Wednesday, May 27, 2020

ಕವಿರತ್ನ - ೬

ಕವಿರತ್ನ

ಮುದ್ರೆಯ ಒಡೆದು ಬಳಸಿಬಿಟ್ಟನು
ಸರಸ್ವತಿ ಶಬ್ದ ಭಂಡಾರ !
ಸಿಡಿಲ ಶಕ್ತಿಯ ಸತ್ವವ ತುಂಬುತ
ಕಾವ್ಯ ಕಟ್ಟಿದ ಭರಪೂರ !

ಆದಿಶೇಷನ ಹೆಡೆಯ ರತ್ನವು
ಗದಾಯುದ್ಧ ಕೃತಿಯನ್ನ !
ಪರಿಕಿಪರಾರು ಎಂಟೆದೆ ಬಂಟರು
ಸವಾಲು ಹಾಕಿದ ಕವಿರನ್ನ !

ಜಲಮಂತ್ರವನು ಉಪದೇಶಿಸಿದ
ಇಚ್ಛಾಮರಣಿ ಕಲಿಭೀಷ್ಮ !
ಹಿಂದಡಿಯಿಟ್ಟು ಕೊಳದಲಿ ಅಡಗಿದ
ಬರಲಿ ಎಂದು ಬಲರಾಮ !

ಸಿಂಹ ಗರ್ಜನೆ ಮಾಡುತ ಗುಡುಗಿದ
ಭೀಕರ ಕಾಲ ಭೈರವನು !
ನೀರಲ್ಲಿದ್ದರೂ ಬೆವೆತು ಹೋದನು
ಕುರುಯುವರಾಜ ಕೌರವನು !

ದುಶ್ಶಾಸನನೆದೆ ರಕ್ತವ ಲೇಪಿಸಿ
ಸಿರಿಮುಡಿ ಕಟ್ಟಿದ ಕಲಿಭೀಮ !
ದ್ರೌಪದಿ ಸೇಡಿಗೆ ದುರ್ಯೋಧನನ
ತೊಡೆಗಳ ಮುರಿದ ಉದ್ದಾಮ !

೯-೨-೨೦೨೦

ಬನವಸೆ ಕೋಗಿಲೆ - ೫

ಬನವಸೆ ಕೋಗಿಲೆ

ಮೊದಲ ಮಾಕವಿ ಪಂಪ ರಚಿಸಿದ
ವಿಕ್ರಮಾರ್ಜುನ ವಿಜಯವು !
ದೇಸಿ ಮಾರ್ಗದ ಕಂಪು ಹರಡಿದೆ
ಕನ್ನಡಾಂಬೆಯ ತೇಜವು !

ವ್ಯಾಸ ಭಾರತ ಶರಧಿ ಈಜುತ
ವರದ ಕಾವ್ಯವ ಕಟ್ಡಿದ !
ಮಧುರ ವಚನದಿ ಕತೆಯ ಹೇಳುತ
ರಸಿಕ ಮನವನು ತಟ್ಟಿದ !

ಮಲೆಯ ಬನವಸೆ ನಾಡ ಕೋಗಿಲೆ
ಉಲಿಯೆ ಮಾಮರ ನಂದನ !
ತ್ಯಾಗ ಭೋಗದ ಜೀವ ಜಾಲವೆ
ದುಂಬಿ ಪರಿಮಳ ಚಂದನ !

ಚಲದ ನನ್ನಿಯ ಧರ್ಮ ಸಾಹಸ
ಅಮರ ಪಾತ್ರವ ಕೆತ್ತಿದ !
ಗತದ ದ್ವಾಪರ ಯುಗದ ಕಥನಕೆ
ಚಲನ ಮುದ್ರೆಯ ಒತ್ತಿದ !

ಮನುಜ ಕುಲದ ಮಹತಿ ಸಾರಿದ
ಭೇದ ಭಾವವ ಅಳಿಸುತ !
ಅಣ್ಣ ತಮ್ಮರ ಕದನ ಹೇಳಿದ
ತಿರುಳ ಕನ್ನಡ ಬಳಸುತ !

