Sunday, August 25, 2013

ಹರಿವ ಹಳ್ಳದ ಬೆಡಗು - ಮಿರಗನ ಮಳೆ ಶುಂಟಿ ಕಾಡೆ....೨



ಮಿರಗನ ಮಳೆ - ಶುಂಟಿ ಕಾಡೆ

ಹದಿನಾರೆತ್ತಿನ ಇದಿರು ಗ್ವಾದಲಿಯ ದನದ ಹೊಸಮನೆ. ಮನೆ ತುಂಬ  ಎತ್ತು ಆಕಳು ಕರುಗಳು. ನಾಲ್ಕು ಎತ್ತು, ನಾಲ್ಕಾರು ಹೋರಿಗಳು, ಹಿಂಡುವ ಗಬ್ಬಾದ ಆಕಳುಗಳು, ಮೂರ್ನಾಲ್ಕು ಹೋರಿ ಕರು ಇಲ್ಲವೆ ಹೆಣ್ಣುಕರುಗಳು ಇದ್ದೇ ಇರುತ್ತಿದ್ದವು. ಆಕಳು ಹೆಣ್ಣುಕರು ಹಾಕಿದ್ದರೆ ಮಾತ್ರ ಹಿಂಡಿಕೊಳ್ಳಲು ಒಂದಿಷ್ಟು ಹಾಲು ಸಿಗುತ್ತಿದ್ದವು. ಹೋರಿಕರವಾಗಿದ್ದರೆ ಹಿಂಡಲು ಹೋದಾಗ  ಆಕಳ ಮೊಲೆಯಲ್ಲಿ ಹಾಲು ಇರುತ್ತಿರಲಿಲ್ಲ. ಅಪ್ಪ ರಾತ್ರೋರಾತ್ರಿ ಹೋರಿಕರ ಬಿಚ್ಚಿಬಿಟ್ಟು ಹಾಲು ಕುಡಿಸಿಬಿಟ್ಟಿರುತ್ತಿದ್ದ. "ಶಾಂತವ್ವ, ಹೋರಿಕರ ರಾತ್ರಿ ಹಗ್ಗ ಹರಕೊಂಡು ಮೊಲಿ ಕುಡದಿರಬೇಕು ನೋಡು " ಎಂದು ಸಬೂಬು ಹೇಳುತ್ತಿದ್ದ. ಅಮ್ಮ ಮತ್ತು ನಮಗೆಲ್ಲ ಸುಳ್ಳು ಹೇಳಿ ಹೋರಿಕರ ಮೇಯಿಸುವಷ್ಟು ಕಕಲಾತಿ ಇತ್ತು ಅಪ್ಪನಿಗೆ. ಇದೆಲ್ಲ ಗೊತ್ತಿದ್ದ ಅಮ್ಮ ಸುಮ್ಮನೆ ನಕ್ಕು ಬಿಡುತ್ತಿದ್ದಳು. ಮನೆಯಲ್ಲಿ ಹಾಲು ಹೆಚ್ಚಿಗೆ ಇರದಿದ್ದಾಗ ಮನಸ್ಸಿನಲ್ಲಿಯೇ ಸಿಟ್ಟು ಮಾಡಿಕೊಳ್ಳುತ್ತಿದ್ದಳು. ಮುಂಜಾನೆ ಎದ್ದ ಕೂಡಲೇ ನಾವೆಲರೂ ಅಣ್ಣ ಅಕ್ಕಂದಿರು ಮಾವ ಮತ್ತು ಅಮ್ಮ ಗಂಗಾಳಗಟ್ಟಲೇ ಚಹ ಕುಡಿಯುತ್ತಿದ್ದೆವು. ಬೆಲ್ಲದ ಚಹ ಕುಡಿಯುತ್ತಿದ್ದ ನಮ್ಮ ವರ್ತನೆ ಅಪ್ಪನಿಗೆ ಸರಿ ಬರುತ್ತಿರಲಿಲ್ಲ. ಆದ್ದರಿಂದ ಅಪ್ಪನ ಎದುರಿಗೆ ನಾವ್ಯಾರೂ ಚಹ ಕುಡಿಯುವಂತಿರಲಿಲ್ಲ, ಕುಡಿಯುತ್ತಿರಲಿಲ್ಲ. ಅಪ್ಪ ಊಟಕ್ಕೆ ಬಂದಾಗ ಚಹದ ಡಬರಿ ಒಲೆಮೇಲೆ ಇದ್ದರೆ ಸಿಟ್ಟಾಗುತ್ತಾನೆಂದು ಅಮ್ಮ ಚಹವನ್ನು ಅಕ್ಕನ ಕೈಯಿಂದ ಮುಸುರಿ ನೀರಿಗೆ ಹಾಕಿಸಿಬಿಡುತ್ತಿದ್ದಳು. ಚಿಕ್ಕ ಅಡುಗೆ ಮನೆಯಲ್ಲಿ ಮುಚ್ಚು ಮರೆ ಮಾಡಲು ಆಗುತ್ತಿರಲಿಲ್ಲ. ಹೀಗಾಗಿ ಚಹದ ಆಸೆಗೆ ಅಡುಗೆ ಮನೆ ಮುಂದೆ ಕುಳಿತ ನಮಗೆ ದೊಡ್ಡ ನಿರಾಶೆಯಾಗುತ್ತಿತ್ತು. ಒಳಗೊಳಗೇ ಅಪ್ಪನ ಮೇಲೆ ಸಿಟ್ಟೂ ಬರುತ್ತಿತ್ತು. ಆದರೇನು ಮಾಡುವುದು ಅವನ ಸಿಟ್ಟಿನ ಮುಂದೆ ನಾವೆಲ್ಲರೂ ಅಸಹಾಯಕರು. ಅಪ್ಪನಿಗೆ ಅಮ್ಮ ಹೆದರದೇ ಅಪ್ಪನೇ ಅಮ್ಮನಿಗೆ ಹೆದರುವಂತಾಗಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂಬ ಆಸೆ ಮನದಲ್ಲಿ ಮೂಡಿ ಮಾಯವಾಗುತ್ತಿತ್ತು.

