೧
ನಮ್ಮ ಪುಟಾಣಿ ತುಂಟ
ಗರಿಗಳ ಚಾಚಿ ಹಾರುತ ಹೊರಟ
ನಮ್ಮ ಪುಟಾಣಿ ತುಂಟ !
ತೇಲುತ ವಾಲುತ ದಾಟಿ ಬಿಟ್ಡ
ಕೆರೆಹೊಳೆ ಹಳ್ಳ ಬೆಟ್ಟ !
ಕೈಯ ಬೀಸುತ ಕರೆಯುತಲಿದ್ದವು
ಗಿಡಮರಬಳ್ಳಿ ಹೂತು !
ಕೊಕ್ಕನು ಚುಚ್ಚಿ ಪರಿಮಳ ಉಂಡನು
ಕೊಂಬೆ ಕೊಂಬೆಗೆ ಕೂತು !
ಮಡುವಿನ ಪಕ್ಕದ ಜಾಲಿ ಮರದಲಿ
ಜೋಲುತಲಿದ್ದವು ಗೂಡು !
ಪುಟಾಣಿ ಗೀಜಗ ಕಟ್ಟಿಬಿಟ್ಟಿತ್ತು
ಗೂಡಿನ ಮೇಲೊಂದ್ ಮಾಡು !
ತಾಯಿ ಗಿಳಿಗೆ ಕಾಯುತಲಿದ್ದವು
ಪೊಟರೆ ಮರಿಗಳು ಇಣುಕಿ !
ತಂದೆ ತಾಯಿ ಗುಟ್ಟಿಯ ಹಾಕುತ
ಮಾಡುತಲಿದ್ದವು ಜ್ವಾಕಿ !
ನೀರು ಕುಡಿಯಲು ನದಿಗೆ ಬಂದಿತು
ಆಕಳು ಜಿಂಕೆಯ ದಂಡು !
ತಾಪವ ಮರೆತು ದೂರಕೆ ನಿಂತವು
ಅಡಗಿದ ಮೊಸಳೆಯ ಕಂಡು !
ಹೂವಿಂದ ಹೂವಿಗೆ ಹಾರುತಲಿದ್ದವು
ರಂಗುರಂಗಿನ ಚಿಟ್ಟೆ !
ಮರಿಗಳಾಗಿ ಚಿಂವ್ಗುಡುತಿದ್ದವು
ಗೂಡಲಿ ಇದ್ದ ಮೊಟ್ಟೆ !
ಬೆಡಗಿನ ನವಿಲು ಕುಣಿಯುತಲಿದ್ದವು
ಸಾವಿರ ಕಣ್ಣನು ಕೆದರಿ !
ಮಾಮರದಲ್ಲಿ ಹಾಡಿತು ಕೋಗಿಲೆ
ಚೈತ್ರ ಬಂದುದ ಸಾರಿ !
ಮೋಡದ ಚಿತ್ರವ ಬಿಡಿಸುತಲಿದ್ದಿತು
ಸುಂದರ ನೀಲಿಯ ಬಾನು !
ತಿಳಿನೀರ್ ಮಡುವಲಿ ಈಜುತಲಿದ್ದವು
ಫಳ ಫಳ ಹೊಳೆಯುವ ಮೀನು !
ತುಂಬಿತ್ತು ಬರುವನು ಕಾಯುತಲಿದ್ದವು
ಅರಳಿದ ಬಣ್ಣದ ಹೂವು !
ಇಲಿ ಬೆನ್ನತ್ತಿ ಸರಸರ ಹರಿಯಿತು
ಗೋದಿ ಬಣ್ಣದ ಹಾವು !
ಆನೆಯ ಮರಿಗಳು ನಡೆಯುತಲಿದ್ದವು
ಹಿರಿಯರ ಕಾಲ್ಗಳಲವಿತು !
ಬೇಟೆಯಾಡಲು ಹೊರಟವು ನಾಯಿ
ಹಿಂಡ ಹಿಂಡಾಗಿ ಕಲೆತು !
ಕರೊನಾ ಹೊಡೆತಕೆ ಮನೆಪಂಜರದಿ
ಒದ್ದಾಡ್ತಿದ್ದ ಪುಟ್ಟ !
ರೆಕ್ಕೆಯ ಬಿಚ್ಚಿ ಹಾರುತ ಪ್ರಕೃತಿಯ
ಸೊಬಗಿಗೆ ಸಂತಸಪಟ್ಟ !
ಸಿಂಹದ ಸಿಡಿಲಿನ ಗರ್ಜನೆ ಕೇಳಿ
ಒಮ್ಮೆಲೆ ಪುಟ್ಟ ಚೀರಿ !
ಚಡ್ಡಿ ಹಾಸಿಗೆ ಬಿಸಿ ಮಾಡಿದ್ದ
ಕನಸನು ಕಂಡು ಹೆದರಿ !
ಚಂದ್ರಗೌಡ ಕುಲಕರ್ಣಿ
9448790787
೨
ಚಂದ್ರ ಮತ್ತು ತುಂಟ
ಮುಗಿಲ ಬಯಲಲಿ ಗೋಲಿ ಆಟವ
ಆಡಿದರಿಬ್ಬರು ಕೂಡಿ !
ಸೋತ ಸೂರ್ಯನು ಮರೆಯಲಿ ಅಡಗಿದ
ನಾಚಿಕೆಯಿಂದ ಮುದುಡಿ !
ಗೆದ್ದ ಗೋಲಿಯನೆಲ್ಲ ಕೂಡಿಸಿ
ಚಂದ್ರ ಮನೆಯಲಿ ಇಟ್ಟು !
ಬೆಳ್ಳಂ ಬೆಳತನ ಕಾಯುತಲಿದ್ದನು
ಊಟ ನಿದ್ದೆಯ ಬಿಟ್ಟು !
ತುಂಟ ಪುಟ್ಟನ ಕರೆದು ತೋರಿದ
ಕಿಲಕಿಲ ನಗುವ ಗೋಲಿ !
'ನಿನ್ನಲಿ ಎಲ್ಲಿವೆ' ಸವಾಲು ಹಾಕುತ
ಮಾಡಿದನಾಕ್ಷಣ ಗೇಲಿ !
