Wednesday, May 27, 2020

ಅಂತರಂಗದ ರತುನ - ೧೧

ಅಂತರಂಗದ ರತುನ

ಕಳುವನು ಮಾಡದ ಹುಸಿಯನು ನುಡಿಯದ
ಅಂತರಂಗದ ರತುನ !
ಕೇಡಿಲ್ಲದಂತೆ ಒಲಿದು ಹಾಡಿದ
ಲಿಂಗ ಮೆಚ್ಚುವ ವಚನ !

ಸದುವಿನಯದಲಿ ಸವಿನುಡಿಗಳಲಿ
ಕೂಡಲ ಸಂಗನ ಸ್ಮರಣ !
ನಡೆದು ನುಡಿದ ನುಡಿನುಡಿಗಳಲಿ
ಜಂಗಮ ತತ್ವದ ಸ್ಫುರಣ !

ವಚನ ನಾಮಕೆ ಅಮೃತ ತುಂಬಲು
ಪಾವನ ಕಮಲಚರಣ !
ನುಡಿಯ ಮುತ್ತಿನ ಹಾರವೆ ಆದುದು
ಮಾಣಿಕ ದೀಪ್ತಿಯ ರಚನ !

ಜಗಮುಗಿಲಗಲವು ಮಿಗೆಯುಗದಾಳವು
ಕರಸ್ಥಲ ಲಿಂಗದಿ ಲೀನ !
ದೇಹವೆ ದೇಗುಲ ಶರವೆ ಕಳಸವು
ಪಡೆಯಲು ದೇವನ ಕರುಣ !

ಶರಣರ ಸಂಗದಿ ಶಿವಪಥ ಗುರುಪಥ
ಮಾಮನೆ ಅಂತಃಕರುಣ !
ಅನುಭವ ಮಂಟಪ ಸೂಳ್ನುಡಿ ತೇಜವು
ಲೋಕಕೆ ಅಮೃತ ಪಾನ !

ಚಂದ್ರಗೌಡ ಕುಲಕರ್ಣಿ
೯೪೪೮೭೯೦೭೮೭

ಮಾತು ಜ್ಯೋತಿರ್ಲಿಂಗ - ೧೦

ಮಾತು ಜ್ಯೋತಿರ್ಲಿಂಗ

ಕೊಟ್ಟ ಕುದುರೆಯನೇರಿ ಪಳಗಿಸಿ
ಬಟ್ಟ ಬಯಲನೆ ಗಳಿಸಿದ !
ಮಾತು ಜ್ಯೋತಿರ್ಲಿಂಗವಾಗಿಸಿ
ಮನದ ಮೈಲಿಗೆ ಅಳಿಸಿದ !

ಕೋಗಿಲೆ ಹಾಡಿಗೆ ಬೆರಗನು ನೀಡಿತು 
ತಳಿತ ಚಿಗುರಿನ ಮಾಮರ !
ಬೆಟ್ಟ ನೆಲ್ಲಿಗೆ ಉಪ್ಪು ಬೆರೆಯಿತು
ಅಮಿತ ಸವಿರುಚಿ ಸಾಗರ !

ತನುವ ಏರಿಗೆ ಮನವ ಕಟ್ಟುತ
ಪರಮ ಜಲವನು ತುಂಬಿದ !
ಕಂಬ ಕರಗುವ ಹಂಸ ಹಾರುವ
ಜೀವದೊಗಟನು ಬಿಡಿಸಿದ !

 ತೋಟದಾಳದ ಬೇರು ಅಗಿಯಲು
ಮನವ ಗುದ್ದಲಿ ಮಾಡಿದ !
ಬೆಳಕು ಕತ್ತಲೆ ಆನೆ ಸಿಂಹದ
ಬೆಡಗು ಬಿಡಿಸಿ ತೋರಿದ !

ಶರಣ ಸಂಗನ ಬಸವ ಕಟ್ಟಿದ
ಶೂನ್ಯ ಪೀಠವ ಏರಿದ !
ಶಬ್ದ ಸೀಮೆಯ ದಾಟಿ ನಡೆಯುತ
ಗುಹೆಯ ಈಶನ  ಸೇರಿದ !

