸಮ ದೀಪ್ತಿಯ ಕಂಡಿಲ್ಲ !
ಸುರಿಯುವ ಮಳೆಗೆ ಸರಿಸಮನಾದ
ಜಲ ಅಮೃತವನು ನೋಡಿಲ್ಲ !
***
೩೭
ಪ್ರತಿಮಾ ಯೋಗ
ಸಮರ ಸಮಯದಿ ಸತ್ಯವನರಿತು
ಮಾಡಿದ ಭುಜಬಲಿ ತ್ಯಾಗ !
ಇಂದ್ರಗರಿಯನು ಅಲಂಕರಿಸುತ
ತೋರಿದ ಪ್ರತಿಮಾ ಯೋಗ !
ದೇವದರ್ಶನದಿ ಫಲಿತವಾಯಿತು
ಅರಿಷ್ಟನೇಮಿಯ ತಪಸು !
ಹಿಂಸೆ ತೊರೆದ ದೇವ ದೇವನ
ಜೀವ ಪ್ರೀತಿಯ ಕನಸು !
ಮಾನವನೆದೆಯಲಿ ಬಿತ್ತುತಲಿರುವನು
ಸತ್ಯ ಅಹಿಂಸೆಯ ಬೀಜ !
ಬೆಳಗುಲಿಹುದು ಸಿರಿಮೊಗದಲ್ಲಿ
ಅಮೃತ ದಿವ್ಯ ತೇಜ !
ಲೋಕದ ಜನರಿಗೆ ಪಾಠವ ಕಲಿಪುದು
ಭುಜಬಲಿ ವೀರನ ಸೋಲು !
ಗೆಲುವು ಎಂಬುದು ಗೆಲುವೆ ಅಲ್ಲವು
ಹಿಂಸೆ ಹಿಂಸೆಯ ಮಹಲು !
ಪಸರಿಸಲೆಲ್ಲೆಡೆ ಸತ್ಯ ಅಹಿಂಸೆ
ಬೆಳುಗೊಳ ಜ್ಯೋತಿಯ ಕಿರಣ !
ಮನುಜನ ಅಂತರಂಗದಿ ನೆಲೆಸಲಿ
ಅಚಲ ಶಾಂತಿಯ ಮೌನ !
***
೩೮ ಬೆರಗು ಬೆಡಗಿನ ಗುಂಭ
ವರನಟ ಎಂಬುದು ಅಲ್ಲವೆ ಅಲ್ಲವು
ಕೇವಲ ಬಿರುದಿನ ಹೆಸರು !
ಧಮನಿ ಧಮನಿಯ ಕಣಕಣದಲ್ಲೂ
ತುಂಬಿದೆ ಕನ್ನಡ ಉಸಿರು !
ನುಡಿಮೆಯ ಜಾಣನೊ ನಡತೆಯ ಚರಿತನೊ
ಸಾಲವು ಹೇಳಲು ಶಬ್ದ !
ಅಭಿನಯ ನೋಡುತ ಕಾಲದೇಶಗಳು
ನಿಂತೇಬಿಡುವವು ಸ್ತಬ್ಧ !
ಮಾತನು ಗಿಳಿಗೆ ಹಂಸೆಗೆ ನಡೆಯನು
ಕಲಿಸಿದ ನಟನೆಯ ಚತುರ !
ನಾದಾಮೋದದ ಕಸ್ತೂರಿ ಕಂಠವು
ಕೋಗಿಲೆಗಿಂತಲೂ ಮಧುರ !
ಜನಪದ ಪುರಾಣ ಇತಿಹಾಸದಲಿ
ಹುದುಗಿದ ಎಲ್ಲ ಪಾತ್ರ !
ಅಂತರಂಗದಿ ಮೂಡಿಸಿಬಿಡುವವು
ಅಳಿಯದ ಅಮೃತ ಚಿತ್ರ !
ಸಂಸ್ಕೃತಿ ಸಮರತಿ ಸನ್ನಡತೆಯಲಿ
ವಿನಯದ ಮಾನ ಸ್ತಂಭ !
ಊಹೆ ತರ್ಕದ ಸೀಮೆಗೆ ನಿಲುಕದ
ಬೆರಗು ಬೆಡಗಿನ ಗುಂಭ !
***
೩೯ ಶಿಲ್ಪ ಸಾಗರ ಸಿಂಧು !
ವಿಜಯ ವಿಠಲ ಮಂದಿರದಲ್ಲಿವೆ
ಸರಿಗಮ ಸ್ವರಗಳ ಕಂಬ !
ಅಡಗಿವೆ ಅದರಲಿ ವಾಸ್ತುಶಿಲ್ಪದ
ಚರಿತೆಯ ನೂರು ಗುಂಭ !
ಐದು ನೂರು ವರುಷಗಳಿಂದ
ಹಾಡುತಲಿರುವವು ಲಾಲಿ !
ಮೊದಲಿಗೆ ಸ್ವರಗುಣ ಗುರುತಿಸಿದವರು
ಪಂಡಿತ ವಸಂತ ಕವಲಿ !
ಕೊಡತಿ ಉಳಿಯ ಮೊನಚಂಚಿನಲಿ
ಬೆಣಚು ಕಲ್ಲಿನ ಮಹಿಮೆ !
ನಾಲ್ಕು ಎಂಟು ಹದಿನಾರ್ಕಂಬವು
ಮೀಟಿವೆ ಅಚ್ಚರಿ ಸೀಮೆ !
ಚರಿತೆಯಲೆಲ್ಲಿಯು ದಾಖಲೆಯಿಲ್ಲವು
ಸರಿಗಮ ಉಲಿಯುವ ಬಗೆಗೆ !
ಏನೇ ಇರಲಿ ಮೆಚ್ಚಲೆಬೇಕು
ಶಿಲ್ಪಿಯ ಅದ್ಭುತ ಕಲೆಗೆ !
ವಿಜಯನಗರದ ಅರಸರ ಕೊಡುಗೆ
ಜಗದಚ್ಚರಿಯಲಿ ಒಂದು !
ಹಂಪೆಯ ಪರಿಸರ ಕನ್ನಡ ನಾಡಿನ
ಶಿಲ್ಪ ಸಾಗರ ಸಿಂಧು !
No comments:
Post a Comment