ನಡೆದ ದಾರಿಯನೆಲ್ಲ ಬಿಡಲಾರ್ದೆ ಅಳುಕಿಸಿ
ನುಡಿ ಬೆಡಗಿನ್ಹಂಗ ದೂರಿರಿಸಿ ! ಕುರುಹನ್ನೆ
ಪುಡಿಯ ಮಾಡಿದನು ಪ್ರಭುದೇವ !೧!
ಅರಿವಿನಾಳವ ತೋರಿ ಬೆರಗು ವಿಸ್ಮಯ ಸಾರಿ
ಶರಣ ಅವಧೂತ ಪ್ರಜ್ಞೆಯನು ! ಮೀರಿದವ
ಪರಮ ಜಿಜ್ಜ್ಯೋತಿ ಅಲ್ಲಮನು !೨!
ಭ್ರಮಣೆ ಭಯ ದೂರಿರಿಸಿ ಸಮಚಿತ್ತ ಅಣಿಗೊಳಿಸಿ
ಶ್ರಮಣ ಧಾರೆಗಳ ಸತ್ವವನು ! ಹೀರಿದ
ಭ್ರಮರ ಬಂಡುಣಿಗ ಅಲ್ಲಮನು !೩!
ಶಬ್ದ ಸಂಕಲೆ ಮುರಿದು ಅಬ್ಧಿ ಪಾರವ ಹರಿದು
ಸಬ್ಧವಾಗಿರುವ ಕೊಂಡಿಗಳ ! ಕಳಚಿದನು
ಲಬ್ಧ ವಿಶೇಷ ಅಲ್ಲಮನು !೪!
ಯಾರ ಶಿಷ್ಯನೂ ಅಲ್ಲ ಯಾರ ಗುರುವೂ ಅಲ್ಲ
ಯಾರ ಮನೆಮಗನು ತಾನಲ್ಲ ! ಅಲ್ಲಮ
ಮೀರಿ ನಡೆದನು ಲೋಕವನು !೫!
ಗುರುವಿನ ಹಂಗಿಲ್ದೆ ದರುಶನದ ಸಂಗಿಲ್ದೆ
ಅರಿವಿನ ಹಾದಿ ಹಿಡಿದಂಥ ! ಅಲ್ಲಮಗೆ
ಚರಣವಾಗಿಹವು ಮೈಯಲ್ಲ !೬!
***
ಕಲ್ಪಿತದ ಸಂಕಟಕೆ ಎಲ್ಲಿ ಪರಿಹಾರಿಹುದು
ಸಲ್ಲದು ನಿಜದ ಉಪಚಾರ ! ಎನ್ನುತ್ತ
ಇಲ್ಲವಾಗಿಸಿ ಮನವನ್ನು !೭!
ಸುಮ್ಮನಿರಿ ಎಂದೆನಲು ಹೆಮ್ಮೆ ನುಡಿ ಬಳಸುವುದೆ
ಸುಮ್ಮನಿರಿಸುವುದು ಸುಲಭಲ್ಲ ! ಭಾಷೆಗಳ
ಗಮ್ಮನನು ಅಳಿಸಿ ಹಾಕದಲೆ !೮!
ಸಂಕೇತ ಕುರುಹುಗಳ ಬಿಂಕತನ ಕಳಿಬೇಕು
ಸುಂಕದ ಭಾರ ಇಳುಬೇಕು ! ಬಂಧನದ
ಸೋಂಕಳಿದು ನಿಜವ ತಿಳಿಬೇಕು !೯!
ಶಬ್ದ ಮುಗ್ಧದಿ ಬೆರೆತು ಸ್ತಬ್ಧವಾಗಲುಬೇಕು
ಅಬ್ಧಿ ನೀರೆಲ್ಲ ಲಯವಾಗಿ ! ವ್ಯೋಮದಲಿ
ಲಬ್ಧವಾಗುವುದ ಅರಿಬೇಕು !೧೦!
ಬೆಂಕಿಯೊಳಗಣ ಬಿಸಿಯು ಸೋಂಕುಜಲ ಬಿಸಿಗುಂಟೆ
ಮಂಕು ಮಾತಿನಲಿ ಬಣ್ಣಿಸಲು ! ಅನುಭಾವ್ದ
ಕಂಕಿ ಒಕ್ಕಲದಿ ಸಿಲುಕುವೆವು !೧೧!