ಚಂದ್ರಗೌಡ ಕುಲಕರ್ಣಿ
೧೮-೦೫-೨೦೨೦ 

ಕವಿರತ್ನ - ೬

ಕವಿರತ್ನ

ಮುದ್ರೆಯ ಒಡೆದು ಬಳಸಿಬಿಟ್ಟನು
ಸರಸ್ವತಿ ಶಬ್ದ ಭಂಡಾರ !
ಸಿಡಿಲ ಶಕ್ತಿಯ ಸತ್ವವ ತುಂಬುತ
ಕಾವ್ಯ ಕಟ್ಟಿದ ಭರಪೂರ !

ಆದಿಶೇಷನ ಹೆಡೆಯ ರತ್ನವು
ಗದಾಯುದ್ಧ ಕೃತಿಯನ್ನ !
ಪರಿಕಿಪರಾರು ಎಂಟೆದೆ ಬಂಟರು
ಸವಾಲು ಹಾಕಿದ ಕವಿರನ್ನ !

ಜಲಮಂತ್ರವನು ಉಪದೇಶಿಸಿದ
ಇಚ್ಛಾಮರಣಿ ಕಲಿಭೀಷ್ಮ !
ಹಿಂದಡಿಯಿಟ್ಟು ಕೊಳದಲಿ ಅಡಗಿದ
ಬರಲಿ ಎಂದು ಬಲರಾಮ !

ಸಿಂಹ ಗರ್ಜನೆ ಮಾಡುತ ಗುಡುಗಿದ
ಭೀಕರ ಕಾಲ ಭೈರವನು !
ನೀರಲ್ಲಿದ್ದರೂ ಬೆವೆತು ಹೋದನು
ಕುರುಯುವರಾಜ ಕೌರವನು !

ದುಶ್ಶಾಸನನೆದೆ ರಕ್ತವ ಲೇಪಿಸಿ
ಸಿರಿಮುಡಿ ಕಟ್ಟಿದ ಕಲಿಭೀಮ !
ದ್ರೌಪದಿ ಸೇಡಿಗೆ ದುರ್ಯೋಧನನ
ತೊಡೆಗಳ ಮುರಿದ ಉದ್ದಾಮ !

೯-೨-೨೦೨೦

ಬನವಸೆ ಕೋಗಿಲೆ - ೫

ಬನವಸೆ ಕೋಗಿಲೆ

ಮೊದಲ ಮಾಕವಿ ಪಂಪ ರಚಿಸಿದ
ವಿಕ್ರಮಾರ್ಜುನ ವಿಜಯವು !
ದೇಸಿ ಮಾರ್ಗದ ಕಂಪು ಹರಡಿದೆ
ಕನ್ನಡಾಂಬೆಯ ತೇಜವು !

ವ್ಯಾಸ ಭಾರತ ಶರಧಿ ಈಜುತ
ವರದ ಕಾವ್ಯವ ಕಟ್ಡಿದ !
ಮಧುರ ವಚನದಿ ಕತೆಯ ಹೇಳುತ
ರಸಿಕ ಮನವನು ತಟ್ಟಿದ !

ಮಲೆಯ ಬನವಸೆ ನಾಡ ಕೋಗಿಲೆ
ಉಲಿಯೆ ಮಾಮರ ನಂದನ !
ತ್ಯಾಗ ಭೋಗದ ಜೀವ ಜಾಲವೆ
ದುಂಬಿ ಪರಿಮಳ ಚಂದನ !

ಚಲದ ನನ್ನಿಯ ಧರ್ಮ ಸಾಹಸ
ಅಮರ ಪಾತ್ರವ ಕೆತ್ತಿದ !
ಗತದ ದ್ವಾಪರ ಯುಗದ ಕಥನಕೆ
ಚಲನ ಮುದ್ರೆಯ ಒತ್ತಿದ !

ಮನುಜ ಕುಲದ ಮಹತಿ ಸಾರಿದ
ಭೇದ ಭಾವವ ಅಳಿಸುತ !
ಅಣ್ಣ ತಮ್ಮರ ಕದನ ಹೇಳಿದ
ತಿರುಳ ಕನ್ನಡ ಬಳಸುತ !

ಚಂದ್ರಗೌಡ ಕುಲಕರ್ಣಿ
೧೮-೦೫-೨೦೨೦

ವಸುಧಾವಲಯ - ೩

ವಸುಧಾವಲಯ ಕನ್ನಡ

ಪದವನು ಅರಿತು ನುಡಿವ ಜನರನು
ಹೊಗಳಿ ಹಾಡಿದ ಶ್ರೀವಿಜಯ !
ಕುರಿತು ಓದದೆ ಕಾವ್ಯ ಕಟ್ಟುವ
ಪ್ರತಿಭೆಗೆ ಕೊಟ್ಟ ಮನ್ನಣೆಯ !