ಚಂದ್ರಗೌಡ ಕುಲಕರ್ಣಿ
೧೮-೦೫-೨೦೨೦

ವಸುಧಾವಲಯ - ೩

ವಸುಧಾವಲಯ ಕನ್ನಡ

ಪದವನು ಅರಿತು ನುಡಿವ ಜನರನು
ಹೊಗಳಿ ಹಾಡಿದ ಶ್ರೀವಿಜಯ !
ಕುರಿತು ಓದದೆ ಕಾವ್ಯ ಕಟ್ಟುವ
ಪ್ರತಿಭೆಗೆ ಕೊಟ್ಟ ಮನ್ನಣೆಯ !

ಮೊತ್ತಮೊದಲಿಗೆ ಶೋಧಿಸಿಕೊಟ್ಟ
ವಸುಧಾವಲಯ ಕನ್ನಡವ !
ಗೋದಾವರಿಯ ತಟದ ಅಂಚಿಗೆ
ಹಬ್ಬಿದ ನಾಡಿನ ವಿಸ್ತರವ !

ಕಿಸುವೊಳಲಿಂದ್ ಒಕ್ಕುಂದ್ ವರೆಗಿನ
ಕೊಪಣ ಫುಲಿಗೆರೆ ತಿರುಳನ್ನು !
ಕವಿಗೆ ತೋರಿದ ಕಾವ್ಯ ರಚಿಸುವ
ಅನನ್ಯ ಪ್ರತಿಭೆಯ ಕಲೆಯನ್ನು !

ತಿಳಿಸಿಕೊಟ್ಟನು ಕನ್ನಡ ಸಂಸ್ಕೃತ
ಸಹಜ ಬಂಧದ ರೂಪವನು !
ಕಾಲವು ಮರೆತ ಗದ್ಯ ಪದ್ಯದ
ಶ್ರೇಷ್ಠ ಕವಿಗಳ ಕೃತಿಗಳನು !

ಕಾವ್ಯ ಚಿಂತನ ಅಲಂಕಾರಕೆ
ಹಾಕಿದ ರಾಜ ಮಾರ್ಗವನು !
ನಿಜನಾಡವರಿಗೆ ಕವಿ ಓದುಗರಿಗೆ
ಹಂಚಿದ ವಾಙ್ಮಯ ಸಾರವನು !

***
೨೩-೦೫-೨೦೨೦

ಅಕ್ಷರ ಮೇರು - ೨

ಅಕ್ಷರ ಮೇರು

ಬಾವನ್ ಬೆಟ್ಟದ ಹಣೆ ಸಿಂಗರಿಸಿದ
ಶಿಲ್ಪಿ ಅಕ್ಷರ ಮೇರು !
ಪುಷ್ಕರ ಚಕ್ರದ ಉಬ್ಬು ಶಿಲ್ಪವು
ಕಾಲ ಅವಧಿಯ ತೇರು !

ಕಲ್ಲು ಬರಹದಿ ಮೂಡಿ ನಿಂತಿವೆ
ಸುಂದರ ಹತ್ತು ಸಾಲು !
ಕನ್ನಡ ನಾಡಿನ ಕಪ್ಪೆ ಅರಭಟ
ವೀರನ ವರ್ಣನೆ ಪಾಲು !

ನಾಲಿಗೆ ತುದಿಯಲಿ ನಲಿದು ಆಡುವ
ಬೆಡಗಿನ ತ್ರಿಪದಿ ಗಂಗೆ !
ಅಗಸ್ತ್ಯ ತೀರ್ಥದ ತೆರೆಗಳಲುಕ್ಕಿದೆ
ಅಮೃತ ಜಲದ ತುಂಗೆ !

ದಾಮೋದರನು ಶಿಲ್ಪಿಗನಲ್ಲದೆ
ಕವಿ ಲಿಪಿಕಾರನು ಹೌದು !
ಮೆಚ್ಚುವರೆಲ್ಲರು ತ್ರಿಪದಿ ಒಡಲಿನ
ಅದ್ಭುತ ಕಲ್ಪನೆ ಮೇಯ್ದು !