ಪರಮ ಗುರು ಅಲ್ಲಮನ ನಿರಶನದ ಮಾರ್ಗವದು
ಮುರಿದು ಕಟ್ಟುವುದ ಕಲಿಸಿತು ! ಲೋಕದ
ಮರಣ ಗೆಲುವುದನ ಅರಿಸಿತು !೧೨!
***
ಸಿದ್ಧ ಸತ್ಯವನೊಡೆದು ಇದ್ದ ಕುರುಹನು ಕೆಡೆದು
ಬದ್ಧ ಪಂಥಗಳ ನಿರ್ವಾಣ ! ಮಾಡುವುದು
ಶುದ್ಧ ಮಾರ್ಗಿಯ ಲಕ್ಷಣವು !೧೩!
ಒಂದು ಎರಡೆಂಬುದನು ಸಂದಿಲದದ್ವೈತವನು
ಗೊಂದಲದ ಬಂಧ ಸೂತ್ರವನು ! ಹಿಡಿದೆಳೆದು
ಹಿಂದೆ ಸರಿಸಿದನು ಪ್ರಭುದೇವ !೧೪!
ಆಗಿದ್ದು ಸ್ಥಾವರವು ಆಗುವುದು ಜಂಗಮವು
ಸಾಗದ ಕಾಲ ತತ್ವಗಳ ! ಪುಡಿಮಾಡಿ
ಯೋಗಿಯಾಗುವುದೆ ನಿರಶನವು !೧೫!
ಕುರುಹು ಸೃಜಿಸಿದ ಅರುಹ ಹುರಿದು ಹಾಕಲು ಬೇಕು
ಮರುಳತನದದನು ಅಳಿಬೇಕು ! ಪ್ರತಿಮೆಯ
ಪರಮತನ ಸುಟ್ಟುಬಿಡಬೇಕು !೧೬!
ಸಾವಿನೆದುರಿಸಿ ನಿಲುವ ಭಾವ ದಗ್ಧತಾ ಕ್ರಿಯೆಯು
ಸ್ವಾವಲಂಬನೆಯ ನಿಜತತ್ವ ! ಅದನರಿತು
ಭಾವಿಸೊಡಗೂಡು ತಪ್ಪದಲೆ !೧೭!
ಆರೂಢ ಸಿದ್ಧರಲಿ ಬೇರೆ ಗುರುನಾಥರಲಿ
ಸೇರಿ ಅವಧೂತ ಸೂಫಿಗಳ ! ಸಂಗದಲಿ
ಚಾರುತರದಾಟ ಆಡಿಹನು !೧೮!
***
ಉಪದೇಶವಿಲ್ಲಿಲ್ಲ ಉಪಮಾನ ಮೊದಲಿಲ್ಲ
ತಾರ್ಕಿಕದ ತತ್ವದ್ಹಂಗಿಲ್ಲ ! ಭಾಷೆಯ
ಕೀಲಿ ಕೈಗಳಿಗೆ ನಿಲುಕಲ್ಲ !೧೯!
ಒಪ್ಪಿತದ ಹುಸಿನೆಲೆಯ ನೆಪ್ಪನ್ನೆ ಅಳುಕಿಸಿ
ದಪ್ಪನೆಯ ಚಿಪ್ಪು ಕರಗಿಸಿ ! ಬೆಡಗನ್ನು
ಅಪ್ಪಿಕೊಳ್ಳುವನು ಪ್ರಭುದೇವ !೨೦!
ಆಕರದ ಮಾದರಿಯ ಚೌಕಟ್ಟು ಇಲ್ಲಿಲ್ಲ
ಲೋಕದ ಹಂಗು ಮೊದಲಿಲ್ಲ ! ಅಲ್ಲಮನ
ತೂಕದ ನಡೆಯೆ ವಿಸ್ಮಯವು !೨೧!
ಪುಸ್ತಕದಿ ದೊರೆಯದು ಮಸ್ತಕದಿ ಉಳಿಯದು
ಶಿಸ್ತು ಕಟ್ಟಳೆಗೆ ಒಲಿಯದು ! ಅಲ್ಲಮನ
ಮಿಕ್ಕು ಮೀರಿದ ಮಾರ್ಗವು !೨೨!
ಇಲ್ಲದೇ ಏನೇನು ಎಲ್ಲವೂ ಆಗುವ
ಬಲ್ಲಿತವ ಅರಿತ ನಗೆಗೇಡಿ ! ಅಲ್ಲಮನ
ಸಲ್ಲಲಿತ ಮಾರ್ಗ ಬೆಡಗಿನದು !೨೩!