ಮೊತ್ತಮೊದಲಿಗೆ ಶೋಧಿಸಿಕೊಟ್ಟ
ವಸುಧಾವಲಯ ಕನ್ನಡವ !
ಗೋದಾವರಿಯ ತಟದ ಅಂಚಿಗೆ
ಹಬ್ಬಿದ ನಾಡಿನ ವಿಸ್ತರವ !

ಕಿಸುವೊಳಲಿಂದ್ ಒಕ್ಕುಂದ್ ವರೆಗಿನ
ಕೊಪಣ ಫುಲಿಗೆರೆ ತಿರುಳನ್ನು !
ಕವಿಗೆ ತೋರಿದ ಕಾವ್ಯ ರಚಿಸುವ
ಅನನ್ಯ ಪ್ರತಿಭೆಯ ಕಲೆಯನ್ನು !

ತಿಳಿಸಿಕೊಟ್ಟನು ಕನ್ನಡ ಸಂಸ್ಕೃತ
ಸಹಜ ಬಂಧದ ರೂಪವನು !
ಕಾಲವು ಮರೆತ ಗದ್ಯ ಪದ್ಯದ
ಶ್ರೇಷ್ಠ ಕವಿಗಳ ಕೃತಿಗಳನು !

ಕಾವ್ಯ ಚಿಂತನ ಅಲಂಕಾರಕೆ
ಹಾಕಿದ ರಾಜ ಮಾರ್ಗವನು !
ನಿಜನಾಡವರಿಗೆ ಕವಿ ಓದುಗರಿಗೆ
ಹಂಚಿದ ವಾಙ್ಮಯ ಸಾರವನು !

***
೨೩-೦೫-೨೦೨೦

ಅಕ್ಷರ ಮೇರು - ೨

ಅಕ್ಷರ ಮೇರು

ಬಾವನ್ ಬೆಟ್ಟದ ಹಣೆ ಸಿಂಗರಿಸಿದ
ಶಿಲ್ಪಿ ಅಕ್ಷರ ಮೇರು !
ಪುಷ್ಕರ ಚಕ್ರದ ಉಬ್ಬು ಶಿಲ್ಪವು
ಕಾಲ ಅವಧಿಯ ತೇರು !

ಕಲ್ಲು ಬರಹದಿ ಮೂಡಿ ನಿಂತಿವೆ
ಸುಂದರ ಹತ್ತು ಸಾಲು !
ಕನ್ನಡ ನಾಡಿನ ಕಪ್ಪೆ ಅರಭಟ
ವೀರನ ವರ್ಣನೆ ಪಾಲು !

ನಾಲಿಗೆ ತುದಿಯಲಿ ನಲಿದು ಆಡುವ
ಬೆಡಗಿನ ತ್ರಿಪದಿ ಗಂಗೆ !
ಅಗಸ್ತ್ಯ ತೀರ್ಥದ ತೆರೆಗಳಲುಕ್ಕಿದೆ
ಅಮೃತ ಜಲದ ತುಂಗೆ !

ದಾಮೋದರನು ಶಿಲ್ಪಿಗನಲ್ಲದೆ
ಕವಿ ಲಿಪಿಕಾರನು ಹೌದು !
ಮೆಚ್ಚುವರೆಲ್ಲರು ತ್ರಿಪದಿ ಒಡಲಿನ
ಅದ್ಭುತ ಕಲ್ಪನೆ ಮೇಯ್ದು !

ಬೆಸಗೊಂಡಿಹವು ಭಿನ್ನವಿಲ್ಲದೆ
ಮಾರ್ಗ ದೇಸಿಗಳೆರಡು !
ಅಮರವಾದ ಶಾಸನ ಕಂಡು
ಹೆಮ್ಮೆ ಪಡುವುದು ನಾಡು !

ಚಂದ್ರಗೌಡ ಕುಲಕರ್ಣಿ
೨೪-೦೫-೨೦೨೦

ಕನ್ನಡ ಪರಂಪರೆ - ೧

ಕನ್ನಡ ಪರಂಪರೆ

ಕನ್ನಡ ಜನಪದ ಬೇರನು ಅಗೆಯಲು
ದೇಸಿಗರೊಂದಿಗೆ ಒಡನಾಡು !
ಚಂದದ ತ್ರಿಪದಿಯ ಸೊಗಡನು ಬಗೆಯಲು
ಬಾದಾಮಿ ಬಂಡೆಯ ಹಣೆನೋಡು !