ಬೆಸಗೊಂಡಿಹವು ಭಿನ್ನವಿಲ್ಲದೆ
ಮಾರ್ಗ ದೇಸಿಗಳೆರಡು !
ಅಮರವಾದ ಶಾಸನ ಕಂಡು
ಹೆಮ್ಮೆ ಪಡುವುದು ನಾಡು !

ಚಂದ್ರಗೌಡ ಕುಲಕರ್ಣಿ
೨೪-೦೫-೨೦೨೦

ಕನ್ನಡ ಪರಂಪರೆ - ೧

ಕನ್ನಡ ಪರಂಪರೆ

ಕನ್ನಡ ಜನಪದ ಬೇರನು ಅಗೆಯಲು
ದೇಸಿಗರೊಂದಿಗೆ ಒಡನಾಡು !
ಚಂದದ ತ್ರಿಪದಿಯ ಸೊಗಡನು ಬಗೆಯಲು
ಬಾದಾಮಿ ಬಂಡೆಯ ಹಣೆನೋಡು !

ಶಾಸನ ಚರಿತೆಯ ಹಳಮೆಯ ತಿಳಿಯಲು
ನಾಡಿನ ಉದ್ದಕೂ ಅಲೆದಾಡು !
ನಾಡು ನುಡಿಗರ ಜಾಣ್ಮೆಯ ಸವಿಯಲು
ವಿಜಯನ ಮಾರ್ಗದ ಬಗೆನೋಡು !

ತಾಯ್ನುಡಿ ಪೆಂಪಿನ ಕಂಪಲಿ ಮುಳುಗಲು
ಪಂಪನ ಕಾವ್ಯದಿ ಈಜಾಡು !
ಸಬ್ದ ಭಾಂಡಾರದ ಮುದ್ರೆಯ ಒಡೆಯಲು
ಗದಾಯುದ್ಧದಿ ಬಡಿದಾಡು !

ಸ್ಥಾವರ ಸಳಿದು ಜಂಗಮವಾಗಲು
ಶರಣರ ವಚನದಿ ಓಲಾಡು !
ರಗಳೆ ಷಟ್ಪದಿ ಬೆಡಗಲಿ ಮೀಯಲು
ರಾಘವ ಹರಿಹರೊಡಗೂಡು !

ಕುಮಾರವ್ಯಾಸನ ಪದಪದ ಸವಿಯಲು
ಭಾರತ ಕತೆಯಲಿ ನಲಿದಾಡು !
ಬಯಲಿಗ ಅಲ್ಲಮ ಬೆಡಗನು ಬಿಡಿಸಲು
ಚಾಮರಸನಿಗೆ ತಲೆಬಾಗು !

ರತ್ನಾಕರನ ಶಿಖರವನೇರಲು
ಭರತೇಶನಲಿ ಒಂದಾಗು !
ಜೈಮಿನಿ ಕಥನದ ನಾದದಿ ಮುಳುಗಲು
ಲಕುಮೀಶನಿಗೆ ಶರಣಾಗು !

ಕನಕಪುರಂದರ ಭಕುತಿಯ ಸವಿಯಲು
ಕೀರ್ತನ ಗಾನಕೆ ದನಿಗೂಡು !
ಮಾತು ಮಾತಿನ ಮರ್ಮವನರಿಯಲು
ಸರ್ಜಜ್ಞ ವಚನವನೊಡಗೂಡು !

ಅನುಭಾವ್ದ ಹಾಡಲಿ ಲೀನವಾಗಲು
ಮಹಾಂತ ಗುಡ್ಡದಿ ಅಲೆದಾಡು !
ತತ್ವಪದದ ನಾದದಿ ಮುಳುಗಲು
ಶರೀಫಗಿರಿಯೆಡೆ ಮುಖಮಾಡು !

ಆಟಬಯಲಾಟದ ಸೊಗಸಲಿ ಇಳಿಯಲು
ಜಾತ್ರೆಜಾತ್ರೆಗೆ ಅಲೆದಾಡು !
ಯಕ್ಷಗಾನದ ಮದ್ದಲೆ ಆಲಿಸಿ
ಮಲೆಘಟ್ಟದಲಿ ತಿರುಗಾಡು !