ಚಹ ಕುಡಿಯದ ಅಪ್ಪ ಯಾವಾಗಲಾದರೊಮ್ಮೆ ಕಾಫಿ ಕುಡಿಯುತ್ತಿದ್ದ. ತನಗಾಗಿ ಮಾಡಿದ ಕಾಫಿಯಲ್ಲಿ ನನಗೂ ಪಾಲು ಕೊಡುತ್ತಿದ್ದ. ಮಳೆಯಲ್ಲಿ ತೊಯ್ಸಿಕೊಂಡು ಬಂದಾಗ  ಇಲ್ಲವೆ ಚಳಿಗಾಲದ ಸಾಯಂಕಾಲ ಸಮಯದಲ್ಲಿ ಕಾಫಿ ಬೇಡುತ್ತಿದ್ದ. ಅವನು ಬೇಡುವದಕ್ಕಿಂತ ಮುಂಚೆಯೇ ಅಮ್ಮ ಮುನ್ಸೂಚನೆಯನ್ನರಿತು ಮಾಡಿಕೊಡುತ್ತಿದ್ದಳು ಇಲ್ಲವೆ ಅಕ್ಕನಿಗೆ ಮಾಡಲು ಹೇಳುತ್ತಿದ್ದಳು. ಸುಗ್ಗಿ ಸಮಯದಲ್ಲಿ ರಾತ್ರಿ  ತೆನೆ ತುಳಿಸುವಾಗ, ರಾಶಿ ತೂರುವಾಗ ಕಣಕ್ಕೂ ತರಿಸಿಕೊಳ್ಳುತ್ತಿದ್ದ. ಮನೆಯಿಂದ  ಹಿತ್ತಾಳೆ ಕಿತ್ತಲಿಯಲ್ಲಿ  ತಂದ ಕಾಫಿ ತಣ್ಣಗಾಗುವ ಮುನ್ನವೇ ಕೈಯಲ್ಲಿಯ ಕೆಲಸ ಬಿಟ್ಟು ಕುಡಿಯುತ್ತಿದ್ದ. ಜೊತೆ ಕೆಲಸದವರಿಗೂ ಕುಡಿಯಲು ಕೊಡುತ್ತಿದ್ದ