ಶಾಸನ ಚರಿತೆಯ ಹಳಮೆಯ ತಿಳಿಯಲು
ನಾಡಿನ ಉದ್ದಕೂ ಅಲೆದಾಡು !
ನಾಡು ನುಡಿಗರ ಜಾಣ್ಮೆಯ ಸವಿಯಲು
ವಿಜಯನ ಮಾರ್ಗದ ಬಗೆನೋಡು !

ತಾಯ್ನುಡಿ ಪೆಂಪಿನ ಕಂಪಲಿ ಮುಳುಗಲು
ಪಂಪನ ಕಾವ್ಯದಿ ಈಜಾಡು !
ಸಬ್ದ ಭಾಂಡಾರದ ಮುದ್ರೆಯ ಒಡೆಯಲು
ಗದಾಯುದ್ಧದಿ ಬಡಿದಾಡು !

ಸ್ಥಾವರ ಸಳಿದು ಜಂಗಮವಾಗಲು
ಶರಣರ ವಚನದಿ ಓಲಾಡು !
ರಗಳೆ ಷಟ್ಪದಿ ಬೆಡಗಲಿ ಮೀಯಲು
ರಾಘವ ಹರಿಹರೊಡಗೂಡು !

ಕುಮಾರವ್ಯಾಸನ ಪದಪದ ಸವಿಯಲು
ಭಾರತ ಕತೆಯಲಿ ನಲಿದಾಡು !
ಬಯಲಿಗ ಅಲ್ಲಮ ಬೆಡಗನು ಬಿಡಿಸಲು
ಚಾಮರಸನಿಗೆ ತಲೆಬಾಗು !

ರತ್ನಾಕರನ ಶಿಖರವನೇರಲು
ಭರತೇಶನಲಿ ಒಂದಾಗು !
ಜೈಮಿನಿ ಕಥನದ ನಾದದಿ ಮುಳುಗಲು
ಲಕುಮೀಶನಿಗೆ ಶರಣಾಗು !

ಕನಕಪುರಂದರ ಭಕುತಿಯ ಸವಿಯಲು
ಕೀರ್ತನ ಗಾನಕೆ ದನಿಗೂಡು !
ಮಾತು ಮಾತಿನ ಮರ್ಮವನರಿಯಲು
ಸರ್ಜಜ್ಞ ವಚನವನೊಡಗೂಡು !

ಅನುಭಾವ್ದ ಹಾಡಲಿ ಲೀನವಾಗಲು
ಮಹಾಂತ ಗುಡ್ಡದಿ ಅಲೆದಾಡು !
ತತ್ವಪದದ ನಾದದಿ ಮುಳುಗಲು
ಶರೀಫಗಿರಿಯೆಡೆ ಮುಖಮಾಡು !

ಆಟಬಯಲಾಟದ ಸೊಗಸಲಿ ಇಳಿಯಲು
ಜಾತ್ರೆಜಾತ್ರೆಗೆ ಅಲೆದಾಡು !
ಯಕ್ಷಗಾನದ ಮದ್ದಲೆ ಆಲಿಸಿ
ಮಲೆಘಟ್ಟದಲಿ ತಿರುಗಾಡು !

ಗಾರುಡಿ ವರಕವಿ ದತ್ತನ ಕೂಡಲು
ಸಾಧನಕೇರಿಯ ಸುತ್ತಾಡು !
ವಿಚಾರ ಕ್ರಾಂತಿಯ ಯುಗಕವಿ ಬೆರೆಯಲು
ದರ್ಶಿಸು ತಪ್ಪದೆ ಮಲೆನಾಡು !

ಬೆಟ್ಟದ ಜೀವ ಮಣ್ಣಿಗೆ ಮರಳಲು
ಕಾರಂತರಕೈ ಹಿಡಿದಾಡು !
ಮಾಯಾಲೋಕದ ವಿಸ್ಮಯಕಿಳಿಯಲು
ನಿರುತ್ತರದಲಿ ಓಡಾಡು !

ಚಂದ್ರಗೌಡ ಕುಲಕರ್ಣಿ
೨೭-೦೫-೨೦೨೦