ಸುಳ್ಳು ಸಂರಚನೆಗಳ ಗೊಳ್ಳುಹೊಟ್ಟನು ತೂರಿ
ಬಳ್ಳದಲಿ ಅಡಗಿ ಕುಳಿತಿರುವ ! ಬಯಲನ್ನು
ಮೆಲ್ಲುವರು ಸತ್ಯ ಮಾರ್ಗಿಗಳು !೨೪!
***
ಎಲ್ಲ ದೂರಕೆ ಸರಿಸಿ ಇಲ್ಲವಾಗುವದರಿತು
ನಿಲ್ಲಲು ಬೇಕು ಬಯಲಿನ ! ನಟ್ಟ ನಡು
ಗೆಲ್ಲಲು ಬೇಕು ಬಂಧನವ !೨೫!
ಅರಿತವಗೆ ಮಾತಿಲ್ಲ ಬರಿಮಾತಿಗರಿವಿಲ್ಲ
ಪರಮ ಯಾನಕ್ಕೆ ಆದ್ಯಂತ ! ಮೊದಲಿಲ್ಲ
ಸರಳತೆ ನಡತೆ ಸುಲಭಲ್ಲ !೨೬!
ಹಸಿವು ಆದರೆ ಮುದ್ದಿ ಬಸಿರು ತುಂಬಲು ನಿದ್ದಿ
ಬೆಸೆಯದಿರಬೇಕು ಅದನಿದನು ! ಕಾಯಕಕೆ
ಕೆಸರು ಅಂಟಿಸದೆ ನಡಿಬೇಕು !೨೭!
ಇರುವೆಯ ತೆರದಲ್ಲಿ ಮರಹತ್ತಿ ಉಣಬಹುದು
ಗರಿಹಕ್ಕಿಯಾಗಿ ನೇರಫಲ ! ಮೆಲಬಹುದು
ಹಿರಿದು ಕಿರಿ ಎಂಬುದುಲ್ಲಿಲ್ಲ !೨೮!
ಧರುಮ ಎಂಬುದು ಹೂವು ಸರುವರಿಗೆ ದಕ್ಕುವುದು
ಪರಮ ಪಕೃತಿಯ ಕೊಡುಗೆಯು ! ಮರೆಯದು
ಅರಳಿ ನಗುವುದನು ಎಂದೆಂದು !೨೯!
ಗುರಿಯ ತೋರುವ ಗುರುವು ಬರಲಾರ ನಮ್ಮೊಡನೆ
ಇರಲಾರ ಕಟ್ಟ ಕಡೆತನಕ ! ಅವರವರೆ
ಸರಿದಾರಿ ಕಂಡು ನಡಿಬೇಕು !೩೦!
***
ತೋರು ಬೆರಳದು ಮಾತ್ರ ದಾರಿಯನು ತೋರದು
ಮೇರು ಗುರಿಯನ್ನು ತೋರುವುದು ! ಅದನರಿತು
ದಾರಿಯನು ಕಂಡುಕೊಳಬೇಕು !೩೧!
ಹರಿವ ಹೊನಲನು ತಡೆವ ದುರಿತ ಭಾಷೆಯ ತೊಡೆದು
ಗುರಿಯೆಡೆಗೆ ಹೆಜ್ಜೆ ಇಡಬೇಕು ! ನುಡಿಜಾಣ್ಮೆ
ಮರಣದ ಗಂಟೆ ಮಾರ್ಗಿಗೆ !೩೨!
ಭಾಷೆಯಲಿ ಸಿಗುತಿರುವ ಕೋಶಕೋಟಿಯ ಶಬ್ದ
ಖಾಸದನುಭವಕೆ ಅಡ್ಡಿಯು ! ಇದು ಸತ್ಯ
ಮೋಸದಾಟವನು ಅರಿಬಲ್ಲ !೩೩!
ಚಂದದ ಕಲ್ಪನೆಯ ಬಂಧನಕೆ ಸಿಲುಕಿಹೆವು
ಕುಂದಿಸುತ ಗಾಢ ಗ್ರಹಿಕೆಯನು ! ಕಳಚುತ್ತ
ಮುಂದೆ ಸಾಗುವುದು ಉಚಿತವು !೩೪!