ಗಾರುಡಿ ವರಕವಿ ದತ್ತನ ಕೂಡಲು
ಸಾಧನಕೇರಿಯ ಸುತ್ತಾಡು !
ವಿಚಾರ ಕ್ರಾಂತಿಯ ಯುಗಕವಿ ಬೆರೆಯಲು
ದರ್ಶಿಸು ತಪ್ಪದೆ ಮಲೆನಾಡು !

ಬೆಟ್ಟದ ಜೀವ ಮಣ್ಣಿಗೆ ಮರಳಲು
ಕಾರಂತರಕೈ ಹಿಡಿದಾಡು !
ಮಾಯಾಲೋಕದ ವಿಸ್ಮಯಕಿಳಿಯಲು
ನಿರುತ್ತರದಲಿ ಓಡಾಡು !

ಚಂದ್ರಗೌಡ ಕುಲಕರ್ಣಿ
೨೭-೦೫-೨೦೨೦



Monday, January 29, 2018



ಕಾಮನಬಿಲ್ಲು

ಬಾನಲಿ ಮೂಡಿದ ಕಾಮನಬಿಲ್ಲು
ಮಳೆಹನಿಯಲ್ಲಿ ನೆಂದು!
ಗಿಡಮರಬಳ್ಳಿ ಹೂವುಗಳಲ್ಲಿ
ಅರಳಿ ನಿಂತಿವೆ ಇಂದು !

ಸಿಡಿಲಿಗೆ ಅದುರಿದ ಕಾಮನಬಿಲ್ಲು
ನವಿಲಿನ ಗರಿಯಲಿ ಬೆರೆತು !
ಸಾವಿರ ಕಣ್ಣಲಿ ಹೊಳೆಯುತ್ತಿರುವುದು
ಆಗಸ ಲೋಕವ ಮರೆತು !

ಬಿಸಿಲಿಗೆ ಕರಗಿದ ಕಾಮನಬಿಲ್ಲು
ಸೇರಿ ಪಾತರಗಿತ್ತಿ !
ಹೂಹೂ ಬನದಲಿ ಅಲೆಯುತ್ತಿರುವುದು
ರೇಶಿಮೆ ಹೊಳಪಿನ ಜ್ಯೋತಿ !

ಚಳಿಯಲಿ ಚದುರಿದ ಕಾಮನಬಿಲ್ಲು
ಮಕ್ಕಳ ಕನಸನು ಸೇರಿ
ನೆಲಮುಗಿಲುದ್ದಕು ವಿಸ್ಮಯ ಸೇತುವೆ
ಕಟ್ಟಿದೆ ಭಾರಿಭಾರಿ !






















ಮಕರ ಸಂಕ್ರಮಣ

ಹಸಿರು ಪೈರಿನ ತೆನೆಯು ತೂಗಿತು
ನೆಲದ ಬಂಡನು ಸವಿಯುತ !
ಪ್ರಾಣಿ ಪಕ್ಷಿಗಳುಂಡು ತಣಿದವು
ತಾಯಿ ಪ್ರೀತಿಯ ನೆನೆಯುತ !

ಗಾಢ ಚಳಿಯದು ಕರಗಿ ಸರಿಯಿತು
ಸೂಸು ಬಿಸಿಲನು ಚಲ್ಲುತ !
ರವಿಯ ಕುಡಿಗಳು ಚಾಚಿ ಮೆರೆದವು
ಬಿಸಲ ಬೇಗೆಯ ಉಸುರುತ !

ಬರಡು ಭಾವದಿ ಚಿಮ್ಮಿ ಚೇತನ
ಕಾವ್ಯ ಹೊನಲನು ಹರಿಸಿತು !
ಕವಿತೆ ಸೊಗಸದು ಲಯದಿ ಹೊಮ್ಮುತ
ರುಚಿಯ ಹಿರಿಮೆಯ ಮೆರೆಸಿತು !