ಮಿರಗನ (ಮೃಗಶಿರ) ಮಳೆ ಜಿಟಿಜಿಟಿ ಹತ್ತಿ ನೆಗಡಿ ಕೆಮ್ಮು ಬಂದಾಗ , ಬರುವ ಸೂಚನೆ ಕಂಡಾಗ ಶುಂಟಿ ಕಾಡೆ (ಕಷಾಯ) ಕುಡಿಯುತ್ತಿದ್ದ. ಒಮ್ಮೊಮ್ಮೆ ಕಾಡೆ ಬದಲಾಗಿ  ಶುಂಟಿ-ಬೆಲ್ಲ ಜಜ್ಜಿಸಿಕೊಂಡು ತಿನ್ನುತ್ತಿದ್ದ. ಅಂಗಡಿಯಿಂದ ಶುಂಟಿ ತಂದು ಬೆಲ್ಲದ ಕಣ್ಣಿ ಸೇರಿಸಿ ತುದಿಗಟ್ಟಿ ಹಾಸುಗಲ್ಲಿನ ಮೇಲೆ ಗುಂಡುಕಲ್ಲಿನಿಂದ ಜಜ್ಜಿ ತಯಾರಿಸುವ ಕೆಲಸವನ್ನು - ಎಲ್ಲರನ್ನೂ ಬಿಡಿಸಿ ನಾನೇ ಮಾಡುತ್ತಿದ್ದೆಬೆಲ್ಲವೂ ಸಿಗುತ್ತಿತ್ತು. ಚಹ ಕುಡಿದಿದ್ದರೂ ಶುಂಟಿ-ಬೆಲ್ಲ ತಿನ್ನುವ ಚಪಲ ತೀರುತ್ತಿತ್ತು. ಬರೆಯುವ ಓದುವ ಅವಸರವಿದ್ದರೂ ಶುಂಟಿ ಬೆಲ್ಲ ಜಜ್ಜುವ ಅವಕಾಶವನ್ನು ಯಾರಿಗೂ ಬಿಟ್ಟುಕೊಡುತ್ತಿರಲಿಲ್ಲ.

ನಾನು ಆಡಿ ದಣಿದು ರಾತ್ರಿ ಬೇಗನೆ ಮಲಗಿದಾಗ ಅಪ್ಪ ಬಂದು ಮಗ್ಗುಲಲ್ಲಿ ಕೂತುದುಬ್ಬದ ಮೇಲೆ ಕೈಯಾಡಿಸಿ ಕಾಲಿನ ಬೆರಳನ್ನು ಲಟಕ್ಕೆನ್ನಿಸುತ್ತಿದ್ದ. ಸದಾ ದುಡಿದ ಒರಟು ಕೈಗಳ ಬಿಸಿ ಹಿತವೆನಿಸುತ್ತಿತ್ತು. ಮೈಯಲ್ಲಿ ಹುಷಾರಿಲ್ಲದೆ ನೆಗಡಿ-ಜ್ವರ ಬಂದು ಮಲಗಿದಾಗ  ಅಪ್ಪ ೧೫-೨೦ ನಿಮಿಷ ಪಾದ ತಿಕ್ಕಿ ತಲೆ ಒತ್ತಿ ತನ್ನ ಮಮತೆಯನ್ನು ವ್ಯಕ್ತಮಾಡುತ್ತಿದ್ದ. ಆಗ ನನ್ನ ಅವನ ನಡುವೆ ಮಾತು ಕತೆ ಇರುತ್ತಿರಲಿಲ್ಲಸಂವೇದನೆಗಳು ವಿನಿಮಯಗೊಳ್ಳುತ್ತಿದ್ದವು.