ಊಟ ಮಾಡುವ ಗಂಗಾಳದಲ್ಲಿ
ತಿಳಿತಿಳಿ ನೀರನು ಹಾಕಿ !
ನೋಡು ಚಂದಿರ ಇಲ್ಲಿವೆ ಗೋಲಿ
ಎನ್ನುತ ಹಾಕಿದ ಕ್ಯಾಕಿ !
ಬಿಂಬದ ಗೋಲಿಯ ನೋಡುತ ಚಂದ್ರನು
ತುಂಟನ ಜಾಣ್ಮೆಗೆ ನಕ್ಕ !
ತನ್ನಯ ಸೋಲನು ಒಪ್ಪಿಕೊಂಡನು
ತೋರದೆ ಎನಿತು ಬಿಂಕ !
ಚಂದ್ರಗೌಡ ಕುಲಕರ್ಣಿ
೧೧-೧೧-೨೧ ತಾಳಿಕೋಟಿ
ಅಲೆಯುಲಿ :7349342777
೩
ಕನ್ನಡ ತೋರಣ
ರಸ ಋಷಿಯಿಂದ ಖ್ಯಾತಿ ಪಡೆಯಿತು
ಮಲೆಯ ನಾಡಿನ ಕುಪ್ಪಳ್ಳಿ !
ಶ್ರೀರಾಮಾಯಣ ದರ್ಶನ ದೊರೆವುದು
ಸುಂದರ ಪಕ್ಷಿ ಕಾಶಿಯಲಿ !
ಸಾಧನಕೇರಿಯ ಸಗ್ಗವ ಮಾಡಿದ
ನಾದಲೀಲೆಯ ಗಾರುಡಿಗ !
ಸಖಿಗೀತ ಗರಿ ಹಕ್ಕಿಯ ಹಾರಿಸಿ
ತೋರಿದ ಕನ್ನಡ ನುಡಿಬೆಡಗ !
ಮೂಕ ಅಜ್ಜಿಯ ಕನಸಿಗೆ ಒಲಿದನು
ಕಡಲ ಭಾರ್ಗವ ಕಾರಂತ !
ಮರಳಿಮಣ್ಣಿಗೆ ಅಳಿದ ಮೇಲೆ
ಬೆಟ್ಟದ ಜೀವವು ಶಾಶ್ವsತ !
ಕಲ್ಮಾಡಿ ಕೋಣ ನೆಲೆನಿಂತಿಹವು
ಓದುಗರೆದೆಯಲಿ ಜೀವಂತ !
ಚಿಕವೀರರಾಜ ಕಾದಂಬರಿಗೆ
ಜ್ಞಾನಪೀಠದ ಮಾನ್ಯತಾ !
ಭಾರತ ಸಿಂಧುರಶ್ಮಿ ಕೃತಿಯು
ಯುಗಯುಗದೊಡಲಿನ ನಿಜಚಿತ್ರ !
ಸಮುದ್ರಗೀತದ ನುಡಿಬೆಡಗಿನಲಿ
ಸಮರಸ ಜೀವನ ಪ್ರಖ್ಯಾತ !
ಕನ್ನಡ ಸಂಸ್ಕೃತಿ ಚಿಂತನ ಕ್ಷೇತ್ರದಿ
ಪ್ರಜ್ಞೆ ಪರಿಸರ ಸಂಸ್ಕಾರ !
ಭಾರತಿಪುರದ ಸೂರ್ಯನ ಕುದುರೆ
ಅನಂತ ಮೂರ್ತಿಯ ಅವತಾರ !
ತುಘಲಕ್ ಜೋಡಿ ರಕ್ಕಸ ತಂಗಡಿ
ಹಿಟ್ಟಿನ ಹುಂಜ ಹಯವದನ !
ತಲೆದಂಡದಲಿ ಕಾರ್ನಾಡ ಕಾಣ್ಕೆ
ಕನ್ನಡ ಕ್ಷಿತಿಜದ ವಿಸ್ತರಣ !
ಜೋಕುಮಾರ ಸ್ವಾಮಿ ಬೋಳೆಶಂಕರ
ಸಿಂಗಾರೆವ್ವನ ಅವತರಣ !
ಶಿವಪುರ ಕಥನ ಹೇಳತೇನ ಕೇಳ
ಸೂರ್ಯ ಶಿಖರದ ಮಹಾಸ್ಫುರಣ !
ಚಂದ್ರಗೌಡ ಕುಲಕರ್ಣಿ
೧೦-೦೭-೨೦೨೦
೪
ಕನ್ನಡ ನಾಡು ನುಡಿಯ ಸೊಬಗು
ಕನ್ನಡ ನಾಡು ನುಡಿಯ ಸೊಬಗನು
ಹೊಗಳಲು ಶಬ್ದವೆ ಸಾಲಲ್ಲ !
ಬೆಳುವಲ ಬಯಲು ಕಡಲು ಕರಾವಳಿ
ಬೆಟ್ಟದ ಘಟ್ಟದ ಸಾಲುಗಳು !
ಕೃಷ್ಣ ಕಾವೇರಿ ತುಂಗ ಭದ್ರಾ
ಅಮಲ ಪ್ರಭೆಯ ಹೊನಲುಗಳು !
ಜಕ್ಕಣ ಡಕ್ಕಣ ಅರಿಷ್ಟನೇಮಿ
ಅಕ್ಷರ ಮೇರು ಕೊಡುಗೆಗಳು !
ಬೇಲೂರ ಬೆಳುಗೊಳ ಬಾದಾಮಿ ಐಹೊಳೆ
ಹಂಪೆಯ ಅದ್ಭುತ ಶಿಲ್ಪಗಳು !
ಬಯಲಾಟ ಲಾವಣಿ ಯಕ್ಷಗಾನದ
ರಂಗಕಲೆಗಳ ತವರೂರು !
ಗಂಧರ್ವ ಭೀಮಸೇನ್ ರಾಜಗುರು ಹಾನಗಲ್
ಮನ್ಸೂರು ಗಾನಕೆ ದಿಗ್ಗಜರು !