ಹಾಡು ಹಕ್ಕಿಯ ಮಧುರ ಗಾನವು
ಬರೆದು ಬಿಟ್ಟಿತು ಮುನ್ನುಡಿ !
ಎಳ್ಳು ಬೆಲ್ಲದ ಸವಿಯು ಹರಡಿತು
ತಾಯಿ ಒಲುಮೆಯ ಜೇನ್ನುಡಿ !

ಹಳತು ಹೊಸತನು ಬೆಸೆವ ಹಬ್ಬವು
ಖುಷಿಯ ತಂದಿತು ನಾಡಿಗೆ !
ಮಕರ ಸಂಕ್ರಮಣೊಲವು ಹಬ್ಬಿತು
ಮನುಜ ಹೃದಯದ ಬೀಡಿಗೆ !











ಚುಕ್ಕೆ ಗೆಳೆತನ !

ಚುಕ್ಕೆಗಳೆಲ್ಲ ನೆಲಕೆ ಇಳಿದು
ಗೆಳೆಯರಾಗಿ ಬಿಟ್ರೆ !
ಕತ್ತಲೆ ಹೆದರಿಕೆ ಇಲ್ಲವೆ ಇಲ್ಲ
ಕರೆಂಟ ಕೈಯ ಕೊಟ್ರೆ !

ನಮ್ಮ ಜೊತೆಯಲಿ ದಿನವೂ ಬರಲಿ
ಶಾಲೆಯ ಯುನಿಫಾರ್ಮ ತೊಟ್ಟು !
ಮನೆಮನೆಯಲ್ಲಿ ಉಳಿಸ್ಕೊತೀವಿ
ಪ್ರೀತಿ ಗೌರವ ಕೊಟ್ಟು !

ಬೆನ್ನಿಗೆ ಭಾರದ ಚೀಲವ ಹೊತ್ತು
ಅರಿಯಲಿ ನಮ್ಮ ಕಷ್ಟ !
ಕೂಡಿ ಆಡುತ ತೊರೆಯಲಿ ತಮ್ಮ
ತಾರಾಲೋಕದ ಪಟ್ಟ !

ಶಾಲೆ ಮಕ್ಕಳ ಸಾಲಲಿ ನಿಂತು
ಮಾಡಲಿ ಮಧ್ಯಾಹ್ನ ಊಟ !
ಒರಟು ಕಲ್ಲಿನ ನೆಲದಲಿ ಕೂತು
ಕೇಳಿ ಮಾಸ್ತರ ಪಾಠ !

ವಾರ್ಷಿಕ ಪರೀಕ್ಷೆಯಲ್ಲಿ ಕೂತು
ಗಳಿಸಲಿ ಹೆಚ್ಚಿನ ಅಂಕ !
ಸ್ಪರ್ಧೆಯಿಂದ ಕಸಿದುಕೊಳ್ಳಲಿ
ಗೆಳೆಯರ ಮೊದಲನೆ ರ್‍ಯಾಂಕ !












ಏಳ್ಗೆ ಮಂತ್ರ !

ಅಂಜಿ ನಿಂತ್ರೆ ನೌಕೆ ದಡಕೆ
ಸೇರಲಾರದು ಎಂದಿಗು !
ಯತ್ನ ಮಾಡುತಿರುವ ವ್ಯಕ್ತಿ
ಸೋತುದಿಲ್ಲ ಇಂದಿಗು !

ಕಚ್ಚಿ ಕಾಳು ಹಿಡಿದ ಇರುವೆ
ಗೋಡೆ ಏರುವಾಗಲು !
ನೂರು ಬಾರಿ ಜಾರಿ ಬಿದ್ರು
ಹಿಂದೆ ಸರಿಯಲಾರದು !

ಸಾಗರಾಳದಲ್ಲಿ ಮುಳುಗಿ
ಏಳುತಿರುವ ಈಜುಗ !
ಮುತ್ತು ರತ್ನ ಹೆಕ್ಕಿ ತಂದು
ಪಡುವ ತಾನೆ ಸೋಜಿಗ !