ಅಪ್ಪ ಮಲಗುತ್ತಿದ್ದುದು ಬೇಗ. ಮಕ್ಕಳಾದ ನಾವಿನ್ನೂ ಅಂಗಳದಲ್ಲಿ ಆಟವಾಡುತ್ತಿದ್ದಾಗ ಅಪ್ಪ ಹಾಸಿಗೆ ಹಾಸಿ ಕಟ್ಟೆಯ ಮೇಲೆ ಮಲಗಿರುತ್ತಿದ್ದ. ದಣಿದು ಮಲಗಿದ ಅಪ್ಪ ಒಮ್ಮೊಮ್ಮೆ ನನ್ನನ್ನು ಕಾಲು ತುಳಿಯಲು ಕರೆಯುತ್ತಿದ್ದ. ಗೆಳೆಯರೆಲ್ಲ ಮಾತಾಡಿಕೊಂಡು ಒಬ್ಬೊಬ್ಬರು ಒಂದೊಂದು ಕಾಲು ಒತ್ತಿ ಇಲ್ಲವೆ ತುಳಿದು, ಕಾಲ್ಬೆರಳನ್ನು ಲಟಕ್ಕೆನ್ನಿಸಿ ಮತ್ತೆ ಆಟದಲ್ಲಿ ಮಮರೆಯುತ್ತಿದ್ದೆವು. ನಾವು ಆಟ ಬಿಡುವ ಹೊತ್ತಿಗೆ ಅಪ್ಪ ಗೊರಕೆ ಹೊಡೆಯುತ್ತಿದ್ದ.

ಹರಿವ ಹಳ್ಳದ ಬೆಡಗು - ಹಸನ ಹಕ್ಕಿ- ಮೀಸಲು ತಿನಿಸು....೩



ಹಸನ ಹಕ್ಕಿ - ಮೀಸಲು ತಿನಿಸು

ಬೇಗನೇ ಮಲಗಿದ ಅಪ್ಪ ನಸುಕಿನಲ್ಲಿ ಬೇಗನೇ ಏಳುತ್ತಿದ್ದ. ಗಂಟೆಗೆ ಎದ್ದು ಎತ್ತುಗಳಿಗೆ ಹೊಟ್ಟು ಹಾಕಿ, ದನದ ಕಾಲಲ್ಲಿಯ ಶೆಗಣಿ ತೆಗೆದು ಹಕ್ಕಿ ಹಸನು ಮಾಡಿ ಎತ್ತುಗಳಿಗೆ ತಿನಿಸು ತಿನಿಸುತ್ತಿದ್ದ. ರಾತ್ರಿ ಕಲಸಿ ಇಟ್ಟ ಹುರುಳಿ ನುಚ್ಚು-ಹಿಂಡಿಯನ್ನು ಬೇರೆ ಡಬರಿಯಲ್ಲಿ ಎತ್ತು- ಹೋರಿಗಳ ಪ್ರಮಾಣಕ್ಕನುಸಾರವಾಗಿ ಹಾಕಿ ಮುಂದೆ ಕುಳಿತು ತಿನಿಸುತ್ತಿದ್ದ. ಹಾಗೆ ತಿನಿಸುವಾಗ ಪ್ರತಿಯೊಂದರ ಕೂಡ ಮಾತಾಡುತ್ತಿದ್ದ. ಸಿಟ್ಟು ಬಂದಾಗ ಮನುಷ್ಯರನ್ನು ಬಯ್ಯುವಂತೆಯೇ ಬಯ್ಯುತ್ತಿದ್ದ. ಅವು ತಿನ್ನದಿದ್ದರೆ ಹಾಕಿದ ತಿನಿಸಿನಲ್ಲಿ ಏನು ಕಡಿಮೆಯಾಗಿದೆ ಎಂಬುದನ್ನು ತಿಳಿದು ಮೇಯಿಸುತ್ತಿದ್ದ. ರಾತ್ರಿ ನುಚ್ಚನ್ನು ತೋಯಿಸುವಾಗ ಯಾರೂ ಅದನ್ನು ನೋಡುವತಿರಲಿಲ್ಲ. ತೋಯಿಸಿಟ್ಟ ಡಬರಿಗಳು ಸಹ ಯಾರಿಗೂ ಕಾಣಬಾರದೆಂದು  ಚೀಲಹಚ್ಚಿಟ್ಟ ಗಡಂಚಿಯ ಕೆಳಗೆ ಮುಚ್ಚಿಡುತ್ತಿದ್ದ. ತಿನಿಸುವ ವ್ಯಕ್ತಿಯನ್ನು ಬಿಟ್ಟು ಬೇರೆ ಯಾರಾದರೂ ನೋಡಿದರೆ -ಕಣ್ ಬಿಟ್ಟರೆ - ತಿಂದದ್ದು ದನಗಳ ಹೊಟ್ಟೆಗೆ ಹತ್ತುವುದಿಲ್ಲ ಎಂದು ಬಲವಾಗಿ ನಂಬಿದ್ದ. ಒಬ್ಬ ತಾಯಿ ತನ್ನ ಮಗುವಿಗೆ ಸೆರಗು ಮುಚ್ಚಿ ಮೊಲೆ ಕುಡಿಸುವದಕ್ಕೂ ಅಪ್ಪ ದನಗಳಿಗೆ ತಿನಿಸು ತಿನಿಸುವದಕ್ಕೂ ಹೆಚ್ಚು ವ್ಯತ್ಯಾಸವಿರಲಿಲ್ಲನಸುಕಿನಲ್ಲಿ ಎದ್ದ ಮನೆಯವರಾಗಲಿ, ಶೆಗಣಿ ಬಳಿಯಲು ಬಂದ ಯಲ್ಲಪ್ಪ, ಹನಮಂತ(ಕುರುಡ), ಶಿವಪ್ಪನಾಗಲಿ ಅಪ್ಪ ಎತ್ತು ಹೋರಿ ಕರುಗಳಿಗೆ ತಿನಿಸು ತಿನಿಸುವುದನ್ನು ನೋಡಲು ಸಾಧ್ಯವಾಗುತ್ತಿರಲಿಲ್ಲ. ಎಲ್ಲರೂ ಏಳುವುದಕ್ಕಿಂತ ಮುಂಚಿತ  ಅವುಗಳಿಗೆ ತಿನಿಸಿಬಿಟ್ಟಿರುತ್ತಿದ್ದ.  

ರಾತ್ರಿ ಊಟಕ್ಕಿಂತ ಮುಂಚೆ ದನಗಳಿಗೆ ನೀರು ಕುಡಿಸಿ ಮೈ ತಿಕ್ಕಿ, ( ದನದ ಮೈ ತಿಕ್ಕಲೆಂದೇ ಒಣಗಿದ ಹೀರೆ ಕಾಯಿ ಅರ್ಧ ಹೆಚ್ಚಿ ಮಾಡಿದ  ವಿಶಿಷ್ಟ ಸಾಧನ ) ಬಾಲ ಜಗ್ಗಿ ಅವುಗಳ ಸೇವೆ ಮಾಡುತ್ತಿದ್ದ. ಗಳೆ ಹೊಡೆಯುವಾಗ - ಬಿತ್ತುವಾಗ ಎತ್ತುಗಳಿಗೆ ಬಾರಕೋಲಿನಿಂದ ಹೊಡೆದು ಮೈಮೇಲೆ ಗಾಯವಾಗಿದ್ದರೆ, ಬಾರು ಮೂಡಿದ್ದರೆ ಅದನ್ನು ತಿಕ್ಕಿ ಉಪಚರಿಸುತ್ತಿದ್ದ. ಮೈಮೇಲೆ ಒಂದಿಷ್ಟೂ ಕೆಸರು ಹತ್ತುವಂತಿರಲಿಲ್ಲ. ಹೊಡೆದವರಿಗೆ ಹಂಗಿಲ್ಲದೆ ಬಯುತ್ತಿದ್ದ. ಸಿಟ್ಟು ಬಂದು ತಾನೇ ಹೊಡೆದಿದ್ದರೂ ರಾತ್ರಿ ಮೈಮೇಲೆ ಆದ ಗಾಯವನ್ನು ನೋಡಿ ಮರುಗುತ್ತಿದ್ದ. ಪಶ್ಚಾತ್ತಾಪ ಪಡುತ್ತಿದ್ದ.