ಪಂಪ ಹರಿಹರ ಕುಮಾರವ್ಯಾಸ
ಬಸವ ಪುರಂದರ ನೆಲೆವೀಡು !
ಬೇಂದ್ರೆ ಕುವೆಂಪು ಮಾಸ್ತಿ ಕಾರಂತ
ಕವಿಮಾಕವಿಗಳ ಸಿರಿನಾಡು !
ಕದಂಬ ಚಾಲುಕ್ಯ ಹೊಯ್ಸಳರಾಳಿದ
ವಿಜಯ ನಗರದ ವೈಭವಕೆ !
ರಾಷ್ಟ್ರಕೂಟ ಮೈಸೂರರಸರ
ಕೊಡುಗೆಗಳೆಮಗಿವೆ ಸಂಭ್ರಮಕೆ !
ಚಂದ್ರಗೌಡ ಕುಲಕರ್ಣಿ
9448790787
೫
ಕಳ್ಳುಬಳ್ಳಿಯ ಕನ್ನಡ
ಎದೆಯ ತುಡಿತವ ಬಿಡದೆ ಉಸುರಿದೆ
ಭಾವ ಗೀತೆಯ ಕನ್ನಡ !
ಹಾಲ ಹಸುಳೆಯ ಜೇನು ಸವಿದಿದೆ
ತೊದಲು ನುಡಿಯ ಕನ್ನಡ !
ಉಲಿವ ನಾಲಿಗೆ ಒಡವೆಯಾಗಿದೆ
ಮಧುರ ಮಾತಿನ ಕನ್ನಡ !
ದುಡಿವ ಕೈಗಳ ತೊಡುಗೆಯಾಗಿದೆ
ಚದುರ ಚಲುವಿನ ಕನ್ನಡ !
ಕಲ್ಲು ಬರಹದ ಹಿರಿಮೆ ಸಾರಿದೆ
ಅಮರ ಚರಿತೆಯ ಕನ್ನಡ !
ತಾಳೆ ಓಲೆಯ ಗರಿಯ ಬಿಚ್ಚಿದೆ
ಮತಿಯ ಮಲ್ಲಿಗೆ ಕನ್ನಡ !
ಚಂಪು ವಚನದ ಸಾರ ಹೀರಿದೆ
ಲಲಿತ ಸುಲಲಿತ ಕನ್ನಡ !
ರಗಳೆ ಷಟ್ಪದಿ ತೇಜ ತೋರಿದೆ
ಚತುರ ಚಂದನ ಕನ್ನಡ !
ತ್ರಿಪದಿ ಕೀರ್ತನ ಕಂಪು ಹರಡಿದೆ
ದೇಸಿ ಸೊಗಡಿನ ಕನ್ನಡ !
ಗೀತ ಲಾವಣಿ ಲಾಲಿ ಹಾಡಿದೆ
ಏಕತಾರಿಯ ಕನ್ನಡ !
ಬಯಲಿನಾಟದ ಬೆಡಗು ಬೀರಿದೆ
ಹಳ್ಳಿ ಹಗರಣ ಕನ್ನಡ !
ತತ್ವ ಪದಗಳ ನಾದ ಸೂಸಿದೆ
ಕಳ್ಳು ಬಳ್ಳಿಯ ಕನ್ನಡ !
ಚಂದ್ರಗೌಡ ಕುಲಕರ್ಣಿ
೬-೧೦-೨೧
೬
ಕನ್ನಡ ನುಡಿ
ಕನ್ನಡ ಮೊದಲು ಮೊಳಕೆಯೊಡೆಯಿತು
ಹಲ್ಮಿಡಿ ಶಾಸನದೆದೆಯಲ್ಲಿ !
ಬಾದಾಮಿ ಬಂಡೆಯ ಹಣೆಸಿಂಗರಿಸಿತು
ಅಕ್ಷರಮೇರು ಕೃಪೆಯಲ್ಲಿ !
ಪದವರಿತವರು ಓದದೆ ಬರೆದರು
ವಿಜಯನ ಕಾವ್ಯ ಮಾರ್ಗದಲಿ !
ಕೋಗಿಲೆ ದುಂಬಿಯ ಹಿಂಡು ಹಾಡಿತು
ಪಂಪನ ಬನವಸೆ ನಾಡಿನಲಿ !
ಆಡಿದ ಮಾತೇ ನುಡಿಮುತ್ತಾಯಿತು
ಮಾಶಿವಶರಣರ ವಚನದಲಿ !
ತಾಳತಂಬೂರಿಯ ಸ್ವರದಲಿ ಬೆರೆಯಿತು
ದಾಸವರೇಣ್ಯರ ಹಾಡಿನಲಿ !
ಜನಮನ ಭಾವವ ತಿದ್ದಿ ತೀಡಿತು
ಗುರು ಸರ್ವಜ್ಞನ ತ್ರಿಪದಿಯಲಿ !
ದೇಸಿ ಸತ್ವದ ಕೆನೆಮೊಸರುಣಿಸಿತು
ತತ್ವನುಭಾವದ ಪದಗಳಲಿ !
ಸಾಧನಕೇರಿಗೆ ಸಗ್ಗವ ತಂದಿತು
ನಾಕು ತಂತಿಯ ಮಿಡಿತದಲಿ !
ರಾಮಾಯಣದ ದರುಶನ ನೀಡಿತು
ರಸ ಋಷಿ ನಿಜದ ತುಡಿತದಲಿ !
ಕಡಲ ತರಂಗದ ಸೀಮೆಯ ದಾಟಿತು
ಭಾರ್ಗವ ಕೃತಿಗಳ ಹೊಳಪಿನಲಿ !
ಅದ್ಭುತ ಲೋಕದ ಗೂಡವ ಒಡೆಯಿತು
ಪೂರ್ಣ ಚಂದ್ರನ ಬೆಳಕಿನಲಿ !
ಚಂದ್ರಗೌಡ ಕುಲಕರ್ಣಿ
೭
ಇದ್ದೇ ಇರುವರು ಇವರು
ಬೆಲ್ಲದ ಚೂರು ಬಿದ್ದರೆ ಸಾಕು
ಮುತ್ತಿ ಬಿಡುವವು ಇರುವೆ !
