Tuesday, September 8, 2009

ನೆನಪಿನ ಬುತ್ತಿ ೨

ಇನ್ನೊಂದು ಸ್ವಾರಸ್ಯಕರವಾದ ಸಂಗತಿಯನ್ನು ಇಲ್ಲಿಯೇ ಹೇಳುವುದು ಸೂಕ್ತ.ಅಮ್ಮಬೇರೆ ಯಾರದೋ ಮುಂದೆ ಹೇಳುವಾಗ ಕೇಳಿಸಿಕೊಂಡದ್ದು.ಅವ್ವ ಸಾಯುವಾಗ ಬಾಯಲ್ಲಿ ಎಷ್ಟು ನೀರು ಹಾಕಿದರೂ ಜೀವ ಹೋಗಲಿಲ್ಲವಂತೆ. ಬರಿ ಅಮ್ಮನ ಮುಖವನ್ನೇ ನೋಡುತ್ತಿದ್ದಳಂತೆ. ಯಾರು ಬಾಯಲ್ಲಿ ನೀರು ಹಾಕಿದರೂ ಜೀವ ಹೋಗಲೇ ಇಲ್ಲವಂತೆ. ಕೊನೆಗೆ ಅವ್ವನ ಮುಖವನ್ನು ನೋಡಿ ಅಮ್ಮನೇ ಅರ್ಥ ಮಾಡಿಕೊಂಡಳಂತೆ . `ನನ್ನವು ಸುಳ್ಳು ನಿನ್ನವು ಖರೆ' ಎಂದು ಕೈ ಮೇಲೆ ಕೈ ಹಾಕಿ ಮಾತು ಕೊಟ್ಟಳಂತೆ.(ನನ್ನ ಮಕ್ಕಳು ಸುಳ್ಳು ನಿನ್ನ ಮಕ್ಕಳು ಖರೆ ಎಂದು ಅರ್ಥ) ಆಗ ಜೀವ ತಕ್ಷನ ಹೋಯಿತಂತೆ. ನನ್ನ ಅವ್ವ ನನ್ನ ತಮ್ಮನ ಹೆರಿಗೆಯ ಅನಂತರ ತನ್ನ ಅಣ್ಣ ಸೋಮನಗೌಡನ (ನನ್ನ ಸೋದರಮಾವ )ಜೊತೆಗೆ ಬೇರೆಯಾಗಿ ಹೋಗುವವಳಿದ್ದಳಂತೆ. ಆದರೆ ಅಷ್ಟರಲ್ಲಿಯೇ ಈ ಸಾವು ಬಂದೆರಗಿದೆ! ಮಲತಾಯಿತೊಬ್ಬಳು ತನ್ನ ಮಕ್ಕಳು ಸುಳ್ಳು ನಿನ್ನ ಮಕ್ಕಳು ಖರೆ ಎಂದು ಮಾತು ಕೊಡುವುದು ಸಾಮಾನ್ಯವೆ? ಅಂದು ಅವ್ವನ ಸಾವಿನ ಸಂದರ್ಭದಲ್ಲಿ ಮಾತು ಕೊಟ್ಟಂತೆ ಅಮ್ಮ ಕೊನೆಗಾಲದವರೆಗೂ ಹಾಗೆಯೇ ನಡೆದುಕೊಂಡಳು.ನನ್ನ ಅವ್ವ ಮತ್ತು ಅಮ್ಮನ ಸಂಬಂಧ ಹೇಗಿತ್ತು ಗೊತ್ತಿಲ್ಲ. ಗಂಗವ್ವ ಚಿಗವ್ವನಿಗೆ ಗೊತ್ತಿರಬೇಕು.ಅವಳನ್ನು ಕೇಳಿ ತಿಳಿಯಬೇಕು.