ಅಕ್ಕರವ ಕಲಿತವನು ಉಕ್ಕಿನಲಿ ಮೆರೆಯುವನು
ಲೆಕ್ಕ ಮೀರಿದ ವಾದದಲಿ ! ಮುಳುಗುವನು
ಸಕ್ಕರೆಯ ಸವಿಯುಣದೆ ಹೋಗುವನು !೩೫!
ಆದುದರ ಚರಿತೆಯ ವಾದದಲಿ ಸಿಕ್ಕವನು
ಸಾಧಿಸುವ ಆಗು ಮರೆಯುವನು ! ಅವನಿಗೆ
ಬೋಧನೆಯ ಹುಚ್ಚು ಅನುಗಾಲ !೩೬!
***
ನೋವು ನಲಿವೆಂದರಿವ ಭಾವ ದಗ್ಧವ ಮಾಡಿ
ಹೂವು ಸಹಜದಲಿ ತಂತಾನೆ ! ಅರಳುವ
ಜೀವ ನಡೆಮಾರ್ಗ ನಿಜಬಯಲು !೩೭!
ಬಾಟಲಿಯ ಒಳಗಿನ ಬಾತುಕೋಳಿಯ ಹಿಡಿದು
ದಾಟಿಸಲು ಬೇಕು ಸಾಯಿಸದೆ ! ಬಾಟಲಿಯ
ಮಾಟ ಒಡೆಯದೆ ಜಾಣ್ಮೆಯಲಿ !೩೮!
ಬಾಟಲಿಯ ಒಳಗೆ ತಾ ಬಾತುಕೋಳಿಯ ಇರಿಸಿ
ಕೂತು ಕೊಂಡಿರುವ ಮನಸು ಪರಿ ! ಹರಿಯದೆ
ಬಾತು ತಾ ಹೊರಗೆ ಬರಲಾರ್ದು !೩೯!
ಹೇಳೊ ಸಂಗತಿಯಲ್ಲ ಕೇಳುಮಾತದು ಅಲ್ಲ
ಹೇಳು ಕೇಳಿಕೆಯ ಗಡಿದಾಟಿ ! ಅನುಭವದ
ಆಳಕಿಳಿಬೇಕು ಸಹಜದಲಿ !೪೦!
ತುದಿಯೆರಡು ಇಲ್ಲದ ಮಧ್ಯಮವ ಹಿಡಿದವನು
ಸುಧೆಯ ಸವಿರುಚಿಯ ಮೀಯುವನು ! ಬಂಧನದ
ಕುದಿಯನ್ನು ಅಳಿಸಿ ಹಾಕುವನು !೪೧!
ಏನೇನು ಇಲ್ಲದ ಧ್ಯಾನದ ನಿಜ ನೆಲೆಯು
ಮೌನದ ಸೀಮೆ ಮೀರುವುದು ! ಇದ್ದುದನು
ಕಾಣದೂರಿಗೆ ತಳ್ಳುವುದು ! ೪೨!
***
ಯಾವ ಯೋಚನೆ ಚೂರು ಭಾವದಲಿ ಇರಬಾರ್ದು
ಗಾವುದ ದೂರಕೆ ಎಸೆಬೇಕು ! ಚಣಚಣಕು
ದೇವ ಯೋಜಕನ ನೆನೆಬೇಕು !೪೩!
ಇಲ್ಲವೆನುವುದು ದೂರ ಬಲ್ಲೆವೆನುವುದು ಭಾರ
ಸಲ್ಲ ಇವು ಎರಡು ಪಥಿಕನಿಗೆ ! ಹೊರಬಾರ್ದು
ಖುಲ್ಲತನ ಹೆರುವ ಚರಿತೆಯನು !೪೪!
ಎಲ್ಲವನು ಕಳಚಿಟ್ಟು ಇಲ್ಲದವನಾಗುವುದು
ಸಲ್ಲದದು ಬುದ್ಧಿ ಸಂಚಯಕೆ ! ಅದಕಾಗಿ
ಗುಲ್ಲು ಮಾಡದಲೆ ನಡೆಮುಂದೆ !೪೫!
ಹುಟ್ಟಿಲ್ಲದಲ್ಲಮನ ಕಟ್ಟಿಬಂಧಿಸ ಬಹುದೆ
ಮುಟ್ಟವು ಶಬ್ದ ಬಯಲಿಗನ ! ಸೂತಕವು
ತಟ್ಟುವುದು ಅರ್ಥ ಭಾವಕ್ಕೆ !೪೬!