ಸಾಲು ಸಾಲು ಹಚ್ಚಿ ಬರುವವು
ಕರೆಯದೆ ಇದ್ದರು ತಾವೆ !
ತುಂಬ ಹೊದ್ದು ಮಲಗಿದರೂನು
ಬಂದೇ ಬಿಡುವವು ಸೊಳ್ಳೆ !
ಗೊತ್ತಿಲ್ದಂಗ ರಕ್ತ ಹೀರಿ
ಎಬ್ಬಿಸಿ ಬಿಡುವವು ಗುಳ್ಳೆ !
ಹುಳ ಹುಪ್ಪಡಿ ಹಿಡಿಯಲೆಂದು
ಓಡಾಡುವುದು ಹಲ್ಲಿ !
ನುನುಪು ಗೋಡೆ ಇದ್ದರೂ ಜಾರಿ
ಬಿಳುವುದಿಲ್ಲ ಮಲ್ಲಿ !
ಮಾವಿನ ಹಣ್ಣಿನ ಸಿಹಿಸಿಹಿ ರುಚಿಗೆ
ದಾಳಿ ಇಡುವವು ನೂರು !
ರೋಗ ಹರಡುವ ನೊಣಗಳ ಖ್ಯಾತಿಗೆ
ಸರಿಸಮ ನಿಲ್ಲರು ಯಾರು !
ಎಂತಹ ಚಂದದ ಎಳೆರಂಗೋಲಿ
ಪುಟ್ಟ ಜೇಡನ ಜಾಲ !
ಮತ್ತೆ ಮತ್ತೆ ಹೆಣೆದು ಬಿಡುವುದು
ಬಳಸಿ ರೇಶಿಮೆ ನೂಲ !
ಗುಡಿಸಲೆ ಇರಲಿ ಅರಮನೆ ಇರಲಿ
ಇದ್ದೇ ಇರುವರು ಇವರು !
ಏನೇ ಇದ್ದರೂ ಮನುಜನು ಇರುವ
ತಾಣವೆ ಇವುಗಳ ತವರು !
ಚಂದ್ರಗೌಡ ಕುಲಕರ್ಣಿ
೧೧-೧೧-೨೧
೮
ಕಾಮಿ ಮತ್ತು ಶಾಲೆ
ಶಾಲೆಗೆ ಹೋಗುವ ಪುಟ್ಟನ ಕಂಡು
ಕಾಮಿ ಆಸೆಯ ಪಟ್ತು !
ಯುನಿಫಾರ್ಮ್ ತೊಟ್ಟು ಟಿಪ್ ಟಾಪಾಗಿ
ಹೊರಟಿತು ಪುಸ್ತಕ ಹೊತ್ತು !
ಬೆಕ್ಕೆ ಬೆಕ್ಕೆ ಮುದ್ದಿನ ಸೊಕ್ಕೆ
ಕವಿತೆಗೆ ಹೆಜ್ಜೆ ಹಾಕ್ತು !
ನಾಯಿ ಮರೀ ತಿಂಡಿ ಬೇಕೆ
ಹಾಡಿಗೆ ನೃತ್ಯ ಮಾಡ್ತು !
ಬಾರದ ಮಗ್ಗಿ ತಿಳಿಯದ ಲೆಕ್ಕ
ಬಾಳ ಪೇಚಿಗೆ ಸಿಕ್ತು !
ಬಿಟ್ಟೂ ಬಿಡದ ಪಾಠ ಕೇಳಿ
ತಲೆಯೆ ಕೆಟ್ಟು ಹೋಯ್ತು !
ದಿನದಿನ ಕೂತು ಓದಿ ಬರೆಯುವ
ಮಕ್ಕಳ ಕಷ್ಟ ನೋಡಿ !
ಅರ್ಧ ದಿನಕೆ ಸಾಕ್ ಸಾಕಾಗಿ
ಬಂದೇ ಬಿಟ್ತು ಓಡಿ !
ಅಮ್ಮ ಪುಟ್ಟನ ಶಾಲೆ ಬಿಡಿಸು
ನನ್ ಕೂಡ ಆಡ್ತಾ ಇರಲಿ !
ಕೂತಲ್ಲಿ ಕೂತು ಓದಿ ಬರೆಯುವ
ನೋವು ಸಂಕ್ಟ ತಪ್ಲಿ !
ಮುದ್ದು ಕಾಮಿಗೆ ಹೇಳಿಬಿಟ್ಳು
ಪುಟ್ಟನ ಅಮ್ಮ ನಕ್ಕು !
ಧ್ಯಾನವಿಟ್ಟು ಶಾಲೆ ಕಲಿವುದು
ಪುಟ್ಟ ಮಕ್ಕಳ ಹಕ್ಕು !
೧೪-೧೧-೨೧
೯
ಅದ್ಭುತ ಲೋಕ
ಹಾರುವ ತಟ್ಟೆಯ ಏರಿ ಹೋಗಿ
ಕಂಡೆನು ಅದ್ಭುತ ಲೋಕ !
ಪ್ರಾಣಿ ಪಕ್ಷಿಗೆ ಮಾತ್ ಬರತಿದ್ವು
ಮನುಜ ಮಾತ್ರ ಮೂಕ !
ಶಾಲೆಯ ಮಕ್ಕಳು ಬಳಸುತಲಿದ್ದರು
ಕೈಗಳ ಸನ್ನೆಯ ಭಾಷೆ !
ಮೊಣಕಾಲ್ ವರೆಗೆ ಜೋತಾಡತಿದ್ವು
ರೊಬೋಟ್ ಗುರುವಿನ ಭಾಷೆ !
ನೆಲದ ಮೇಲೆ ಓಡುತಲಿದ್ದವು
ಪಕ್ಷಿಗೆ ಇರಲಿಲ್ ರೆಕ್ಕೆ !
ಹಗಲಿನಲ್ಲಿಯು ಮಿನುಗುತಲಿದ್ದವು
ಆಗಸದೊಳಗಿನ ಚುಕ್ಕೆ !