ಹತ್ತು ನೂರು ಬಾರಿ ಬಂದ್ರು
ಹೆದರಬೇಡ ಸೋಲಿಗೆ !
ಕೊರತೆ ಅರಿತು ನಿದ್ರೆ ತೊರೆದು
ನುಗ್ಗು ಜಯದ ದಾರಿಗೆ !

ಮಾಡದೇನು ಸುಮ್ಮನಿದ್ರೆ
ಸಿಗದು ಜಯದ ತಂತ್ರವು !
ಸತತ ಯತ್ನ ಮಾಡಬೇಕು
ಇದುವೆ ಏಳ್ಗೆ ಮಂತ್ರವು !



ಕಾಮನಬಿಲ್ಲು

ಬಾನಲಿ ಮೂಡಿದ ಕಾಮನಬಿಲ್ಲು
ಮಳೆಹನಿಯಲ್ಲಿ ನೆಂದು!
ಗಿಡಮರಬಳ್ಳಿ ಹೂವುಗಳಲ್ಲಿ
ಅರಳಿ ನಿಂತಿವೆ ಇಂದು !

ಸಿಡಿಲಿಗೆ ಅದುರಿದ ಕಾಮನಬಿಲ್ಲು
ನವಿಲಿನ ಗರಿಯಲಿ ಬೆರೆತು !
ಸಾವಿರ ಕಣ್ಣಲಿ ಹೊಳೆಯುತ್ತಿರುವುದು
ಆಗಸ ಲೋಕವ ಮರೆತು !

ಬಿಸಿಲಿಗೆ ಕರಗಿದ ಕಾಮನಬಿಲ್ಲು
ಸೇರಿ ಪಾತರಗಿತ್ತಿ !
ಹೂಹೂ ಬನದಲಿ ಅಲೆಯುತ್ತಿರುವುದು
ರೇಶಿಮೆ ಹೊಳಪಿನ ಜ್ಯೋತಿ !

ಚಳಿಯಲಿ ಚದುರಿದ ಕಾಮನಬಿಲ್ಲು
ಮಕ್ಕಳ ಕನಸನು ಸೇರಿ
ನೆಲಮುಗಿಲುದ್ದಕು ವಿಸ್ಮಯ ಸೇತುವೆ
ಕಟ್ಟಿದೆ ಭಾರಿಭಾರಿ !






















ಮಕರ ಸಂಕ್ರಮಣ

ಹಸಿರು ಪೈರಿನ ತೆನೆಯು ತೂಗಿತು
ನೆಲದ ಬಂಡನು ಸವಿಯುತ !
ಪ್ರಾಣಿ ಪಕ್ಷಿಗಳುಂಡು ತಣಿದವು
ತಾಯಿ ಪ್ರೀತಿಯ ನೆನೆಯುತ !

ಗಾಢ ಚಳಿಯದು ಕರಗಿ ಸರಿಯಿತು
ಸೂಸು ಬಿಸಿಲನು ಚಲ್ಲುತ !
ರವಿಯ ಕುಡಿಗಳು ಚಾಚಿ ಮೆರೆದವು
ಬಿಸಲ ಬೇಗೆಯ ಉಸುರುತ !

ಬರಡು ಭಾವದಿ ಚಿಮ್ಮಿ ಚೇತನ
ಕಾವ್ಯ ಹೊನಲನು ಹರಿಸಿತು !
ಕವಿತೆ ಸೊಗಸದು ಲಯದಿ ಹೊಮ್ಮುತ
ರುಚಿಯ ಹಿರಿಮೆಯ ಮೆರೆಸಿತು !

ಹಾಡು ಹಕ್ಕಿಯ ಮಧುರ ಗಾನವು
ಬರೆದು ಬಿಟ್ಟಿತು ಮುನ್ನುಡಿ !
ಎಳ್ಳು ಬೆಲ್ಲದ ಸವಿಯು ಹರಡಿತು
ತಾಯಿ ಒಲುಮೆಯ ಜೇನ್ನುಡಿ !

ಹಳತು ಹೊಸತನು ಬೆಸೆವ ಹಬ್ಬವು
ಖುಷಿಯ ತಂದಿತು ನಾಡಿಗೆ !
ಮಕರ ಸಂಕ್ರಮಣೊಲವು ಹಬ್ಬಿತು
ಮನುಜ ಹೃದಯದ ಬೀಡಿಗೆ !