ದೇವನು ಅವನಲ್ಲ ದೇವಸುತ ತಾನಲ್ಲ
ದೇವದೂತನೂ ಮೊದಲಲ್ಲ ! ಪಾಮರನು
ಭಾವ ನಿರ್ವಾಣ ಸಾಧಕನು !೪೭!
ನುಡಿಯ ರೂಪಕದಡಿ ನಡೆಗೆ ಹೊಸತನ ತರಲು
ಬೆಡಗಿನ ಭಾಷೆ ಬಳಸಿದರು ! ಮಾರ್ಗಿಗರು
ದೃಢದಿ ತತ್ವವನು ಸಾರಿದರು !೪೮!
ಬೆಡಗಿನ ಭಾಷೆಯಲಿ ಬೆಡಗು ತಾ ಹುಟ್ಟುವುದು
ಬೆಳಕಿನ ಕಿರಣ ಹರಡುವುದು ! ಲೋಕದ
ಒಳಗಣ್ಣ ಪೊರೆಯ ಕಳಚುವುದು !೪೯!
ಸೃಷ್ಟಿವಾದವು ಇಲ್ಲ ದೃಷ್ಟಿವಾದವು ಇಲ್ಲ
ಪುಷ್ಟಿ ಅವಲಂಬಿ ಮೊದಲಿಲ್ಲ ! ಅಲ್ಲಮನ
ದೃಷ್ಟ ವಚನಗಳ ಒಡಲಲ್ಲಿ ! ೫೦!
ಧ್ಯಾನ ಸೂತಕವುಂಟು ಮೌನ ಸೂತಕವುಂಟು
ಗಾನ ಸಂಗೀತದೊಳಗುಂಟು ! ಲಿಂಗದಲಿ
ನ್ಯೂನವಾಗುವುದು ಸೂತಕವು ! ೫೧!
***"
ಸರಹಪಾದ
ತೆರವು ಇದ್ದರೆ ಮನದಿ ಅರಿವು ಒಳಸೇರುವುದು
ಗುರುವಿನ ಕರುಣೆ ದೊರೆಯುವುದು ! ಜೀವನದಿ
ಸರಹನ ದೋಹೆ ಯಾನದಲಿ !೧!
ಸಹಜಯಾನದ ನೆಲೆಯ ಮಹಿಮೆಯನು ಅರುಹುತ್ತ
ಇಹದ ಪರಿಮಳವ ಸಾರಿದನು ! ಮಾದರಿಯ
ಚಹರೆ ಚಿತ್ತಾರ ಕದಡಿದನು !೨!
ಪರಲೋಕ ಮೋಹವನು ಹರಿಗಡಿದು ಲೌಕಿಕದ
ಪರಮ ಮೌಲ್ಯವನು ತೋರಿದ ! ಮಾಸಿದ್ಧ
ಸರಹಪಾದನನು ನೆನಿಬೇಕು !೩!
ಬಾಣವೆಸೆದಾ ರಮಣಿ ಜ್ಞಾನ ಚಿಂತನ ಗುರುವು
ಧ್ಯಾನಿಸಿದ ಕ್ರಿಯೆಯ ಅರ್ಥವನು ! ಮಾಸಿದ್ಧ
ಪೋಣಿಸಿದ ಎರಡು ಪಾದದಲಿ !೪!
ಇದ್ದ ಜಗದರಿವನ್ನು ಶುದ್ಧ ರೂಪದಿ ಪಡೆದು
ಮದ್ದು ಕಂಡನು ಸಹಜದಲಿ ! ಸರಹನು
ಸಿದ್ಧರ ಸಿದ್ಧ ನಾಗಿಹನು !೫!
ಬಾಣಗಾತಿಯ ಕೈಯ ಜಾಣಸರಹನು ಹಿಡಿದು
ಜ್ಞಾನ ಗಂಗೆಯಲಿ ಮಿಂದನು ! ಅನುಭವದ
ಘನತೇಜ ಕಿರಣ ಹರಡಿದನು !೬!
ಸಬಳಶರ ಕೆತ್ತುವ ಶಬರ ಕನ್ಯೆಯ ಕಂಡು
ಚಬಕ ತಂತ್ರವನು ಅರಿತಂತ ! ಸರಹನು
ಸಬಲ ತತ್ವವನು ಸಾರಿದನು ! ೭!