ಗಿಡದಲಿ ಗೂಡು ಕಟ್ಟಿದ ಬೆಕ್ಕಿಗೆ
ಇದ್ದವು ಎರಡೇ ಕಾಲು !
ನಾಲ್ಕು ಕಾಲಿನ ಹಂಸ ಪಕ್ಷಿಯು
ಹಿಂಡುತಲಿತ್ತು ಹಾಲು !
ಓಡಾಡಲಿಕ್ಕೆ ಇರಲೇ ಇಲ್ಲ
ಬಸ್ಸು ಕಾರು ರೈಲು !
ಕಾಣಲೆ ಇಲ್ಲಾ ಪೊಲೀಸ್ ಸ್ಟೇಶನ್
ಅಗ್ರಹಾರದ ಜೇಲು !
ಬೇಯಿಸಿ ತಿನ್ನುವ ತಿನಿಸೇ ಇಲ್ಲಾ
ತೊಪ್ಪಲು ಗಡ್ಡೆ ಗೆಣಸು !
ಅಲ್ಲಿ ನಿಲ್ಲದೆ ಓಡಿ ಬಂದೆನು
ಒಂದೇ ಒಂದು ತಾಸು !
೧೦
ಮಲ್ಲಿಗೆ ಕಂಪು !
ಸವಿಯ ಕನ್ನಡ ನುಡಿವ ಮಾತಲಿ
ಮಧುರ ಮಲ್ಲಿಗೆ ಕಂಪಿ - ದೆ !
ಕರುಳ ಬಳ್ಳಿಯ ಸಹಜ ನುಡಿಯಲಿ
ಕೊಳಲ ನಾದದ ಇಂಪಿ - ದೆ !
ತಟ್ಟು ಕೋಟೆಯ ಬಂಡಿ ಬರಹಕೆ
ವೀರ ಧೀರನ ಗೆಲುವಿ - ದೆ !
ಕುರಿತು ಓದದೆ ಬರೆವ ಜಾಣಗೆ
ರಾಜ ಮಾರ್ಗದ ಬಲವಿ - ದೆ !
ಚಂಪು ಷಟ್ಪದಿ ರಗಳೆ ಛಂದದಿ
ಕಾವ್ಯ ಬಂಧದ ಹದವಿ - ದೆ !
ವೀರ ಅದ್ಭುತ ಶಾಂತ ರಸಗಳ
ಸ್ವಾದ ಸವಿಗಳ ಮುದವಿ - ದೆ !
ದೇಸಿ ಜನಪದ ಹಾಡು ಕತೆಯಲಿ
ಹಳ್ಳಿ ಹೈದರ ಉಸಿರಿ - ದೆ !
ವಚನ ಕೀರ್ತನ ತತ್ವ ಪದದಲಿ
ಸಂತ ಮಾಂತರ ಹೆಸರಿ - ದೆ !
ದತ್ತ ರಸ ಋಷಿ ಮಾಸ್ತಿ ಕೃತಿಯಲಿ
ಹೊಸತು ಸಂಸ್ಕೃತಿ ಹುರುಡಿ - ದೆ !
ಕಡಲ ಭಾರ್ಗವ ಪೂರ್ಣ ಚಂದ್ರನ
ನಡೆಗೆ ಹಸಿರಿನ ಘಮಲಿ - ದೆ !
ಕಾವ್ಯ ನಾಟಕ ಸಣ್ಣಕತೆಯಲಿ
ಹರಿತ ತೇಜದ ಮತಿಯಿ - ದೆ !
ಭಾವ ಗೀತೆಗೆ ಲಲಿತ ಬಂಧಕೆ
ನವಿರು ಪರಿಮಳ ಗತಿಯಿ - ದೆ !
೧೧
ಪುಟ್ಟನ ಗೋಳು
ಸಾರೆಗಮದಲ್ಲಿ ಹಾಡನು ಹಾಡ್ಸಿ
ತಾರೆಯಾಗಿಸಿ ಬಿಟ್ರು !
ಕಣ್ಣು ಮುಚ್ಚಿ ತೆಗೆಯೋದರಲ್ಲಿ
ಹೀರೊ ಹೆಸರು ಕೊಟ್ರು !
ಪ್ರೀತಿ ತುಂಬಿ ಹಾಡುವ ಖುಷಿಯನು
ಸ್ಪರ್ಧೆಗ್ಹಾಕಿಬಿಟ್ರು !
ಕೀರ್ತಿ ಬಹುಮಾನಾಸೆ ತೋರ್ಸಿ
ಬಂಧಿಸಿಟ್ಟು ಬಿಟ್ರು !
ಉಪ್ಪು ಕಾರ ಹಚ್ಚಿ ಹೊಗಳಿ
ಅಟ್ಟಕ್ಕೇರಿಸಿಬಿಟ್ರು !
ಮುಗ್ಧ ಮನದಿ ಹಾಡುವ ಹಾಡಿನ
ಚಟ್ಟ ಕಟ್ಟಿಬಿಟ್ರು !
ಓದು ಶಾಲೆ ಮನೆಮಠ ಮರೆಸಿ
ಗಾಣಕೆ ಹೂಡಿಬಿಟ್ರು !
ಹಿಂಡಿಹಿಂಡಿ ಹಿಪ್ಪೆ ಮಾಡಿ
ನರಕಕೆ ದೂಡಿ ಬಿಟ್ರು !
ಗೆದ್ದು ಬಂದ ಗೆಳೆಯ ಎಂದು
ಹಾಡಿಹೊಗಳಿ ಬಿಟ್ರು !
ಮೊದಲಿನ ಪ್ರೀತಿ ಸಲುಗೆ ತೋರದೆ
ದೂರಕೆ ನಿಂತು ಬಿಟ್ರು !
ಅಜ್ಜಿ ತಾತ ಬಂಧು ಬಳಗ
ಹೆಮ್ಮೆತಾಳಿಬಿಟ್ರು !
ಅಪ್ಪಿ ತಬ್ಬಿ ಮುದ್ದಾಡಲಾರದೆ
ದೊಡ್ಡವ್ನ ಮಾಡಿಬಿಟ್ರು !