ಮನೆಯ ಹಕ್ಕಿ ಹೇಗೆ ಪಡಸಾಲೆಯಂತೆ ಸ್ವಚ್ಛವಾಗಿರುತ್ತಿತ್ತೊ ಹಾಗೆ ಹಿತ್ತಲವೂ ಸ್ವಚ್ಛವಾಗಿರುತ್ತಿತ್ತು. ಹಿತ್ತಲಲ್ಲಿಯ ಮೇವು(ಕಣಕಿ) ಹೊಟ್ಟು ಮಳೆಗೆ ಒಂಚೂರು ತೊಯ್ದು ಹಾಳಾಗದಂತೆ ಕಾಳಜಿ ಮಾಡುತ್ತಿದ್ದ. ರೈತರಿಗೆ ಬಿಡುವಿರುವ ಸೋಮವಾರ ದನಗಳ ಮೈತೊಳೆಯುವದಕ್ಕಿಂತ ಮುಂಚೆ ಎತ್ತು ಹೋರಿ ಆಕಳು ಕರಗಳ ಮೈಗೆ ಅಂಟಿದ ಉಣ್ಣೆ ತೆಗೆಯುವ ಕೆಲಸದಲ್ಲಿ ನಿರತನಾಗಿರುತ್ತಿದ್ದ. ನಮ್ಮನ್ನೂ- ಅಣ್ಣ,ಮಾವ ಸಹಿತ ಕೆಲಸಕ್ಕೆ ಹಚ್ಚುತ್ತಿದ್ದ. ದನಗಳ ಉಣ್ಣಿ ಹೆಚ್ಚಾಗಲು ಕರಿಯಮ್ಮನ ಮಾಡ ಮೈಲಿಗೆ ಕಾರಣ ಎಂದು ನಂಬುತ್ತಿದ್ದ. ಗಚ್ಚಿನ ಗ್ವಾದಲಿಯನ್ನು ತೊಳೆದು ಸಿಮೆಂಟಿನಿಂದ ಬಿರುಕುಗಳನ್ನು ಮುಚ್ಚಿ ಇನ್ನಿಲ್ಲದ ಕಾಳಜಿ ಮಾಡುತ್ತಿದ್ದ. ಹಕ್ಕಿಯ ತುಂಬ ಉಣ್ಣಿ ಪುಡಿ ಸಿಂಪಡಿಸುತ್ತಿದ್ದ. ಉಣ್ಣಿ ಹೆಚ್ಚಾಗಿದ್ದರೆ ದನಗಳ ಮೈಗೂ ಉಣ್ಣಿಪುಡಿ ಹಚ್ಚಿ ಬಿಸಿಲಲ್ಲಿ ಕಟ್ಟುತ್ತಿದ್ದ. ದನಗಳು ಮೈ ನೆಕ್ಕಿಕೊಳ್ಳಲಾರದಂತೆ ಬಾಯಿಕಲ್ಲಿ ಕಟ್ಟಿರುತ್ತಿದ್ದ. ಎರಡು ಮೂರು ತಾಸುಗಳ  ಅನಂತರ ಮೈತೊಳೆಯಲು ಬೆಣ್ಣಿಹಳ್ಳಕ್ಕೆ ಹೊಡೆದೊಯ್ಯುತ್ತಿದ್ದ. ಆಳವಿರುವ ಮಡುವಿನಲ್ಲಿ ಈಜಾಡಿಸಿ ದನಗಳ ಮೈ ಹಗುರಾಗುವಂತೆ ಮಾಡುತ್ತಿದ್ದ. ಬಾಯಿಬ್ಯಾನಿ - ಕಾಲ್ಬ್ಯಾನಿ ಬಂದಾಗಲಂತೂ ಹಗಲು ರಾತ್ರಿ ಅವುಗಳೊಂದಿಗೆ ಇರುತ್ತಿದ್ದ.