ಚುಕ್ಕೆ ಗೆಳೆತನ !

ಚುಕ್ಕೆಗಳೆಲ್ಲ ನೆಲಕೆ ಇಳಿದು
ಗೆಳೆಯರಾಗಿ ಬಿಟ್ರೆ !
ಕತ್ತಲೆ ಹೆದರಿಕೆ ಇಲ್ಲವೆ ಇಲ್ಲ
ಕರೆಂಟ ಕೈಯ ಕೊಟ್ರೆ !

ನಮ್ಮ ಜೊತೆಯಲಿ ದಿನವೂ ಬರಲಿ
ಶಾಲೆಯ ಯುನಿಫಾರ್ಮ ತೊಟ್ಟು !
ಮನೆಮನೆಯಲ್ಲಿ ಉಳಿಸ್ಕೊತೀವಿ
ಪ್ರೀತಿ ಗೌರವ ಕೊಟ್ಟು !

ಬೆನ್ನಿಗೆ ಭಾರದ ಚೀಲವ ಹೊತ್ತು
ಅರಿಯಲಿ ನಮ್ಮ ಕಷ್ಟ !
ಕೂಡಿ ಆಡುತ ತೊರೆಯಲಿ ತಮ್ಮ
ತಾರಾಲೋಕದ ಪಟ್ಟ !

ಶಾಲೆ ಮಕ್ಕಳ ಸಾಲಲಿ ನಿಂತು
ಮಾಡಲಿ ಮಧ್ಯಾಹ್ನ ಊಟ !
ಒರಟು ಕಲ್ಲಿನ ನೆಲದಲಿ ಕೂತು
ಕೇಳಿ ಮಾಸ್ತರ ಪಾಠ !

ವಾರ್ಷಿಕ ಪರೀಕ್ಷೆಯಲ್ಲಿ ಕೂತು
ಗಳಿಸಲಿ ಹೆಚ್ಚಿನ ಅಂಕ !
ಸ್ಪರ್ಧೆಯಿಂದ ಕಸಿದುಕೊಳ್ಳಲಿ
ಗೆಳೆಯರ ಮೊದಲನೆ ರ್‍ಯಾಂಕ !












ಏಳ್ಗೆ ಮಂತ್ರ !

ಅಂಜಿ ನಿಂತ್ರೆ ನೌಕೆ ದಡಕೆ
ಸೇರಲಾರದು ಎಂದಿಗು !
ಯತ್ನ ಮಾಡುತಿರುವ ವ್ಯಕ್ತಿ
ಸೋತುದಿಲ್ಲ ಇಂದಿಗು !

ಕಚ್ಚಿ ಕಾಳು ಹಿಡಿದ ಇರುವೆ
ಗೋಡೆ ಏರುವಾಗಲು !
ನೂರು ಬಾರಿ ಜಾರಿ ಬಿದ್ರು
ಹಿಂದೆ ಸರಿಯಲಾರದು !

ಸಾಗರಾಳದಲ್ಲಿ ಮುಳುಗಿ
ಏಳುತಿರುವ ಈಜುಗ !
ಮುತ್ತು ರತ್ನ ಹೆಕ್ಕಿ ತಂದು
ಪಡುವ ತಾನೆ ಸೋಜಿಗ !

ಹತ್ತು ನೂರು ಬಾರಿ ಬಂದ್ರು
ಹೆದರಬೇಡ ಸೋಲಿಗೆ !
ಕೊರತೆ ಅರಿತು ನಿದ್ರೆ ತೊರೆದು
ನುಗ್ಗು ಜಯದ ದಾರಿಗೆ !

ಮಾಡದೇನು ಸುಮ್ಮನಿದ್ರೆ
ಸಿಗದು ಜಯದ ತಂತ್ರವು !
ಸತತ ಯತ್ನ ಮಾಡಬೇಕು
ಇದುವೆ ಏಳ್ಗೆ ಮಂತ್ರವು !