ತಂದೆ ತಾಯಿ ಅಣ್ಣತಮ್ಮರೆಲ್ಲ
ತುಟ್ಟಿಯಾಗಿಬಿಟ್ರು !
ತಾರಾಪಟ್ಟಕೆ ನನ್ನ ಬಾಲ್ಯವ
ಬಲಿಯ ಕೊಟ್ಟುಬಿಟ್ರು !
ಚಂದ್ರಗೌಡ ಕುಲಕರ್ಣಿ
ಚಿಲಿಪಿಲಿ
ತಾಳಿಕೋಟಿ -೫೮೬೨೧೪
ವಿಜಯಪುರ ಜಿಲ್ಲೆ.
೧೨
ಸೂರ್ಯನು ಕಂಡ ಕನಸು
ಬಣ್ಣ ಬಣ್ಣದ ಮಳೆಬಿಲ್ಲಿಂದ
ಸಿಂಗರಗೊಂಡಿದೆ ಮುಗಿಲು !
ಅದ್ಭುತ ಚಿತ್ರವ ನೋಡುತ ನೋಡುತ
ಮೈಯನು ಮರೆತಿದೆ ಹಗಲು !
ಸೂರ್ಯ ಕಿರಣವು ತುಂತುರ ಭೇದಿಸಿ
ಚಲ್ಲಿತು ಏಳು ಬಣ್ಣ !
ಮೊಗವನು ಬಾಡಿಸಿ ಕಳೆಗುಂದಿಹವು
ಹವಳ ಮುತ್ತು ರತ್ನ !
ಆಗಸಕೇರಿ ನಲಿದರು ಮಕ್ಕಳು
ಮುಟ್ಟುತ ಇಂದ್ರಚಾಪ !
ಮುಟ್ಟಿ ತಟ್ಟಲು ಕರಗಿ ಬಿಟ್ಟಿತು
ತಾಳದೆ ಬಿಸಿಲಿನ ತಾಪ !
ಹದಮಳೆಗಾಲದ ನಡುಮಧ್ಯಾಹ್ನದಿ
ಸೂರ್ಯನು ಕಂಡ ಕನಸು !
ಒಂದೇ ಕ್ಷಣದಲಿ ಕದ್ದುಬಿಟ್ಟಿತು
ತುಂಟ ಮಕ್ಕಳ ಮನಸು !
ಕಣ್ತೆರೆದಿಟ್ಟು ನೋಡಲುಬೇಕು
ಪ್ರಕೃತಿ ವಿಸ್ಮಯ ನೂರು !
ಗಾಲಿಗಳಿಲ್ಲದೆ ಸಾಗುತಲಿಹುದು
ಆಗಸ ಬೆಡಗಿನ ತೇರು !
೧೩
ನಾವೇ ನಾಳಿನ ಬೀಜಗಳು
ಬಣ್ಣದ ಗರಿಗಳ ಕನಸನು ಕಾಣುವ
ಸುಂದರ ನವಿಲಿನ ತತ್ತಿಗಳು !
ಹಣತೆಯ ಹೆಸರಿಗೆ ಉಸಿರನು ಬೆರೆಸುವ
ತೈಲದಿ ಅದ್ದಿದ ಬತ್ತಿಗಳು !
ಚಲುವು ಚಲುವಿನ ಕಂಪನು ಸೂಸುವ
ಪ್ರೀತಿ ಚಿಲುಮೆಯ ಕೊಂಡಿಗಳು !
ಕನ್ನಡ ಅಮ್ಮನ ಎದೆ ಸಿಂಗರಿಸಿದ
ಕುಸುರಿ ಕಸೂತಿಯ ಗೊಂಡೆಗಳು !
ಹೂವಿನ ಪರಿಮಳ ಉಂಡ ದುಂಬಿಯು
ಒಸರಿದ ಮಧುರ ಜೇನುಗಳು !
ಕುಸುಮದ ಪಕಳೆಯ ರೇಶಿಮೆ ನೂಲಿನ
ಪೂರ ಸಪೂರ ರೇಣುಗಳು !
ಹಚ್ಚ ಹಸುರಿನ ಗಿಡಮರಗಳಲಿ
ಗೂಡನು ಕಟ್ಟುವ ಹಕ್ಕಿಗಳು !
ನೆಲಮುಗಿಲಾಚೆಗೆ ತೋರಣ ಕಟ್ಟಿದ
ಬಾನ ಚಂದಿರ ಚುಕ್ಕೆಗಳು !
ಮೊಳಕೆ ಚಿಗುರು ಹೂಹೂ ಗೊಂಚಲ
ಅಮೃತ ಸುಧೆಯ ಬೀಜಗಳು !
ಕಪ್ಪನೆ ಮೋಡದ ಒಡಲನು ಸೀಳುವ
ಸಿಡಿಕೋಲ್ ಮಿಂಚಿನ ತೇಜಗಳು !
೧೪
ಹಾಕುವೆ ಹಿಡಿಹಿಡಿ ಶಾಪ
ಅಕ್ಷರ ಶಬ್ದ ಉಲಿಯಲೊಲ್ಲವು
ನಾಲಿಗೆಗ್ಹಿಡಿದಿದೆ ಜಿಡ್ಡು !
ವೇಗದಿ ಅಕ್ಷ ಮೂಡಲೊಲ್ಲವು
ಪೆನ್ನಿಗೆ ಬಡಿದಿದೆ ಜಡ್ಡು !
ಕೇಳಿದ ರೂಢಿಯೆ ತಪ್ಪಿ ಹೋಗಿದೆ
ಟೀಚರ್ ಹೇಳುವ ಪಾಠ !
ಮಧುರ ರುಚಿಯನು ಕಳೆದುಕೊಂಡಿದೆ
ಮನೆಯಲಿ ಮಾಡುವ ಊಟ !
ಸಮವಸ್ತ್ರಗಳ ಧೂಳು ಹಿಡಿದಿವೆ
ಬಳಸಲಾರದೆ ನಿತ್ಯ !
ಪುಸ್ತಕಕ್ಹೆಣೆದ ಬಲೆಯಲಿ ಜೇಡವು
ಮಾಡುತಲಿರುವುದು ನೃತ್ಯ !