ಅವ್ವನಿಲ್ಲದ ಕೊರತೆ ಅನುಭವಿಸಿದ್ದು ಇತ್ತೀಚೆಗೆ,ನನ್ನ ಅಮ್ಮ ನ ಸಾವಿನ (೧೯೭೯) ಅನಂತರ. ಗೆಳೆಯ ಬಿ. ಎಸ್.ಹಿರೇಗೌಡರ ಮೇಲಿಂದ ಮೇಲೆ ಕೇಳುತ್ತಿದ್ದ, ನಿನಗೆ ನಿಮ್ಮ ಅವ್ವನಿಲ್ಲದ್ದು ಕೊರತೆಯನಿಸುವದಿಲ್ಲವೆ ? ಎಂದು. ನಾನು ಇಲ್ಲವೆಂದೇ ಉತ್ತರ ಕೊಡುತ್ತಿದ್ದೆ. ನನ್ನ ಅಮ್ಮನೇ ಅವ್ವನ ಕೊರತೆ ತುಂಬಿದ್ದಾಳೆ ಎಂದು ಹೇಳುತ್ತಿದ್ದೆ. ನನ್ನ ಅಮ್ಮ ನನ್ನನ್ನು ಬೆಳೆಸಿದ್ದನ್ನು ಕೇಳಿ , ಮನೆಗೆ ಬಂದಾಗ ಕಂಡು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದ. ಅವ್ವನ ಅವ್ವ ತಾಯಿಯ ತಾಯಿ ಅಮ್ಮಹೆಣೆದ ಹಣದ ಚೀಲ ಮೊನ್ನೆ ಸಿಕ್ಕದ್ದು ಇಷ್ಟಕ್ಕೆಲ್ಲ ಕಾರಣ ! ಎರಡೂ ಕಡೆ ಹಣವಿಟ್ಟು ದಾರ ಎಳೆದರೆ ಸಾಕು ಗೊತ್ತಿಲ್ಲದವರಿಗೆ ಮತ್ತೆ ಬಾಯಿ ತೆಗೆಯಲು ಬರುವುದೇ ಇಲ್ಲ .ಅಂತಹ ತಾಂತ್ರಿಕ ಕೌಶಲ್ಯ ಆ ಚೀಲದಲ್ಲಿದೆ. ಅವ್ವನ ನೆನಪನ್ನು ತರುವ ಮತ್ತೆರಡು ವಸ್ತುಗಳೆಂದರೆ ಕಸೂತಿ ಹಾಕಿದ ಒಂದು ವಸ್ತ್ರ ,ಚೀಣಿ ಮಣ್ಣಿನ ಗೊಂಬೆಗಾಗಿ ಹೆಣೆದ ಮುತ್ತಿನ ಪೋಷಾಕು ಮತ್ತು ಮುತ್ತಿನ ಶಿವನ ಪುಟ್ಟಿ.ಕಸೂತಿ ಹಾಕಿದ ವಸ್ತ್ರ ಇದೆ. ಚೀನಿ ಮಣ್ಣಿನ ಗೊಂಬೆ ಎಲ್ಲಿದೆ ಗೊತ್ತಿಲ್ಲ , ಪೋಷಾಕು ಮಾತ್ರ ನನ್ನಲ್ಲಿದೆ. ಮುತ್ತಿನ ಶಿವನ ಪುಟ್ಟಿ ದಾರ ಮತ್ತು ಬಿದಿರು ಕೊಳೆತು ಇಟ್ಟ ಡಬ್ಬಿಯಲ್ಲಿಯೇ ನಾಶವಾಗಿತ್ತು.ನಾನು ಹತ್ತು ಹನ್ನೆರಡು ವರ್ಷ ಅದೇ ಶಿವನ ಪುಟ್ಟಿಯನ್ನು ದೀಪಾವಳಿ ಸಂದರ್ಭದಲ್ಲಿ ಏರಿಸುತ್ತಿದ್ದೆ. ಮುತ್ತಿನ ಶಿವನ ಪುಟ್ಟಿ ಹಾಳಾದದ್ದು ಕಂಡು ಬಹಳ ಯಾತನೆಪಟ್ಟೆ.ಶಿವನ ಪುಟ್ಟಿಯ ಅಳಿದುಳಿದ ಮುತ್ತು ಎಲ್ಲಿವೆಯೋ ಈಗ!ಆದರೆ ಊರಿಂದ ಅವ್ವನ ನೆನಪಿಗಾಗಿ ತಂದ ಒಂದು ಕೆಂಪು ಹವಳದ ಸರ ಈಗಲೂ ನನ್ನಲ್ಲಿವೆ. ಅವ್ವನ ನೆನಪಿಗೆ ಇಷ್ಟಾದರೂ ಬೇಡವೇ?

No comments: