ಅನುಭಾವಿ ಅಕ್ಕ
ಗೊರವನ ಕನಸನು ಕಂಡ ಯೋಗಿನಿ
ವಚನಕೆ ಹಸಿರು ತೋರಣವು !
ಸಾವು ಇಲ್ಲದ ಕೇಡು ಇಲ್ಲದ
ಅಮೃತ ಸುಧೆಯ ಹೂರಣವು !
ಬೆಟ್ಟದ ಮೃಗಕೂ ಸಮುದ್ರ ನೊರೆತೆರೆ-
ಗಂಜಲಾರದ ಸಾಧಕಿಯು !
ಪ್ರಭುವಿನ ಒಲುಮೆಯ ಗಳಿಸಿಕೊಂಡ
ಕದಳಿ ಬನದ ಶೋಧಕಿಯು !
ರಾಜ ಧರ್ಮಕೆ ಲೋಕ ನೀತಿಗೆ
ಶರಣ ದೀಕ್ಷೆಯ ಕೊಟ್ಟವಳು !
ವಿಷಯ ವಾಸನೆ ಹರಿದು ಹಾಕುತ
ಬಯಲ ಬಟ್ಟೆಯ ತೊಟ್ಟವಳು !
ಹಸಿವೆಗಾಗಿ ಭಿಕ್ಷೆಯ ಬೇಡುತ
ತೃಷೆಗೆ ಕೆರೆಜಲ ಕುಡಿದವಳು !
ಶಯನ ವಸತಿಗೆ ಹಾಳು ದೇಗುಲ
ಎನುತ ಆಶ್ರಯ ಪಡೆದವಳು !
ಹಂಸ ಗಿಳಿಗಳ ವನವನು ಸುತ್ತುತ
ಲೋಕವ ಅರಿತಳು ಮಾದೇವಿ !
ಬಸವ ಶರಣರ ಸಂಗದಿ ಬೆರೆಯುತ
ಎತ್ತರಕೇರಿದ ಅನುಭಾವಿ !
ಚಂದ್ರಗೌಡ ಕುಲಕರ್ಣಿ
೨೭-೦೫-೨೦೨೦
No comments:
Post a Comment