ಸ್ಮರಣ ಮನನದ ಹಾದಿ ತಪ್ಪಿದೆ
ಮೆದುಳಿಗೆ ಜಂಗು ಹತ್ತಿ !
ಗ್ರಹಿಕೆ ಸ್ಫುರಣದ ನಂಟು ಕಳಚಿದೆ
ಕಟ್ಟಲಿ ಹೇಗೆ ಬುತ್ತಿ !
ಗಣಿತ ಮಗ್ಗಿ ಸೂತ್ರವೆಲ್ಲವು
ಕತ್ತಲ ಕೋಣೆಯ ಸೇರಿ !
ಕವಿತೆ ಕಲ್ಪನೆ ಭಾವದಲೆಗಳು
ದೂರಕೆ ಹೋಗಿವೆ ಹಾರಿ !
ಕಲಿಕೆಯ ಜೀವವ ಹಿಂಡಿಬಿಟ್ಟಿದೆ
ಎದೆಯಲಿ ಉರಿಉರಿ ತಾಪ !
ಕರೊನಾ ಕ್ರೂರಿ ಕಷ್ಟವ ಕೊಟ್ಟಿತು
ಹಾಕುವೆ ಹಿಡಿಹಿಡಿ ಶಾಪ !
ಚಂದ್ರಗೌಡ ಕುಲಕರ್ಣಿ
೧೨-೯-೨೧
೧೫
ಅಕ್ಷರ ಹೂವಿನ ಮಾಲೆ
ಪಡುವಣ ದಿಕ್ಕಲಿ ಜುಳುಜುಳು ಜುಳುಜುಳು
ಹರಿವುದು ಬೆಣ್ಣೀ ಹಳ್ಳ !
ಜಡಿಮಳೆ ಹೊಡೆತಕೆ ಕೊರಕಲು ತೆರಕಲು
ಗೌರೀ ಸರುವಿನ ಕೊಳ್ಳ !
ನಂಬಿಕೆ ಬಾಳಿನ ತಾರಕ ಮಂತ್ರವು
ಕಲ್ಮೇಶ್ವರನ ಹೆಸರು !
ಬೆವರನು ಸುರಿಸಿ ತಣಿಯುತ ಉಣುವರು
ಹಾಲು ಹೈನ ಮೊಸರು !
ಪತ್ರಿಕಟ್ಟೆಯ ಸನಿಹದಲೆರಡು
ದುಂಡನೆ ಉಸಿರು ಕಲ್ಲು !
ಹಿಡಿದ ಬೆನ್ನನು ಹಗುರಾಗಿಸುವ
ಜನಪದ ಜಾಣ್ಮೆಯ ಕೀಲು !
ಹಿರಿಬೆಟ್ಟಗಳ ನಾಚಿಸಿಬಿಡುವ
ಜೋಡಿ ಕೆರೆಗಳ ದಿಬ್ಬ !
ಬೇವು ಬೆಲ್ಲದಿ ಈಜುವ ರೈತಗೆ
ದಿನವೂ ಯುಗಾದಿ ಹಬ್ಬ !
ಶ್ರದ್ಧೆಯ ಹಿರಿಯರು ವಾರವ ಹಿಡಿದು
ದೇವಿಯ ಉಡಿಯನು ತುಂಬಿ !
ಕೂರಿಗೆ ಹೂಡಿ ಬೀಜ ಬಿತ್ತುವರು
ಭೂಮ್ತಾಯಿಯನು ನಂಬಿ !
ಮಣ್ಣಿನ ಕಣಕಣ ಕಸುವಿಗೆ ಸಾಕ್ಷಿ
ಬೆಳೆದು ನಿಂತ ಹಸಿರು !
ಎಂಟೆಂಟೆತ್ತಿನ ಹಂತಿಯ ಕಣದಲಿ
ಖಂಡುಗ ರಾಶಿಯ ತೇರು !
ಊರ ಬಯಲಲಿ ಕಂಗೊಳಿಸುವುದು
ಚಿಣ್ಣರ ಕನ್ನಡ ಶಾಲೆ !
ಕಡದ ಹಳ್ಳಿಯ ಸಿರಿಸಂಪದಕೆ
ಅಕ್ಷರ ಹೂವಿನ ಮಾಲೆ !
ಚಂದ್ರಗೌಡ ಕುಲಕರ್ಣಿ
೨೦-೦೫-೨೦೨೧
೧೬
ನನ್ನೂರು ಕಡದಳ್ಳಿ
ಕಡದಳ್ಳಿ ನನ್ನ ಊರು
ಒಕ್ಕಲಿನ ತಾಯಿ ತವರು !
ಹೆಂಗಾರ ಮರಿsಲಿ ನಿನ್ನ
ಬೆಳೆಯುವೆ ಮುತ್ತು ರತ್ನ !
ಎರೆನೆಲದ ತುಂಬ ಕೆಸರು
ತೊನೆದಾಡತೈತಿ ಹಸಿರು !
ಹನ್ನೆರಡು ತಿಂಗ್ಳ ಕಾಲ
ಹರಿಯುವುದು ಬೆಣ್ಣಿ ಹಳ್ಳ !
ಹದಮಳೆಗೆ ಬೀಜ ಬಿತ್ತಿ
ಕಟಿಕೊಡುವ ವರುಷ ಬುತ್ತಿ !
ಜೋಡ - ಕೆರೆಯ ತುಂಬ ನೀರು
ಕೆನೆ ಹಾಲು ಗಟ್ಟಿ ಮೊಸರು !
ತಿಪ್ಪ್ಯಾಗ ಸೆಗಣಿ ಗೊಬ್ರ
ಡಂಬರಗಿ ಹೊಟ್ಟಿ ಉಬ್ರ !
ಎಂಟೆದೆಯ ಬಂಟ ಎತ್ತು
ಮೇಯ್ಸುವನು ಕಣಕಿ ಕಿತ್ತು !
ಬನ್ನಿ ಮರಕೆ ಪೂಜೆ ಸಲ್ಸಿ
ದಶದಿಕ್ಕು ಚರಗ ಚಲ್ಸಿ !
ಹೊಲದಾಗ ಹೋಳ್ಗಿ ಊಟ
ಹೊಡೆತೆನೆಯು ತೂಗುವಾಟ !
ಸುಗ್ಯಾಗ ನೆಟ್ಟು ಮೇಟಿ
ಹಾಡುವನು ಹಂತಿ ಕಟ್ಟಿ !
ತೂರುವನು ಮೆಟ್ಟ ಹಚ್ಚಿ
ಒಲಿಯುವನು ದೇವ ಮೆಚ್ಚಿ !
ಶ್ರಾವಣಕ ದೇವ್ರ ಜಾತ್ರಿ
ಕಲ್ಮೇಶನೊಲುಮೆ ಖಾತ್ರಿ !
ಬೆಳತನಕ ಹೊತ್ತು ಪಾಲ್ಕಿ
ಧರಿಸುವನು ಭಕ್ತಿ ಝುಮ್ಕಿ !
ದುಡಿಯುವುದೆ ಶ್ವಾಸದುಸಿರು
ಸುರಿಸುವನು ರೈತ ಬೆವರು !
ಕಾಯಕದ ಕರ್ಮ ಯೋಗಿ
ಹಂಚಿ- ಉಣುವ ದಿಟದ ತ್ಯಾಗಿ !
ಚಂದ್ರಗೌಡ ಕುಲಕರ್ಣಿ
೧೧-೧೨-೨೦೨೦
೧೭
ಪಾಟಿಚೀಲ
ಅಯ್ಯೋ ಮರಿಇಷ್ಟೊಂದ ಭಾರ
ಹೆಂಗ ಹೊರತಿ ನೀನು !
ಪಠ್ಯ ಪುಸ್ತಕನೋಟುಬುಕ್ಕೆಲ್ಲ
ಹತ್ತು ಹದಿನೆಂಟೂನು !
ಉಸಿರಾಡೋಕು ಆಗ್ತಾಇಲ್ಲ
ಹೊಟ್ಟೆ ಉಬ್ಬಿ ನಂಗೆ !
ಒಂಚೂರುಹಾಳಿತುರಕತೇನಂದ್ರು
ಆಗೋದಿಲ್ಲ ನಿಂಗೆ !
ಬಸ್ಸಲ್ಲಿ ಹತ್ತೊ ಅವಸರದಾಗ
ಆಚೆಈಚೆ ಬಡಿದು !
ಮೈಕೈಯಲ್ಲ ನುಗ್ಗಾಗತೈತಿ
ಅವರಿವರು ತಿವಿದು !
ಬೆನ್ಮೇಲತ್ತಿ ಕೂತಿದ್ರೂನು
ಇಲ್ಲ ಎಷ್ಟು ಹರುಷ !
ಯಾರ ಮುಂದೆ ಹೇಳಿಕೊಳ್ಳಲಿ
ನಂಗೆ ಆಗೊ ತ್ರಾಸ !
ಬೆಂಚಿನ ಮೇಲೆ ಕೂತ್ಕೊಂಡ ನೀನು
ನನ್ನನ್ನು ಇಟ್ಟು ನೆಲಕ !
ಹೆಂಗಬೇಕಂಗ ಜಗ್ಗಾಡತೀದಿ
ತಗಿಲಾಕ ಒಂದೆರಡ ಪುಸ್ತಕ !
ಅಯ್ಯೋಮರಿ ಹಾಗ ನೋಡಬೇಡ
ನಿನ್ನ ಮೇಲಿಲ್ಲ ಕೋಪ ,!
ಶಾಲೆ ಮಾಸ್ತರ ಸರಕಾದೋರಿಗೆ
ಹಾಕುತ್ತಿರುವೆ ಶಾಪ !
೧೮
ತೆರೆದುಕೊಂಡಿವೆ ಬೀಗ
ಅಬ್ಬಾ ಈಗ ಬಿಡುಗಡೆ ಸಿಕ್ಕಿತು
ಮನೆಮನೆ ಜೇಲಿನಿಂದ !
ಓಡಿ ಹೋಗಿ ಸೇರಿಬಿಡುವೆನು
ಶಾಲೆ ಗೆಳೆಯರ ವೃಂದ !
ಬಹಳ ದಿವಸದಿ ಒಳಗೇ ಉಳಿದಿವೆ
ಆಡದ ಗುಟ್ಟಿನ ಮಾತು !
ಒಬ್ಬೊಬ್ಬರಲು ಹಂಚಿಕೊಳ್ಳುವೆ
ಕರೋನ ಸಂಕಟ ಕುರಿತು !
ಗೆಳೆಯರ ಮುಖವನು ನೋಡದೆ ಇಲ್ಲಿಗೆ
ಒಂದೆರಡ ವರುಷ ಆಯ್ತು !
ಹುಡದಿ ಹಾಕ್ತಿವೆ ಗೆಳೆಯರ ಚಿತ್ರ
ಎದೆಯಲಿ ಅಡಗಿ ಕೂತು !
ಕಣ್ಮನಗಳಲಿ ಮಾಸದೆ ಉಳಿದಿವೆ
ಟೀಚರ್ ಪ್ರೀತಿಯ ನೋಟ !
ನೆನಪಿನ ಪುಟದಲಿ ಅಚ್ಚೊತ್ತಿರುವವು
ಕೇಳಿದ ವಿಷಯದ ಪಾಠ !
ಕೈಮಾಡೆಲ್ಲರ ಕರೆಯುತಲಿರುವವು
ಶಾಲೆಯ ಆಟದ ಬಯಲು !
ಕೈಬೆರಳಿನಲಿ ಹಸಿಹಸಿಯಾಗಿದೆ
ಬಿಸಿಬಿಸಿ ಊಟದ ಘಮಲು !
ಈಗ ಇದೀಗ ತೆರೆದುಕೊಂಡಿವೆ
ಶಾಲೆಗೆ ಹಾಕಿದ ಬೀಗ !
ಲೋಕದ ಎಲ್ಲೆಡೆ ತೊಲಗಿ ಹೋಗಲಿ
ಕೋವಿಡ್ ಅಂಜಿಕೆ ಬೇಗ !
***
No comments:
Post a Comment